ಗೌತಮ್ ಬುದ್ಧನಗರ:(ಉತ್ತರಪ್ರದೇಶ): ಅಸಹಾಯಕ ತಂದೆಯೋರ್ವ ಗಾಯಗೊಂಡ ಮಗುವನ್ನ ಎತ್ತಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮನೆ ಮಹಡಿ ಮೇಲೆ ಆಡುತ್ತಿದ್ದ ಮೂರು ವರ್ಷದ ಮಗು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ಈ ವೇಳೆ ಮಗುವಿನ ತಂದೆ ರೋಶನ್ ಕುಮಾರ್, ಗ್ರೇಟರ್ ನೋಯ್ಡಾದಲ್ಲಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದಾನೆ. ಬಾಲಕನ ಸ್ಥಿತಿ ಗಂಭೀರವಾಗಿರುವ ಮಾಹಿತಿ ಗೊತ್ತಾಗಿ ಬೇರೊಂದು ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ. ಈ ವೇಳೆ ಸಿಹೆಚ್ಸಿ ಆಸ್ಪತ್ರೆಗೆ ತೆರಳಿದ್ದು, ಸಿಟಿ ಸ್ಕ್ಯಾನ್, ಎಕ್ಸ್ರೇ ನೆಪ ಹೇಳಿ ಮತ್ತೊಂದು ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರಂತೆ.
ಮತ್ತೆ ಮಗುವನ್ನ ತೆಗೆದುಕೊಂಡು ಗ್ರೇಟರ್ ನೋಯ್ಡಾದಲ್ಲಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ತಮ್ಮ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿ ದಾಖಲು ಮಾಡಿಕೊಳ್ಳುಲು ಹಿಂದೇಟು ಹಾಕಿದ್ದಾರೆ. ಇದಾದ ಬಳಿಕ ಮತ್ತೊಂದು ಆಸ್ಪತ್ರೆಗೆ ತೆರಳಿದಾಗ ಮಗುವನ್ನ ಸೇರಿಸಿಕೊಳ್ಳಲು ಮುಂದಾಗಿದ್ದು, 25 ಸಾವಿರ ಹಣ ಕಟ್ಟುವಂತೆ ಹೇಳಿದ್ದಾರೆ. ಆದರೆ ಆತನ ಬಳಿ ಅಷ್ಟೊಂದು ಹಣ ಇಲ್ಲದ ಕಾರಣ ಸಫ್ದರ್ಜಂಗ್ ಆಸ್ಪತ್ರೆಗೆ ತೆರಳಿದ್ದು, ಮಗುವಿಗೆ ಅಲ್ಲಿ ಚಿಕಿತ್ಸೆ ನೀಡಿದ್ದಾಗಿ ತಿಳಿದು ಬಂದಿದೆ.