ಪಠಾಣ್ಕೋಟ್ (ಪಂಜಾಬ್): ಬಾಲಿವುಡ್ ನಟ ಮತ್ತು ಗುರುದಾಸ್ಪುರ ಕ್ಷೇತ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಸನ್ನಿ ಡಿಯೋಲ್ ಅವರು ಪಠಾಣ್ಕೋಟ್ನಲ್ಲಿ ತಮ್ಮ 3 ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುವ ವೇಳೆ ಅವರು ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿದೆ.
ಭಾಷಣದ ವೇಳೆ ಅವರು, ನೀವು ಆರಿಸಿ ಕಳುಹಿಸಿದ ವ್ಯಕ್ತಿಯಿಂದಾಗಿ ನಿಮಗೆ ತೊಂದರೆಯಾಗುತ್ತಿದೆ ಎಂದು ಸರ್ಕಾರಿ ನೌಕರರು ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ನಾನು ಇಂಥ ಸಣ್ಣಪುಟ್ಟ ವಿಚಾರಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದ್ರೆ, ಯಾರನ್ನಾದರೂ ಸೋಲಿಸಲು, ಹಿಮ್ಮೆಟ್ಟಿಸಲು ಬಯಸುವುದಾದರೆ ನಾನು ಸದಾ ಲಭ್ಯ. ಈ ನಿಟ್ಟಿನಲ್ಲಿ ನನಗಿಂತ ಯಾರೂ ಬಲಶಾಲಿಯಲ್ಲ ಎಂದು ಸನ್ನಿ ಡಿಯೋಲ್ ಹೇಳಿದ್ದರು.
ಸನ್ನಿ ಹೇಳಿಕೆಯನ್ನು ಕಾಂಗ್ರೆಸ್ ಶಾಸಕ ಜೋಗಿಂದರ್ ಪಾಲ್ ಟೀಕಿಸಿದ್ದು, ಅವರಿಗೆ ರಾಜಕೀಯದ ಬಗ್ಗೆ ಜ್ಞಾನವಿಲ್ಲ. ರಾಜಕೀಯವನ್ನು ಅವರು ಚಲನಚಿತ್ರಗಳನ್ನು ಮಾಡುವಷ್ಟು ಸುಲಭ ಎಂದು ಭಾವಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಫೆಬ್ರವರಿ 15 ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸಲು ಮೂರು ದಿನಗಳ ಸುದೀರ್ಘ ರ್ಯಾಲಿಯ ಪ್ರಾರಂಭದಲ್ಲಿ ಡಿಯೋಲ್ ಮಾತನಾಡಿದ್ದಾರೆ.