ಪುಣೆ: ಕೇಂದ್ರ ಸರ್ಕಾರದ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಬ್ರಿಟಿಷರ ರೌಲಟ್ ಕಾಯ್ದೆಗೆ ಹೋಲಿಕೆ ಮಾಡಿ ನಟಿ-ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್ ಕಟುವಾಗಿ ಟೀಕಿಸಿದ್ದಾರೆ.
ಮೊದಲನೇ ಮಹಾಯುದ್ಧದ ಬಳಿಕ ಭಾರತದಲ್ಲಿ ಅಶಾಂತಿ ಹರಡುತ್ತಿದೆ ಎಂದು ಬ್ರಿಟಿಷರಿಗೆ ತಿಳಿದಿತ್ತು. ಹೀಗಾಗಿ 1919 ರಲ್ಲಿ ರೌಲಟ್ ಕಾಯ್ದೆಯಂತಹ ಕ್ರೂರ ಕಾನೂನನ್ನು ಜಾರಿಗೆ ತಂದರು. 1919 ರ ರೌಲಟ್ ಕಾಯ್ದೆ ಹಾಗೂ 2019 ರ ಪೌರತ್ವ (ತಿದ್ದುಪಡಿ) ಕಾಯ್ದೆ ಇವೆರಡೂ ಭಾರತದ ಇತಿಹಾಸದಲ್ಲಿ ಕರಾಳ ಕಾನೂನುಗಳಾಗಿವೆ ಎಂದು ಊರ್ಮಿಳಾ ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಪುಣ್ಯಸ್ಮರಣೆಯ ಅಂಗವಾಗಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ ಸಿಎಎ,ಎನ್ಆರ್ಸಿ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಊರ್ಮಿಳಾ, ಮಹಾತ್ಮಾ ಗಾಂಧಿ ಹಿಂದುತ್ವದ ನಿಜವಾದ ಅನುಯಾಯಿಯಾಗಿದ್ದರು, ಗಾಂಧಿಯನ್ನ ಗುಂಡಿಕ್ಕಿ ಹತ್ಯೆಗೈದ ನಾಥೂರಾಮ್ ಘೋಡ್ಸೆ ಕೂಡ ಒಬ್ಬ ಹಿಂದೂ. ಸಿಎಎ ಬೆಂಬಲಿಸುವವರು ಹಾಗೂ ಅವರ ನಾಯಕರು ರಾಜ್ಘಾಟ್ಗೆ ಹೋಗಿ ಗಾಂಧಿಗೆ ಗೌರವ ಸಲ್ಲಿಸಬೇಕಾಗಿದ್ದು, ಗಾಂಧೀಜಿಯವರ ಸಿದ್ಧಾಂತ ಇನ್ನೂ ಜೀವಂತವಾಗಿದೆ ಎಂಬುದನ್ನು ಎತ್ತಿ ಹೇಳುತ್ತದೆ ಎಂದರು.
ರೌಲಟ್ ಕಾಯ್ದೆ ಹಾಗೂ ಪೌರತ್ವ ಕಾಯ್ದೆಯನ್ನು ಕಪ್ಪು ಚುಕ್ಕೆಯಾಗಿ ಇತಹಾಸ ನೆನಪಿಸಿಕೊಳ್ಳುತ್ತದೆ. ಸಿಎಎ ಬಡವರ ವಿರೋಧಿಯಾಗಿದ್ದು, ನಮ್ಮ ಭಾರತೀಯತ್ವಕ್ಕೆ ಇದು ಸವಾಲಾಗಿದೆ. ಹಾಗಾಗಿ ಈ ಕಾಯ್ದೆಯನ್ನ ನಾವು ಒಪ್ಪುವುದಿಲ್ಲ ಎಂದು ಊರ್ಮಿಳಾ ಖಡಕ್ ಮಾತುಗಳನ್ನಾಡಿದ್ದಾರೆ.