ಪಾಟ್ನಾ: ಆರ್ಜೆಡಿ ನಾಯಕರು ತಮ್ಮ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ 73 ನೇ ಹುಟ್ಟುಹಬ್ಬವನ್ನು 'ಗರೀಬ್ ಸಮ್ಮಾನ್ ದಿವಸ್' ಎಂದು ಆಚರಿಸಲು ನಿರ್ಧರಿಸಿದ್ದಾರೆ.
ಬಹುಕೋಟಿ ಮೇವು ಹಗರಣ ಪ್ರಕರಣಗಳಲ್ಲಿ 14 ವರ್ಷಗಳವರೆಗೆ ಜೈಲು ಶಿಕ್ಷೆಗೆ ಒಳಗಾಗಿರುವ ಲಾಲೂ ಪ್ರಸಾದ್ ಯಾದವ್ ಸದ್ಯ ಅನಾರೋಗ್ಯದ ಹಿನ್ನೆಲೆ ಜಾರ್ಖಂಡ್ನ ರಿಮ್ಸ್ ಆಸ್ಪತ್ರೆಯಲ್ಲಿದ್ದಾರೆ. ಅವರನ್ನು ವಿಶೇಷ ಅನುಮತಿ ಪಡೆದು ಭೇಟಿಯಾಗಿ ಮಗ ತೇಜಸ್ವಿ ಯಾದವ್ ಜನ್ಮದಿನದ ಶುಭಾಶಯ ಕೋರಿದ್ದಾರೆ.
ತೇಜಸ್ವಿ ಅವರು ಫೇಸ್ಬುಕ್ಗೆ ತಮ್ಮ ತಂದೆ ಭೇಟಿಯ ಚಿತ್ರವನ್ನು ಪೋಸ್ಟ್ ಮಾಡಿ ಭಾವನಾತ್ಮಕ ಪತ್ರವೊಂದನ್ನೂ ಬರೆದಿದ್ದಾರೆ.
"ಇಂದು, ನಾನು ನನ್ನ ತಂದೆಯನ್ನು ಭೇಟಿಯಾಗಲು ರಾಂಚಿಗೆ ಬಂದಿದ್ದೇನೆ. ಅವರ ಜನ್ಮದಿನದಂದು ನನ್ನ ಮನಸ್ಸಿನಲ್ಲಿ ವಿಭಿನ್ನ ರೀತಿಯ ಭಾವನೆಗಳು ಮೂಡುತ್ತಿವೆ. ಅವರು ನಮ್ಮಿಂದ ಏಕಾಂಗಿಯಾಗಿ ಹೆಣಗಾಡುತ್ತಿರುವುದು ನನ್ನ ಆಲೋಚನೆಗಳನ್ನು ಘಾಸಿಗೊಳಿಸುತ್ತಿದೆ. ನಾನು ನನ್ನ ತಂದೆ ನಡೆದು ಬಂದ ಬದುಕಿನ ಹಾದಿಯನ್ನು ನೋಡಿದಾಗಲೆಲ್ಲಾ ನನ್ನ-ಅವರ ಜೀವನ ಅದ್ಭುತ ಮತ್ತು ಅಸಾಮಾನ್ಯವಾಗಿ ಕಾಣುತ್ತದೆ. ಲಾಲೂ ಜಿ, ಬಿಹಾರದ ಎಲ್ಲಾ ಸಾಮಾಜಿಕ ವೈಪರೀತ್ಯಗಳನ್ನು ಕೊನೆಗೊಳಿಸಲು ಹೋರಾಡಿದರು. ಬಡವರ ಹಕ್ಕುಗಳನ್ನು ಎತ್ತಿ ಹಿಡಿದರು. ಅವರು ಯಾವತ್ತೂ ತಲೆಬಾಗಲಿಲ್ಲ. ತಮ್ಮ ಆಲೋಚನೆಗಳನ್ನು ಬದಲಾಯಿಸಲಿಲ್ಲ" ಎಂದು ತೇಜಸ್ವಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಅವರ ಜನ್ಮದಿನದಂದು, ನಾವು ಕನಿಷ್ಠ 73,000 ಬಡ ಜನರಿಗೆ ಆಹಾರವನ್ನು ನೀಡುತ್ತೇವೆ. ಅವರ ಚಿಂತೆಗಳನ್ನು ದೂರ ಮಾಡುತ್ತೇವೆ ಮತ್ತು ನನ್ನ ತಂದೆಯಿಂದ ಪಡೆದ ಸ್ಫೂರ್ತಿಯೊಂದಿಗೆ ಬಿಹಾರವನ್ನು ತೊಂದರೆ ಮುಕ್ತಗೊಳಿಸುತ್ತೇವೆ ಎಂದು ತೇಜಸ್ವಿ ಯಾದವ್ ಹೇಳಿದ್ರು.
ಸಿಎಂ ನಿತೀಶ್ ಕುಮಾರ್ಗೆ ಬಡವರ ಬಗ್ಗೆ ಕಾಳಜಿ ಇಲ್ಲ:
ಇದೇ ವೇಳೆ ಪಕ್ಷದ ಮುಖಂಡ ತೇಜಸ್ವಿ ಯಾದವ್ ಬಿಹಾರ್ ಸರ್ಕಾರ ಬರೀ ಚುನಾವಣೆ ಬಗ್ಗೆ ಚಿಂತಿಸುತ್ತಿರುವಾಗ ನಾನು ಬಡವರನ್ನು ನೋಡಿಕೊಳ್ಳುತ್ತೇನೆ ಎಂದು ಸಿಎಂ ನಿತೀಶ್ ಕುಮಾರ್ ಅವರ ಕುರಿತು ತೇಜಸ್ವಿ ಲೇವಡಿ ಮಾಡಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೇಶ್ ಕುಮಾರ್ ಬಡವರನ್ನು ಕಡೆಗಣಿಸಿದ್ದು, ಕೊರೊನಾ ಬಿಕ್ಕಟ್ಟು ಉದ್ಭವಿಸಿ 85 ದಿನಗಳಾದರೂ ಹಸಿವಿನಿಂದ ಬಳಲುತ್ತಿರುವ ಬಡವರನ್ನು ಇವರಿಗೆ ಗುರ್ತಿಸಲಾಗಲಿಲ್ಲ. ಕಾರ್ಮಿಕರ ಬಗ್ಗೆ ಕಾಳಜಿಯಿಲ್ಲ. ಚುನಾವಣೆ ಮತ್ತು ಕುರ್ಚಿಯ ಬಗ್ಗೆ ಮಾತ್ರ ಚಿಂತಿಸುತ್ತಿರುವುದರಿಂದ ನಾವು ಅವರನ್ನು ಬೆಂಬಲಿಸಲಾಗಲಿಲ್ಲ ಎಂದರು.