ಹೈದರಾಬಾದ್: ಕೋವಿಡ್- 19 ಸಾಂಕ್ರಾಮಿಕ ರೋಗದ ವಿರುದ್ಧ ಇಡೀ ಜಗತ್ತು ಹೋರಾಡುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಕರ್ತಾರ್ ಪುರ್ ಕಾರಿಡಾರ್ ಪುನರಾರಂಭಕ್ಕೆ ಹಸಿರು ನಿಶಾನೆ ತೋರಲು ಭಾರತ ಸ್ಪಷ್ಟವಾಗಿ ತನ್ನ ಅಸಮಾಧಾನ ತೋರ್ಪಡಿಸಿದೆ.
29 ಜೂನ್ 2020 ರಂದು ಮಹಾರಾಜ ರಂಜೀತ್ ಸಿಂಗ್ ಅವರ ಜಯಂತೋತ್ಸವದ ಸಂದರ್ಭದಲ್ಲಿ ಸಿಖ್ ಯಾತ್ರಾರ್ಥಿಗಳಿಗೆ ಪವಿತ್ರ ಕ್ಷೇತ್ರವಾದ ಐತಿಹಾಸಿಕ ಕರ್ತಾರ್ ಪುರ್ ಕಾರಿಡಾರ್ ಅನ್ನು ಮತ್ತೆ ತೆರೆಯಲು ಸಿದ್ಧವಿರುವುದಾಗಿ ಪಾಕಿಸ್ತಾನ ತಿಳಿಸಿದೆ.
"ಪ್ರಪಂಚದಾದ್ಯಂತ ಧಾರ್ಮಿಕ ಸ್ಥಳಗಳು ತೆರೆದುಕೊಳ್ಳುತ್ತಿದ್ದಂತೆ, ಪಾಕಿಸ್ತಾನವು ಕರ್ತಾರ್ ಪುರ್ ಕಾರಿಡಾರನ್ನ ಮತ್ತೆ ತೆರೆಯಲು ಸಿದ್ಧವಾಗಿದೆ. ಜೂನ್ 29, 2020 ರಂದು ಮಹಾರಾಜ ರಂಜೀತ್ ಸಿಂಗ್ ಅವರ ಜಯಂತೋತ್ಸವದ ಸಂದರ್ಭ ಕರ್ತಾರ್ ಪುರ್ ಸಾಹೀಬ್ ಗುರುದ್ವಾರ ತೆರೆಯುವುದಾಗಿ ಭಾರತದ ಎಲ್ಲ ಸಿಖ್ ಯಾತ್ರಾರ್ಥಿಗಳಿಗೆ ತಿಳಿಸುತ್ತಿರುವುದಾಗಿ” ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಪಾಕಿಸ್ತಾನದ ಈ ನಿರ್ಧಾರವನ್ನು ತಳ್ಳಿ ಹಾಕಿರುವ ಭಾರತ, ಇದು ಸದ್ಭಾವನೆಯ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನ ಎಂದು ಟೀಕಿಸಿದೆ.
ಜೂನ್ 29 ರಂದು ಕರ್ತಾರ್ ಪುರ್ ಸಿಖ್ ಗುರುದ್ವಾರ ಪುನರ್ ಆರಂಭ ಕುರಿತಂತೆ ನಮಗೆ ಕೇವಲ 2 ದಿನಗಳ ಕಿರು ಸೂಚನೆ ನೀಡುವ ಮೂಲಕ ಪಾಕಿಸ್ತಾನ ಸದ್ಭಾವನೆಯ ಮರೀಚಿಕೆ ಸೃಷ್ಟಿಗೆ ಪ್ರಯತ್ನ ನಡೆಸುತ್ತಿದೆ ಎಂಬುದು ಗಮನಿಸಬೇಕಾದ ಅಂಶ. ದ್ವಿಪಕ್ಷೀಯ ಒಪ್ಪಂದದ ಅನ್ವಯ ಪಾಕಿಸ್ತಾನದ ಕಡೆಯಿಂದ ಗುರುದ್ವಾರ ಪುನರ್ ಆರಂಭಿಸುವ 7 ದಿನಗಳ ಮೊದಲು ಮಾಹಿತಿ ಹಂಚಿಕೊಳ್ಳಬೇಕೆಂಬ ಅಂಶವಿದ್ದರೂ ಪಾಕಿಸ್ತಾನ ಈ ರೀತಿ ಮಾಡಿದೆ. ೭ ದಿನಗಳ ಮುನ್ನವೇ ಪಾಕಿಸ್ತಾನ ಗುರುದ್ವಾರ ತೆರೆಯುವ ಬಗ್ಗೆ ಮಾಹಿತಿ ನೀಡಿದರೆ ಮುಂಚಿತವಾಗಿಯೇ ಯಾತ್ರಾರ್ಥಿಗಳ ನೋಂದಣಿ ಮಾಡಿಕೊಳ್ಳಲು ಭಾರತಕ್ಕೆ ಸಹಾಯ ಆಗುತ್ತದೆ ಎಂದು ಭಾರತೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2019 ರ ನವೆಂಬರ್ 9 ರಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್, ಕರ್ತಾರ್ಪುರ್ ಕಾರಿಡಾರ್ ಅನ್ನು ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದ್ದರು. ದೀರ್ಘಾವಧಿಯಿಂದ ಬಾಕಿ ಉಳಿದಿದ್ದ ಜಗತ್ತಿನ ಮತ್ತು ಭಾರತದ ಕೋಟ್ಯಂತರ ಸಿಖ್ ಅಭಿಮಾನಿಗಳ ಬಯಕೆಯನ್ನು ಬಾಬಾ ಗುರುನಾನಕ್ ಅವರ 550 ನೇ ಜನ್ಮ ದಿನಾಚರಣೆ ದಿನದಂದೇ ಕರ್ತಾರ್ ಪುರ್ ಗುರುದ್ವಾರ ತೆರೆಯುವ ಮೂಲಕ ಈಡೇರಿಸಲಾಗಿತ್ತು.
ಆದರೆ, ಕೋವಿಡ್-೧೯ ಮಾರಕ ಸೋಂಕಿನ ಹರಡುವಿಕೆಯಿಂದಾಗಿ ಈ ವರ್ಷದ ಮಾರ್ಚ್ 16ರಿಂದ ತಾತ್ಕಾಲಿಕವಾಗಿ ಗುರುದ್ವಾರ ಮುಚ್ಚಲಾಗಿತ್ತು. ಇದೀಗ, ಹಲವು ತಿಂಗಳ ಲಾಕ್ ಡೌನ್ ಬಳಿಕ ವಿಶ್ವಾದ್ಯಂತ ಹಲವು ಧಾರ್ಮಿಕ ಕೇಂದ್ರಗಳು ಆರಂಭವಾಗುತ್ತಿವೆ. “ಆರೋಗ್ಯ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು, ಪಾಕಿಸ್ತಾನ ಕರ್ತಾರ್ ಪುರ್ ಕಾರಿಡಾರ್ ಅನ್ನು ಮತ್ತೆ ತೆರೆಯಲು ಅಗತ್ಯವಾದ SOP ಗಳನ್ನು ರೂಪಿಸಲು ಭಾರತವನ್ನು ಆಹ್ವಾನಿಸಿದೆ ”ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಈ ಮಧ್ಯೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ತೀವ್ರವಾಗಿ ಏರುತ್ತಿವೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಮೂಲಸೌಕರ್ಯಗಳ ಮೇಲೆ ಅಗಾಧ ಒತ್ತಡ ಬೀಳುತ್ತಿದೆ. ವಿಶ್ವದಾದ್ಯಂತ ವೇಗವಾಗಿ ಕೋವಿಡ್-19 ಹಬ್ಬುತ್ತಿದ್ದು, ಪಾಕಿಸ್ತಾನದಲ್ಲಿ ಇಂದು ಒಂದೇ ದಿನ 150 ಸಾವು ಸಂಭವಿಸುವ ಮೂಲಕ ಒಂದು ದಿನದಲ್ಲಿ ಸಂಭವಿಸಿದ ದಾಖಲೆಯ ಸಾವು ಇದಾಗಿದೆ.
"ಕೊರೊನಾ ವೈರಸ್ ಸೋಂಕು ಹಬ್ಬುವಿಕ ತಡೆಗಟ್ಟುವ ಕ್ರಮಗಳ ಭಾಗವಾಗಿ ಗಡಿಯಾಚೆಗಿನ ಪ್ರಯಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆರೋಗ್ಯ ಅಧಿಕಾರಿಗಳು ಮತ್ತು ಗುರುದ್ವಾರಕ್ಕೆ ತೆರಳುವ ಸಿಖ್ ಯಾತ್ರಾರ್ಥಿಗಳು, ಸಂಬಂಧಿಸಿದ ಮಧ್ಯವರ್ತಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು"ಎಂದು ಭಾರತ ಸರ್ಕಾರ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಸಿಬ್ಬಂದಿಯನ್ನ 7 ದಿನಗಳ ಒಳಗಾಗಿ ಶೇ.50ರಷ್ಟು ಕಡಿಮೆ ಮಾಡಿಕೊಳ್ಳುವಂತೆ ಭಾರತದ ವಿದೇಶಾಂಗ ಇಲಾಖೆಯು, ಪಾಕಿಸ್ತಾನದ ಹಂಗಾಮಿ ರಾಜತಾಂತ್ರಿಕ ರಾಯಭಾರಿ ಸೈಯದ್ ಹೈದರ್ ಶಾ ಅಲಿಗೆ ಸೂಚಿಸಿದ ಬೆನ್ನಲೇ ಇಸ್ಲಾಮಾಬಾದ್ ಕಡೆಯಿಂದ ಕರ್ತಾರ್ ಪುರ್ ಪ್ರಸ್ತಾಪ ಬಂದಿದೆ. ಅಧಿಕಾರಿಗಳ ಅಪಹರಣ, ಕಿರುಕುಳ, ಬೆದರಿಕೆ ಇವೇ ಮುಂತಾದ ಕೃತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಸ್ಪರ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವ ದೃಷ್ಟಿಯಿಂದ ನವದೆಹಲಿ ಮತ್ತು ಇಸ್ಲಾಮಾಬಾದ್ ಕಾರ್ಯ ನಿರ್ವಹಿಸಬೇಕೆಂದು ಭಾರತ ತಿಳಿಸಿದೆ.
"ಇದಲ್ಲದೆ, ಕರ್ತಾರ್ ಪುರ್ ಗುರುದ್ವಾರಕ್ಕೆ ತೆರಳುವ ಪಾಕಿಸ್ತಾನದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಮ್ಮ ಬದಿಯಲ್ಲಿ ಸೇತುವೆಯನ್ನು ನಿರ್ಮಿಸುವುದಾಗಿ ರಾವಿ ನದಿ ದ್ವಿಪಕ್ಷೀಯ ಒಪ್ಪಂದದಲ್ಲಿ ಪಾಕಿಸ್ತಾನ ಬದ್ಧವಾಗಿದ್ದರೂ ಇದುವರೆಗೆ ಸೇತುವೆ ನಿರ್ಮಾಣ ಮಾಡಿಲ್ಲ. ಈ ಮಧ್ಯೆ ಮಾನ್ಸೂನ್ ಆರಂಭವಾಗುತ್ತಿದ್ದು, ಗುರುದ್ವಾರಕ್ಕೆ ಯಾತ್ರಾರ್ಥಿಗಳು ಪಯಣಿಸುವುದು ಸಾಧ್ಯವೇ, ಕಾರಿಡಾರ್ನಾದ್ಯಂತ ಪ್ರಯಾಣ ಸುರಕ್ಷಿತವೇ ಎಂದು ಮೌಲ್ಯಮಾಪನ ಮಾಡಬೇಕಾಗುತ್ತದೆ” ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.
ಸುಮಾರು ನಾಲ್ಕು ಕಿಲೋಮೀಟರ್ ಉದ್ದದ ಐತಿಹಾಸಿಕ ಕಾರಿಡಾರ್, ಸಿಖ್ ಧರ್ಮದ ಮೊದಲ ಗುರು ಗುರುನಾನಕ್ ದೇವ್ ತಮ್ಮ ಜೀವನದ 18 ವರ್ಷಗಳನ್ನು ಕಳೆದ ಕರ್ತಾರ್ ಪುರ್ ಸಾಹಿಬ್ ಗುರುದ್ವಾರವನ್ನು ಸಂಪರ್ಕಿಸುತ್ತದೆ. ಇದೇ ರೀತಿ ಭಾರತದಲ್ಲಿ ಗುರುದಾಸ್ ಪುರದ ಡೇರಾ ಬಾಬಾ ನಾನಕ್ ಅತ್ಯಂತ ಪೂಜ್ಯರಾಗಿದ್ದಾರೆ.
ಸ್ಮಿತಾ ಶರ್ಮಾ, ನವದೆಹಲಿ