ನವದೆಹಲಿ: ನವೆಂನರ್ 14ರ ಬದಲು ಡಿಸೆಂಬರ್ 26ಕ್ಕೆ ಮಕ್ಕಳ ದಿನಾಚರಣೆಯನ್ನು ಬದಲಾಯಿಸಿ ಎಂದು ದೆಹಲಿ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಮನೋಜ್ ತಿವಾರಿ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ.
ಡಿಸೆಂಬರ್ 26, 10ನೇ ಸಿಖ್ ಗುರು, ಗುರು ಗೋವಿಂದ ಸಿಂಗ್ ಅವರ ಇಬ್ಬರು ಮಕ್ಕಳು ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡಿದ ದಿನ. ಅಂದು ಮಕ್ಕಳ ದಿನಾಚರಣೆ ಆಚರಿಸುವುದರಿಂದ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಮನೋಜ್ ತಿವಾರಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶ್ರೀ ಗುರು ಗೋವಿಂದ್ ಸಿಂಗ್ ಅವರ ಮಕ್ಕಳಾದ ಸಾಹಿಬ್ಜಾದ್ ಜೋರವಾರ್ ಸಿಂಗ್ ಮತ್ತು ಸಾಹಿಬ್ಜಾಡಾ ಫತೇಹ್ ಸಿಂಗ್ 1705ರ ಚಳಿಗಾಲದಲ್ಲಿ ಪಂಜಾಬ್ನ ಸಿರ್ಹಿಂದ್ನಲ್ಲಿ ಅದಮ್ಯ ಧೈರ್ಯ ಪ್ರದರ್ಶಿಸುವ ಮೂಲಕ ಧರ್ಮದ ರಕ್ಷಣೆಗಾಗಿ ಹುತಾತ್ಮರಾದರು. ಇಂಥ ಮಹತ್ವದ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಬೇಕು ಎಂದು ಮನೋಜ್ ತಿವಾರಿ ಸಲಹೆ ಕೊಟ್ಟಿದ್ದಾರೆ.
ಮುಂದಿನ ಕೆಲ ತಿಂಗಳಲ್ಲಿ ನವದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಿಖ್ ಧರ್ಮದ ಮತಗಳನ್ನ ಸೆಳೆಯಲು ತಿವಾರಿ ಈ ದಾಳ ಉರುಳಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರ್ತಿವೆ.