ಹೈದಾರಾಬಾದ್: ಕೋವಿಡ್-19 ಹರಡುವುದನ್ನು ತಡೆಯಲು ಸರ್ಕಾರ ಇದೇ ಮಾರ್ಚ್ 24 ರಿಂದ 21ದಿನ ಲಾಕ್ಡೌನ್ ಘೋಷಿಸಿದೆ. ಜನರು ಮನೆಯಲ್ಲೇ ಉಳಿಯಬೇಕಾದ ಪರಿಸ್ಥಿತಿಯಲ್ಲಿ ಅಗತ್ಯ ಆಹಾರ ವಸ್ತುಗಳ ಚಿಂತೆ ಇದ್ದೇ ಇದೆ. ಸರ್ಕಾರ ಎಲ್ಲರ ನೆರವಿಗೆ ಧಾವಿಸಿದ್ದು, 1.70 ಲಕ್ಷ ಕೋಟಿ ರೂ ಪರಿಹಾರದ ಪ್ಯಾಕೇಜ್ ಕೂಡ ಘೋಷಿಸಿದೆ.
ಕೊರೊನಾ ವೈರಸ್ ಹರಡುವಿಕೆಯನ್ನ ತಡೆಯಲು ಸರ್ಕಾರ ಎಷ್ಟೇ ಕ್ರಮಗಳನ್ನು ಕೈಗೊಂಡರೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ 21 ದಿನಕ್ಕೆ ಸೀಮಿತವಾಗಿರುವ ಲಾಕ್ಡೌನ್ ಮತ್ತೆ ವಿಸ್ತರಣೆಯಾಗುತ್ತಾ ಅನ್ನೋ ಪ್ರಶ್ನೆ ಜೊತೆಗೆ ಒಂದು ವೇಳೆ ವಿಸ್ತರಣೆಯಾದ್ರೆ ಆಹಾರ ಪದಾರ್ಥಗಳ ಚಿಂತೆ ಹಲವರದ್ದಾಗಿದೆ. ಆರ್ಥಿಕ ತಜ್ಞರ ಹೇಳಿಕೆಯೊಂದು ಇಂತಹ ಹತ್ತು ಹಲವು ಚಿಂತೆಗಳಿಗೆ ಬಿಗ್ ರಿಲೀಫ್ ನೀಡಿದೆ. ಈ ಬಗ್ಗೆ ಆರ್ಥಿಕ ತಜ್ಞರೊಬ್ಬರು ಮಾಹಿತಿ ನೀಡಿದ್ದು, ಯಾವುದೇ ಭಯ ಪಡಬೇಕಾಗಿಲ್ಲ. ಭಾರತದಲ್ಲಿ 6 ತಿಂಗಳಿಗಾಗುವಷ್ಟು ಅಗತ್ಯ ಆಹಾರ ಪದಾರ್ಥಗಳ ಸಂಗ್ರಹವಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಕೃಷಿ ಮತ್ತು ಆಹಾರ ನೀತಿ ತಜ್ಞ ದೇವಿಂದ್ರ ಶರ್ಮಾ, ನಮ್ಮಲ್ಲಿ ಸಾಕಷ್ಟು ಆಹಾರ ಪದಾರ್ಥಗಳ ಸಂಗ್ರಹವಿದೆ. ಹೀಗಾಗಿ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಇಡೀ ದೇಶ 6 ತಿಂಗಳು ತುರ್ತು ಪರಿಸ್ಥಿತಿ ಮಾದರಿ ಎದುರಿಸಿದರೂ ಯಾವುದೇ ರೀತಿಯ ಭಯ ಬೇಡ ಎಂಬ ಅಭಯ ನೀಡಿದ್ದಾರೆ. ಆದ್ರೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಹಂಚಿಕೆ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಸಂಬಂಧ ಕಾರ್ಯನಿರತವಾಗಿರುವ ಎಲ್ಲಾ ಸಂಸ್ಥೆಗಳು ಪೂರೈಕೆಯ ಕೊಂಡಿಯನ್ನು ಸರಿಯಾದ ರೀತಿಯಲ್ಲಿ ನಿರ್ವವಹಿಸಬೇಕು. ಇದು ಅತ್ಯಂತ ಪ್ರಮುಖವಾದ ಕೆಲಸವಾಗಿದೆ ಅಂತ ಸಲಹೆ ನೀಡಿದ್ದಾರೆ. ಆಹಾರ ಧಾನ್ಯಗಳು, ತರಕಾರಿ, ಹಣ್ಣುಗಳು ಪೂರೈಕೆ ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು. ಇದರಲ್ಲಿ ವ್ಯತ್ಯಯವಾದ್ರೂ ಆಹಾರದ ದಂಗೆಯಾಗಬಹುದು. ಈ ಬಗ್ಗೆ ಸರ್ಕಾರ ತುಂಬಾ ಅಲರ್ಟ್ ಆಗಿ ಇರಬೇಕು ಅಂತ ಎಚ್ಚರಿಸಿದ್ದಾರೆ.
ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರಪ್ರದೇಶದಲ್ಲಿ ನವೆಂಬರ್ ಎರಡನೇ ವಾರದಿಂದ ಡಿಸೆಂಬರ್ ವರೆಗೆ ಪ್ರಮುಖ ಬೆಳೆಯಾದ ಗೋಧಿ ಬಿತ್ತನೆ ಮಾಡಲಾಗಿದೆ. ಈವೊಂದು ಪ್ರದೇಶವನ್ನು ಗೋಧಿಯ ಬಟ್ಟಲು (Wheat bowl) ಪಾತ್ರೆ ಅಂತಲೂ ಕರೆಯಲಾಗುತ್ತದೆ. ದ್ವಿದಳ ಧಾನ್ಯಗಳು, ಸಾಸಿವೆ, ಬಟಾಣಿಯೂ ಪ್ರಮುಖ ಬೆಳೆಯಾಗಿದೆ ಎಂದಿದ್ದಾರೆ. ಕೃಷಿ ಚಟುವಟಿಕೆಗಳು ಲಾಕ್ಡೌನ್ ಪರಿಸ್ಥಿತಿಯ ವ್ಯಾಪ್ತಿಗೆ ಬರಬಾರದು. ಕೃಷಿ ಅತ್ಯಂತ ಪ್ರಾಮುಖವಾಗಿದೆ. ಹೀಗಾಗಿ ಇದರ ಕಾರ್ಯ ಚಟುವಟಿಕೆಗಳು ಮುಂದುವರಿಯುತ್ತಲೇ ಇರಬೇಕು. ಇದು ಸ್ಥಗಿತವಾಗಲು ಸರ್ಕಾರ ಅವಕಾಶ ನೀಡಬಾರದು ಅಂತ ಸಲಹೆ ನೀಡಿದ್ದಾರೆ. ಯಾವಾಗ ಬೇಕಾದ್ರೂ ಸಂಪೂರ್ಣ ಬಂದ್ ಮಾಡಿ ಮತ್ತೆ ಆರಂಭಿಸಲು ಇದು ಕೈಗಾರಿಕೆಯಲ್ಲ. ಇದೊಂದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಶರ್ಮಾ ಹೇಳಿದ್ದಾರೆ.
ಕೋವಿಡ್-19 ತಡೆಗಟ್ಟಲು ನಿರ್ಬಂಧಗಳನ್ನು ಹೇರಿರುವ ಸರ್ಕಾರ ಕೃಷಿ ಚಟುವಟಿಕೆಗಳು ಮುಂದುವರಿಸಲು ಕಾರ್ಯಸೂಚಿಗಳನ್ನು ರೂಪಿಸಬೇಕು ಅಂತ ಸಲಹೆ ನೀಡಿದ್ದಾರೆ. ಏಪ್ರಿಲ್ 15ರ ನಂತರ ಕೃಷಿ ಚಟುವಟಿಕೆಗಳು ಮುಂದುವರಿಯುತ್ತವೆ ಅಂತ ಪಂಜಾಬ್ ಸರ್ಕಾರ ಹೇಳಿದ್ರೆ, ಏಪ್ರಿಲ್ 20ರ ನಂತರ ತಾವು ಅವಕಾಶ ನೀಡುವುದಾಗಿ ಹರಿಯಾಣ ಸರ್ಕಾರಗಳು ಹೇಳಿವೆ.