ಹಾಸನ: "ನಮ್ಮ ಪಕ್ಷದಲ್ಲಿ ಏನಾಗಿದೆ? 15 ವರ್ಷಗಳಿಂದ ಅವರನ್ನು ನೋಡಿಕೊಂಡು ಬರುತ್ತಿದ್ದೇನೆ. ಅದಕ್ಕೆ ಯಾಕೆ ತಲೆಕೆಡಿಸಿಕೊಳ್ಳೋಣ? ಅವರು ಹೊಗೊಳೋದು ಎಷ್ಟೊತ್ತು? ಬೈಯೋದು ಎಷ್ಟೊತ್ತು? ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ" ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಜಿ.ಟಿ.ದೇವೇಗೌಡ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿ, "ಅವರ ಕೋಪ ಎಷ್ಟೊತ್ತು? ಎಲ್ಲವೂ ಸರಿಯಾಗುತ್ತದೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ, ಗುಂಪುಗಾರಿಕೆ ಇಲ್ಲ. ಅವರಿಗೆ ವೈಯಕ್ತಿಕವಾದ ಸಮಸ್ಯೆಗಳಿರಬಹುದು. ಅದು ಪಕ್ಷದ ಸಮಸ್ಯೆ ಅಲ್ಲ. ಅವರ ವೈಯಕ್ತಿಕ ಸಮಸ್ಯೆ, ಪರ್ಸನಲ್ ಅಜೆಂಡಾಗಳಿರಬಹುದು" ಎಂದು ಹೇಳಿದರು.
"ಹೆಚ್ಎಂಟಿ ಕಾರ್ಖಾನೆ ಉಳಿಸೋಕೆ ಪ್ರಯತ್ನ ಮಾಡುತ್ತಿದ್ದರೆ, ಈಗ ಆ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಅನ್ನುತ್ತಿದ್ದೀರಿ. ಕನ್ನಡಿಗರು ಕೊಟ್ಟ ಶಕ್ತಿಯನ್ನು ನಾನು ಬಳಸಿಕೊಂಡಿದ್ದೇನೆ. ಭದ್ರಾವತಿ ಮತ್ತು ಆಂಧ್ರದಲ್ಲಿ ಕಾರ್ಖಾನೆ ಉಳಿಸುವ ಯತ್ನ ಮಾಡುತ್ತಿದ್ದೇನೆ. ಆಂಧ್ರಪ್ರದೇಶದಲ್ಲಿ ಕಾರ್ಖಾನೆಯನ್ನು ಉಳಿಸುವ ಪಣ ತೊಟ್ಟಿದ್ದೇನೆ. ಅಲ್ಲಿನ ನಾಯಕರು ಸಹಕಾರ ಕೊಟ್ಟಿದ್ದಾರೆ. ಆದರೆ, ಕರ್ನಾಟಕದಲ್ಲಿ ಯಾರಾದರೂ ನನ್ನೊಂದಿಗೆ ರಾಜ್ಯದ ಕಾರ್ಖಾನೆಗಳನ್ನು ಉಳಿಸುವ ಬಗ್ಗೆ ಮಾತನಾಡಿದ್ದೀರಾ? ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಮಾತನಾಡುವ ಶಕ್ತಿಯಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ" ಎಂದರು.
"ಹಾಸನದ ವಿಮಾನ ನಿಲ್ದಾಣ ದೇವೇಗೌಡರ ಕನಸು. ಜನರು ಓಡಾಡಲು ವಿಮಾನ ನಿಲ್ದಾಣ ಮಾಡುತ್ತಿಲ್ಲ. ರೈತರು ಬೆಳೆದಂತಹ ಬೆಳೆಗೆ ಒಂದು ಹೊಸ ಪದ್ಧತಿಯಲ್ಲಿ ವಿದೇಶಗಳಿಗೆ ಏರ್ ಕಾರ್ಗೋದಲ್ಲಿ ಎಕ್ಸ್ಪೋರ್ಟ್ ಮಾಡಿ ರೈತರ ಆರ್ಥಿಕ ಶಕ್ತಿ ಸದೃಢಗೊಳಿಸಬೇಕೆಂಬುದು ದೇವೇಗೌಡರ ಕನಸಿದೆ. 25 ವರ್ಷದಿಂದ ದೇವೇಗೌಡರಿಗೆ ಅದೇ ಚಿಂತೆ. ಅದಕ್ಕೆ ಇವರು ಎಷ್ಟರಮಟ್ಟಿಗೆ ಬೆಂಬಲ ಕೊಡ್ತಾ ಇದ್ದಾರೆ ಎಂದು ಎಲ್ಲರ ಕಣ್ಣೆದುರೇ ಇದೆ. ಬಜೆಟ್ನಲ್ಲಿ ಬರದೇ ಇರಬಹುದು. ಹಾಸನ ವಿಮಾನ ನಿಲ್ದಾಣ ವಿಚಾರವನ್ನು ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿದ್ದೇನೆ. ಅಲ್ಲಿಂದಲೇ ಹೆಚ್ಚಿನ ನೆರವು ಪಡೆಯಲು ಪ್ರಯತ್ನಪಡುತ್ತಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಬೇಕು. ಇವತ್ತು ಅಲ್ಲಿ ಏನೇನು ನಡೆದಿದೆ, ಯಾರ್ಯಾರು ಸೇರಿಕೊಂಡು ಭೂಮಿ ಲಪಟಾಯಿಸಿ ಬಡಾವಣೆ ರಚನೆ ಮಾಡುತ್ತಿದ್ದಾರೆ ಎಲ್ಲವೂ ನಮಗೆ ಗೊತ್ತಿದೆ" ಎಂದು ಟಾಂಗ್ ಕೊಟ್ಟರು.
ಬಿಜೆಪಿ ಬಣ ರಾಜಕೀಯ ವಿಚಾರವಾಗಿ ಮಾತನಾಡಿದ ಅವರು, "ಬೇರೆ ಪಕ್ಷದ ಗೊಂದಲದ ಬಗ್ಗೆ ನಾನು ಉತ್ತರ ಕೊಡುವುದು ತಪ್ಪಾಗುತ್ತದೆ. ಬಿಜೆಪಿ ಹೈಕಮಾಂಡ್ ಇದೆ ಅವರು ಸರಿಪಡಿಸಿಕೊಳ್ಳುತ್ತಾರೆ" ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರವಾಗಿ, "ಅದು ನನಗೆ ಸಂಬಂಧ ಇಲ್ಲ, ಕಾಂಗ್ರೆಸ್ನವರು ತೀರ್ಮಾನ ಮಾಡಿಕೊಳ್ಳಬೇಕು" ಎಂದರು.
ಹಾಸನದಲ್ಲಿ ವಾಸ್ತವ್ಯ ಹೂಡಿ ಪಕ್ಷ ಕಟ್ಟುತ್ತೇನೆ ಎಂಬ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ರಾಜ್ಯದಲ್ಲೇ ಅವರು ಹೋರಾಟ ಮಾಡಬೇಕು ಅನ್ನೋದು ಇದೆ. ನನಗೆ ಹೆಚ್ಚಿನ ಜವಾಬ್ದಾರಿಯನ್ನು ಪ್ರಧಾನಮಂತ್ರಿ ಕೊಟ್ಟಿದ್ದಾರೆ. ಪಕ್ಷ ಸಂಘಟನೆಗೆ ವಯಸ್ಸಿನ ಸಮಸ್ಯೆ ಇದ್ದರೂ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲು ಹೋರಾಟ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ನನಗೆ ಬೇರೆ ಬೇರೆ ರೀತಿಯ ಒತ್ತಡಗಳಿವೆ ಎಂದು ತೀರ್ಮಾನಿಸಿದ್ದಾರೆ. ನಾನು ನಮ್ಮ ರಾಷ್ಟ್ರೀಯ ಅಧ್ಯಕ್ಷರಲ್ಲಿ ಮನವಿ ಮಾಡುತ್ತೇನೆ. ನಮ್ಮ ಮುಂದೆ ಅವರು ಇನ್ನೂ ಇರಬೇಕು. ಈ ರಾಜ್ಯದ ಬಗ್ಗೆ ಅವರ ಕನಸುಗಳಿದ್ದವು, ಅದನ್ನು ನನಸು ಮಾಡುವ ಒಂದು ಕಾಲವನ್ನು ಈ ನಾಡಿನ ಜನ ಕೊಡ್ತಾರೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದೇನೆ. ಅದನ್ನು ಅವರು ಕಣ್ಣಾರೆ ನೋಡಬೇಕು. ಈ ರಾಜ್ಯದ ಅಭಿವೃದ್ಧಿಗೆ ಅವರು ಮಾಡಲು ಆಗದೇ ಇದ್ದದ್ದನ್ನು, ನಾನು ಮಾಡಲು ನನ್ನದೇ ಆದ ಕಲ್ಪನೆ ಇಟ್ಟುಕೊಂಡಿದ್ದೇನೆ. ಅವರು ಕೊಟ್ಟಿರುವ ಮಾರ್ಗದರ್ಶನವನ್ನು ಇಟ್ಟುಕೊಂಡಿದ್ದೇವೆ. ಆ ಕಾರ್ಯಕ್ರಮಗಳನ್ನು ತರಲು ಯೋಜನೆ ಇಟ್ಟುಕೊಂಡಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ: ಜಿ.ಟಿ.ದೇವೇಗೌಡರು ದೊಡ್ಡವರು, ನಮ್ಮ ಶಕ್ತಿ ಆಮೇಲೆ ತೋರಿಸ್ತೀವಿ: ಹೆಚ್.ಡಿ.ಕುಮಾರಸ್ವಾಮಿ