ನವದೆಹಲಿ: ರಾಮಮಂದಿರ ನಿರ್ಮಾಣಕ್ಕೆ ದಿನಾಂಕ ನಿಗದಿ ಮತ್ತು ನಿರ್ಮಾಣ ಕಾರ್ಯಕ್ಕೆ ಇಬ್ಬರು ಟ್ರಸ್ಟಿಗಳನ್ನು ನೇಮಿಸುವುದೂ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲು ಇಂದು ರಾಮಮಂದಿರ ಟ್ರಸ್ಟ್ ಮೊದಲ ಸಭೆ ನಡೆಸಲಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕಾರ್ಯ ಸೂಚಿಯಂತೆ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ರಾಮ ಜನ್ಮಭೂಮಿ ದೇವಾಲಯದ ನಿರ್ಮಾಣ ವೇಳಾಪಟ್ಟಿಯನ್ನು ಟ್ರಸ್ಟ್ ಅಂತಿಮಗೊಳಿಸುವ ನಿರೀಕ್ಷೆಯಿದೆ. ದೇವಾಲಯ ನಿರ್ಮಾಣಕ್ಕಾಗಿ ಹಣ ಹೊಂದಿಸುವ ವಿಧಾನವನ್ನು ಸದಸ್ಯರು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇವಾಲಯದ ನಿರ್ಮಾಣಕ್ಕಾಗಿ ಸಾಮಾನ್ಯ ಜನರ ಮೂಲಕ ದೇಣಿಗೆಗಳನ್ನು ಹೇಗೆ ಸಂಗ್ರಹಿಸಬೇಕು ಎಂಬ ಬಗ್ಗೆ ಟ್ರಸ್ಟ್ ಸದಸ್ಯರು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ವಿವಾದ ರಹಿತವಾಗಿರಿಸುವುದರತ್ತ ಗಮನ ಹರಿಸಲಾಗಿದೆ.
'ದೇಗುಲದ ಅಡಿಪಾಯಕ್ಕೆ ಕಲ್ಲು ಹಾಕಲು ಸರಿಯಾದ ಮುಹೂರ್ತ ಮತ್ತು ದೇವಾಲಯವನ್ನು ಪೂರ್ಣಗೊಳಿಸಲು ಟೈಮ್ಲೈನ್ ಅನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. ನಿರ್ಮಾಣ ಕಾರ್ಯಗಳು ಮುಂದುವರೆದಂತೆ ರಾಮ ಲಲ್ಲಾ ವಿಗ್ರಹವನ್ನು ಸೂಕ್ತವಾಗಿ ಇಡುವುದು ಕಾರ್ಯಸೂಚಿಯಲ್ಲಿದೆ' ಎಂದು ಮೂಲಗಳು ತಿಳಿಸಿವೆ.
ಇನ್ನು ಈ ಸಭೆಯಲ್ಲಿ ಉತ್ತರ ಪ್ರದೇಶದ ಸಭೆಯಲ್ಲಿ ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವನಿಶ್ ಕುಮಾರ್ ಅವಸ್ಥಿ ಕೂಡ ಭಾಗವಹಿಸಲಿದ್ದಾರೆ.