ಮನುಷ್ಯನ ಜೀವನದಲ್ಲಿ ಭೂಮಿ ತಾಯಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾಳೆ. ಮನುಷ್ಯ ಜೀವಿಯ ಜೊತೆಗೆ ಪ್ರಾಣಿಗಳು ಮತ್ತು ಹಕ್ಕಿಗಳಿಗೂ ಆಕೆ ಆಹಾರ ಒದಗಿಸುತ್ತಾಳೆ. ಫಲವತ್ತಾದ ಭೂಮಿ ಹೆಚ್ಚು ಆಹಾರ ಧಾನ್ಯಗಳನ್ನು ಒದಗಿಸುತ್ತದೆ. ಆದರೆ, ಹಲವಾರು ಕಾರಣಗಳಿಗಾಗಿ ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಇದಕ್ಕೆ ಮಣ್ಣಿನ ಸವಕಳಿ ಸೇರಿದಂತೆ ಅನೇಕ ಸಮಸ್ಯೆಗಳು ಕಾರಣವಾಗುತ್ತಿವೆ.
ವಿಶ್ವ ಸಂಸ್ಥೆ 2013ರಿಂದ ಪ್ರತಿ ವರ್ಷ ಡಿಸೆಂಬರ್ನಲ್ಲಿ ಭೂಮಿ ದಿನವನ್ನು ಆಚರಿಸುತ್ತಾ ಬಂದಿದೆ. ಈ ವರ್ಷ ಮಣ್ಣಿನ ಸವಕಳಿಯನ್ನು ತಡೆಯುವ ಮೂಲಕ ಭೂಮಿಯ ಮೇಲಿರುವ ಮನುಕುಲ ಹಾಗೂ ಜೀವಜಗತ್ತನ್ನು ರಕ್ಷಿಸುವ ಉದ್ದೇಶದಿಂದ ಘೋಷಣೆ ರೂಪಿಸುವಲ್ಲಿ ಅದು ನಿರತವಾಗಿದೆ. ಮಣ್ಣಿನ ಸವಕಳಿಯಿಂದ ಜಗತ್ತಿನಾದ್ಯಂತ ಪ್ರತಿಕೂಲ ಪರಿಣಾಮಗಳಾಗುತ್ತಿದ್ದು, ಮನುಕುಲದ ಪ್ರಗತಿ ಕುಸಿಯುತ್ತಿದೆ.
ಅಂತಾರಾಷ್ಟ್ರೀಯ ಆಹಾರ ಹಾಗೂ ಕೃಷಿ ಸಂಸ್ಥೆಯ ನಿರ್ದೇಶಕ ಪ್ರೊಫೆಸರ್ ಮರಿಯಾ ಸಾಲಿನಾ ಅಮೆಡೊ ಅವರ ಹೇಳಿಕೆ ಪ್ರಸ್ತುತ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಹಲವಾರು ದೇಶಗಳ ಸರ್ಕಾರಗಳು ಮಣ್ಣು ಸವಕಳಿಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸೂಕ್ತ ಯೋಜನೆಗಳನ್ನು ಜಾರಿಗೊಳಿಸಬೇಕಾದ ಅನಿವಾರ್ಯತೆಯನ್ನು ಅವರ ಹೇಳಿಕೆ ಬಿಂಬಿಸಿದೆ.
ಯಾವುದೇ ದೇಶವಿರಲಿ, ಜನರ ಆರೋಗ್ಯಕ್ಕೆ ಫಲವತ್ತಾದ ಭೂಮಿಯೊಂದೇ ಮೂಲಾಧಾರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಮಾನವ ಪ್ರಗತಿಗೆ ಭೂಮಿಯ ಆರೋಗ್ಯವೇ ಮೂಲಾಧಾರ. ಏಕೆಂದರೆ, ಆಗ ಮಾತ್ರ ಸೂಕ್ತ ಸಾಗುವಳಿಯಿಂದ ಗುಣಮಟ್ಟದ ಆಹಾರ ಉತ್ಪಾದಿಸಲು ಸಾಧ್ಯವಾಗಿ ಅಭಿವೃದ್ಧಿ ಹೊಂದಬಹುದು. ಈ ಭೂಮಿಯ ಮೂಲಕವೇ ನಾವು ಶೇಕಡಾ 95ರಷ್ಟು ಆಹಾರವನ್ನು ಹಾಗೂ ಶೇಕಡಾ 99.9ರಷ್ಟು ಕುಡಿಯುವ ನೀರನ್ನು ಪಡೆಯುತ್ತಿರುವುದು. ಇಂಗಾಲವನ್ನು ಮಣ್ಣಿನಲ್ಲಿ ಸ್ಥಿರೀಕರಿಸಿ, ಮಾಲಿನ್ಯವನ್ನು ತಗ್ಗಿಸಿ, ಬೆಳೆಗಳಿಗೆ ನೀರು ಮತ್ತು ಪೋಷಕಾಂಶಗಳನ್ನು ಒದಗಿಸುವ ಮೂಲಕ ಅರಣ್ಯ ಮತ್ತು ಆಹಾರ, ಬಟ್ಟೆ, ಕಟ್ಟಿಗೆ ಮತ್ತು ಔಷಧಗಳನ್ನು ಒದಗಿಸುವ ವ್ಯವಸ್ಥೆಯನ್ನು ಭೂಮಿ ಪೋಷಿಸುತ್ತದೆ.
ಭಾರತದ ಉದ್ದಗಲಕ್ಕೂ ಮಣ್ಣನ್ನು ಬೇಕಾಬಿಟ್ಟಿಯಾಗಿ ಮತ್ತು ಅಪಾಯಕಾರಿಯಾಗಿ ಬಳಸಲಾಗುತ್ತಿದೆ. ರಸಾಯನಿಕಗಳು, ಗೊಬ್ಬರಗಳು ಹಾಗೂ ಕೀಟನಾಶಕಗಳ ಬಳಕೆಯಿಂದ ಭೂಮಿಯಲ್ಲಿ ಅನಗತ್ಯವಾಗಿ ಏರಿಳಿತ ಉಂಟು ಮಾಡಲಾಗುತ್ತಿದೆ. ಅವೈಜ್ಞಾನಿಕ ನೀರು ನಿರ್ವಹಣೆ ಮತ್ತು ಸಾಗುವಳಿಯಿಂದಾಗಿ ಮಣ್ಣು ಮಾಲಿನ್ಯಯುಕ್ತವಾಗುತ್ತಿದೆ. ಇದರಿಂದ ಫಲವತ್ತತೆ ನಷ್ಟವಾಗಿ, ಆಹಾರ ಉತ್ಪಾದನೆ ಕುಸಿಯುತ್ತದೆ. ತಪ್ಪು ಸಾಗುವಳಿ ಪದ್ಧತಿಗಳಿಂದಾಗಿ ದೊಡ್ಡ ಮಟ್ಟದಲ್ಲಿ ಮಣ್ಣು ಸವಕಳಿ ಉಂಟಾಗುತ್ತಿದೆ ಎಂಬುದನ್ನು ಅಂತಾರಾಷ್ಟ್ರೀಯ ಅಧ್ಯಯನಗಳು ತೋರಿಸಿವೆ.
8.26 ಲಕ್ಷ ಹೆಕ್ಟೇರ್ನಷ್ಟು ಮೇಲ್ಮಣ್ಣು ಪದರ ನಾಶವಾಗಿದೆ ಎಂದು ಕೇಂದ್ರ ಮಣ್ಣು ಮತ್ತು ನೀರು ರಕ್ಷಣಾ ಒಕ್ಕೂಟ ಹೇಳಿದೆ. ಪ್ರತಿ ವರ್ಷ 5,334 ಟನ್ ಫಲವತ್ತಾದ ಮಣ್ಣು ಹಾಗೂ 84 ಲಕ್ಷ ಟನ್ ಪೋಷಕಾಂಶಗಳು ಹರಿದುಹೋಗಿ ಉತ್ಪಾದನೆ ಮತ್ತು ಸಾಮರ್ಥ್ಯ ಕುಸಿತಕ್ಕೆ ಕಾರಣವಾಗುತ್ತಿದೆ.
ಮಣ್ಣು ಸವಕಳಿಯು ಆಹಾರ ಸಂಕಷ್ಟಕ್ಕೆ ಕಾರಣವಾಗಲಿದ್ದು, ಗ್ರಾಮೀಣ ಬಡ ಜನರ ಹಣಕಾಸು ಪರಿಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ. ಬರ ಸಮಸ್ಯೆ ಉಲ್ಬಣವಾಗಿ, ಬದುಕು ಅರಸಿಕೊಂಡು ಜನ ಗುಳೆ ಹೋಗಬೇಕಾದ ಪರಿಸ್ಥಿತಿ ತಲೆದೋರಲಿದೆ ಎಂದು ವಿಶ್ವ ಸಂಸ್ಥೆ ಎಚ್ಚರಿಸಿದೆ.
ಮಣ್ಣಿನ ಸವಕಳಿ ಜಗತ್ತಿನಾದ್ಯಂತ ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ, ಅದು ಆಹಾರ ಭದ್ರತೆ ಸಮಸ್ಯೆ ತರಲಿದೆ. ಏಕೆಂದರೆ, ಸವಕಳಿಯಿಂದಾಗಿ ನೀರು ಮತ್ತು ಗಾಳಿಯು ಮಣ್ಣಿನ ಕೆಳ ಪದರಗಳನ್ನು ಪ್ರವೇಶಿಸುವುದು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಬೇರುಗಳ ಬೆಳವಣಿಗೆ ಸ್ಥಗಿತವಾಗಿ, ಆಹಾರ ಉತ್ಪಾದನೆಯು ಶೇಕಡಾ 50% ರಷ್ಟು ಕುಸಿಯುತ್ತದೆ.
ಹಸಿರು ಕ್ರಾಂತಿಯ ಪಿತಾಮಹ ಸ್ವಾಮಿನಾಥನ್ ಅವರು, ಕಡಿಮೆ ಪೋಷಕಾಂಶಗಳನ್ನು ಹೊಂದಿದ ಮಣ್ಣಿನಲ್ಲಿ ಸಾಗುವಳಿ ಮಾಡುವುದರಿಂದ ಝಿಂಕ್ ನಂತಹ ಪೋಷಕಾಂಶ ಕಡಿಮೆ ಇರುವ ದುರ್ಬಲ ಗುಣಮಟ್ಟದ ಆಹಾರ ಉತ್ಪಾದನೆಯಾಗುತ್ತದೆ ಎಂದಿದ್ದಾರೆ. ಅಲ್ಲದೇ, ಇಂತಹ ಆಹಾರ ಸೇವಿಸುವುದರಿಂದ ಜನರ ಆರೋಗ್ಯದ ಮೇಲೆ ಹಲವಾರು ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ ಎನ್ನುತ್ತಾರೆ.
ಒಂದು ಇಂಚು ಅಗಲದ ಮಣ್ಣು ಉತ್ಪಾದನೆಯಾಗಲು ಸಾವಿರಾರು ವರ್ಷಗಳು ಬೇಕು. ಸಸಿಗಳು ಹಾಗೂ ಇತರ ಕೃಷಿ ಸಸ್ಯಗಳನ್ನು ನೆಡುವ ಮೂಲಕ ಶೇಕಡಾ 80 % ರಷ್ಟು ಮಣ್ಣು ಸವಕಳಿಯನ್ನು ತಡೆಗಟ್ಟಬಹುದು. ಜಗತ್ತಿನಾದ್ಯಂತ ಅಂದಾಜು ಶೇಕಡಾ 33 % ರಷ್ಟು ಮಣ್ಣು ಸವಕಳಿಯಾಗಿದೆ. ಮಣ್ಣು ಸವಕಳಿಯಿಂದಾಗಿ ಜಲಾಶಯಗಳ ಸಂಗ್ರಹ ಸಾಮರ್ಥ್ಯ ಕುಸಿಯುತ್ತಿದೆ. ಮಾಲಿನ್ಯದಿಂದಾಗಿ ನೀರಿನ ಗುಣಮಟ್ಟ ತಗ್ಗುತ್ತದೆ. ಇದರಿಂದ ಸರೋವರಗಳಲ್ಲಿರುವ ಜಲಚರಗಳ ಮೇಲೂ ಪರಿಣಾಮ ಉಂಟಾಗುತ್ತದೆ. ಮನುಷ್ಯರು ಮತ್ತು ಪ್ರಾಣಿಗಳು ನೀರಿನ ಕೊರತೆ ಎದುರಿಸಬೇಕಾಗುತ್ತದೆ.
ಮಣ್ಣು ಸವಕಳಿಯು ನಮ್ಮ ರಸ್ತೆಯ ಮೇಲೂ ಪರಿಣಾಮ ಉಂಟು ಮಾಡುವುದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಬೆಳೆಗಳ ಉತ್ಪಾದನೆ ಹಾಗೂ ಆಹಾರ ಭದ್ರತೆ ಸಂಕಷ್ಟಕ್ಕೆ ಒಳಗಾಗಿ, ಗುಳೆ ಹೋಗುವ ಪರಿಸ್ಥಿತಿ ಉಂಟಾಗುತ್ತದೆ. ಆಫ್ರಿಕಾ ದೇಶಗಳ ಜೊತೆಗೆ ಭಾರತದ ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್ಗಡ್, ಬಿಹಾರ, ಜಾರ್ಖಂಡ ಮತ್ತು ಒಡಿಶಾ ರಾಜ್ಯಗಳಲ್ಲಿ ಗುಳೆ ಸಮಸ್ಯೆ ಈಗಲೂ ಜೀವಂತವಾಗಿದೆ. ಮಣ್ಣು ಸವಕಳಿಯು ಭಾರತದಂತಹ ಕೃಷಿ ಆಧರಿತ ದೇಶಗಳ ಆರ್ಥಿಕ ಪರಿಸ್ಥಿತಿಯ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಉಂಟು ಮಾಡುತ್ತದೆ.
ಮಣ್ಣು ಸವಕಳಿಯನ್ನು ತಡೆಗಟ್ಟಬೇಕೆಂದರೆ ಹಾಗೂ ಜೀವಿಗಳನ್ನು ನಾಶವಾಗದಂತೆ ರಕ್ಷಿಸಬೇಕೆಂದರೆ, ಪರಿಣಾಮಕಾರಿ ಕ್ರಿಯಾ ಯೋಜನೆಯನ್ನು ಜಾರಿಗೆ ತರುವ ಜೊತೆಗೆ ಜನರು, ರೈತರು, ಸರ್ಕಾರಗಳು, ಕೃಷಿ ತಜ್ಞರು ಮತ್ತು ಸ್ವಯಂ ಸೇವಾ ಸಂಘಟನೆಗಳು ತಂಡವಾಗಿ ಕೆಲಸ ಮಾಡಬೇಕಾದ ಅವಶ್ಯಕತೆಯಿದೆ.
ನೈಸರ್ಗಿಕ ಕೃಷಿ, ಕಟ್ಟಡ ನಿರ್ಮಾಣಕ್ಕೆ ಮಿತಿ ವಿಧಿಸುವುದು, ರಸಾಯನಿಕ ಗೊಬ್ಬರಗಳ ಬಳಕೆ ತಗ್ಗಿಸುವುದು ಹಾಗೂ ಪರ್ಯಾಯ ಮತ್ತು ವಿವಿಧ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣು ಸವಕಳಿಯ ಸಮಸ್ಯೆಯನ್ನು ತಡೆಯಬಹುದು. ಅಲ್ಲದೇ, ಕಡಿಮೆ ಅವಧಿಯ ಬೆಳೆಗಳನ್ನು ಮುಖ್ಯ ಬೆಳೆಗಳನ್ನಾಗಿಸುವ ಬೆಳೆ ಪದ್ಧತಿಯ ಪರ್ಯಾಯ ಮಾರ್ಗ ಅಳವಡಿಸಿಕೊಳ್ಳುವುದರ ಮೂಲಕವೂ ಉತ್ತಮ ಫಲಿತಾಂಶಗಳನ್ನು ಪಡೆಯುವುದು ಸಾಧ್ಯವಿದೆ. ಮುಖ್ಯವಾಗಿ, ಸರ್ಕಾರಗಳು ಈ ವಿಷಯದ ಕುರಿತು ರೈತರಲ್ಲಿ ಜಾಗೃತಿಯನ್ನು ಮೂಡಿಸಲು ಗಮನ ಹರಿಸುವುದರಲ್ಲಿ ಪರಿಹಾರದ ಕೀಲಿಕೈ ಅಡಗಿದೆ.