ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಾಳೆ ಕೇಂದ್ರದ ಗದ್ದುಗೆ ಏರಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮಿತ್ರಪಕ್ಷ ಶಿವಸೇನೆ, ರಾಮಮಂದಿರ ನಿರ್ಮಾಣದ ವಿಚಾರವನ್ನು ಮತ್ತೆ ನೆನಪಿಸಿದೆ.
ಶಿವಸೇನೆಯ ಮುಖವಾಣಿ ಸಾಮ್ನಾ ಸಂಪಾದಕೀಯ ಪುಟದಲ್ಲಿ ರಾಮಮಂದಿರ ನಿರ್ಮಾಣದ ವಿಚಾರವನ್ನು ಪ್ರಸ್ತಾಪಿಸಿದೆ. ಶ್ರೀರಾಮ ಆರಾಧಿಸುವ ಪಕ್ಷ ಮತ್ತೆ ಕೇಂದ್ರದ ಅಧಿಕಾರ ಪಡೆದಿದೆ. ರಾಮರಾಜ್ಯ ನಿರ್ಮಾಣವಾಗುತ್ತೆ ಎಂಬ ಆಸೆಯಿಂದಲೇ ಕೋಟ್ಯಂತರ ಜನರು ಬಿಜೆಪಿ ಆಯ್ಕೆ ಮಾಡಿದ್ದಾರೆ. ಎಲ್ಲವೂ ರಾಮನ ಆಶೀರ್ವಾದದಂತೆಯೆ ನಡೆದಿದೆ. ಇನ್ನು ರಾಮಮಂದಿರ ನಿರ್ಮಾಣಕ್ಕಾಗಿ ನೂರಾರು ಕರಸೇವಕರು ಬಲಿದಾನ ಮಾಡಿದ್ದಾರೆ. ಅವರು ಹರಿಸಿರುವ ರಕ್ತ ವ್ಯರ್ಥವಾಗಬಾರದು. ಇದೇ ಯೋಚನೆಯುಳ್ಳ ಸರ್ಕಾರ ಅಧಿಕಾರಕ್ಕೆ ಬರುತ್ತಿರುವುದರಿಂದ ರಾಮಮಂದಿರ ನಿರ್ಮಾಣ ಕಾರ್ಯ ಖಂಡಿತ ನಡೆಯುತ್ತದೆ ಎಂದು ಬರೆದುಕೊಂಡಿದೆ.
ರಾಮ್ ಕಾ ಕಾಮ್ ಹೋಗಾ (ರಾಮನ ಕಾರ್ಯ ನೆರವೇರುತ್ತೆ) ಎಂಬ ಶೀರ್ಷಿಕೆಯಲ್ಲಿ ಸಂಪದಾಕೀಯ ಬರೆದಿರುವ ಶಿವಸೇನೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಿಂದ ಯಾವೆಲ್ಲಾ ಅನುಕೂಲಗಳಿವೆ ಎಂದೂ ಬರೆದಿದೆ. ಜತೆಗೆ, ಕೋಟ್ಯಂತರ ಹಿಂದೂಗಳ ಭಾವನೆ ಅರಿತು, ಸುಪ್ರೀಂಕೋರ್ಟ್ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಬೇಕೆಂದು ಕೇಳಿಕೊಂಡಿದೆ.
ಶ್ರೀ ರಾಮನ ವಿಜಯ ರಥವನ್ನು ಯಾರಿಂದಲೂ ತಡೆಯಲಾಗದು. ರಾಮಮಂದಿರ ನಿರ್ಮಾಣ, ಶ್ರೇಷ್ಠ ದೇಶದ ನಿರ್ಮಾಣದಂತೆಯೆ. ಸುಪ್ರೀಂ ಆದೇಶದ ಬಳಿಕ ರಾಮಮಂದಿರ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳುವ ಪ್ರಧಾನಿ ಮೋದಿ ನಿರ್ಧಾರಕ್ಕೆ ನಮ್ಮ ಸಹಮತ ಇದೆ ಎಂದೂ ಹೇಳಿದೆ.
ಆದರೆ ಚುನಾವಣೆ ಸಮೀಪದಲ್ಲಿ ರಾಮಮಂದಿರ ನಿರ್ಮಾಣದ ಅಜೆಂಡಾ ಹಿಡಿದು ಬಂದ ಬಿಜೆಪಿ, ಅದನ್ನೇ ಮರೆತಿದೆ ಎಂದು ಶಿವಸೇನೆ ಟೀಕಿಸಿತ್ತು.