ಮುಂಬೈ: ಕೊರೊನಾ ವೈರಸ್ ಪರೀಕ್ಷೆಗೆ ಒಳಗಾಗಿದ್ದಕ್ಕಾಗಿ ಸೋದರಿಯ ಮಗಳ ಬಗ್ಗೆ ವಾಟ್ಸ್ ಆ್ಯಪ್ನಲ್ಲಿ ಕೆಲವರು ಸುಳ್ಳು ಸಂದೇಶಗಳನ್ನು ಬಿತ್ತರಿಸುತ್ತಿದ್ದಾರೆ ಎಂದು ಚಲನಚಿತ್ರ ನಿರ್ಮಾಪಕ ರಿತೇಶ್ ಸಿಧ್ವಾನಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ರಿತೇಶ್, ತನ್ನ ಸಹೋದರಿಯ ಮಗಳು ಇತ್ತೀಚೆಗೆ ಲಂಡನ್ನಿಂದ ಹಿಂದಿರುಗಿದ್ದಳು. ಜ್ವರ ಮತ್ತು ಕೆಮ್ಮು ಬಂದ ಹಿನ್ನೆಲೆ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಳು. ಪರೀಕ್ಷಾ ಫಲಿತಾಂಶ ಘೋಷಿಸುವ ಮುಂಚೆಯೇ ಕೆಲವರು ಸುಳ್ಳು ವದಂತಿಗಳನ್ನು ಹರಡಿಸಲು ಪ್ರಾರಂಭಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಪರೀಕ್ಷೆಗೆಂದು ಆಸ್ಪತ್ರೆಗೆ ಭೇಟಿ ನೀಡುವ ಜನರ ಬಗ್ಗೆ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಅಸಾಧಾರಣ ಕಾಳಜಿಯನ್ನು ವಹಿಸುತ್ತಿದ್ದಾರೆ. ನಿಮ್ಮ ನಿಸ್ವಾರ್ಥ ಸೇವೆ ಮತ್ತು ಆತಿಥ್ಯಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.