ನವದೆಹಲಿ : ಯಾರಾದರೂ ಹಿಂದೂಗಳಾಗಿದ್ದರೆ ಅವರು ದೇಶಭಕ್ತರಾಗಿರುತ್ತಾರೆ, ಅದು ಅವರ ಮೂಲ ಸ್ವಭಾವವಾಗಿರುತ್ತದೆ ಎಂದು ದೇಶ ಪ್ರೇಮವು ಧರ್ಮದಿಂದ ಹುಟ್ಟಿಕೊಂಡಿದೆ ಎಂಬ ಮಹಾತ್ಮ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಜೆ.ಕೆ ಬಜಾಜ್ ಮತ್ತು ಎಂ.ಡಿ ಶ್ರೀನಿವಾಸ್ ಬರೆದಿರುವ, '' ಮೇಕಿಂಗ್ ಆಫ್ ಎ ಹಿಂದೂ ಪ್ಯಾಟ್ರಿಯೋಟ್ : ಬ್ಯಾಗ್ರೌಂಡ್ ಆಫ್ ಗಾಂಧೀಜೀಸ್ ಹಿಂದ್ ಸ್ವರಾಜ್ '' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಮತ್ತು ಸಂಘದ ಕುರಿತಾಗಿ ಕೆಲವರು ಊಹಾಪೋಹಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ, ಆ ರೀತಿ ಮಾಡುವ ಅವಶ್ಯಕತೆಯಿಲ್ಲ. ಗಾಂಧೀಜಿಗಿಂತ ಉನ್ನತ ವ್ಯಕ್ತಿತ್ವ ಬೇರೆ ಯಾರೂ ಇಲ್ಲ ಎಂದರು.
ಓದಿ: ನಿಲ್ಲದ ಪಾಕ್ ದುಷ್ಕೃತ್ಯ: ಗುಂಡಿನ ದಾಳಿಗೆ ಓರ್ವ ಯೋಧ ಹುತಾತ್ಮ
ಗಾಂಧಿಯ ಕುರಿತಾದ ಪುಸ್ತಕದ ಬಗ್ಗೆ ವಿವರಿಸಿದ ಭಾಗವತ್, ಗಾಂಧೀಜಿಯವರು ಧರ್ಮ ಮತ್ತು ದೇಶಭಕ್ತಿ ಭಿನ್ನವಾಗಿರಬಾರದು ಎಂದು ಹೇಳಿದ್ದಾರೆ. ಯಾಕೆಂದರೆ ಅವರ ಮಾತೃಭೂಮಿಯ ಮೇಲಿನ ಪ್ರೀತಿ ಅವರ ಆಧ್ಯಾತ್ಮಿಕತೆಯಿಂದ ಹುಟ್ಟಿಕೊಂಡಿತ್ತು. ಗಾಂಧೀಜಿಯವರು ತಮ್ಮ ದೇಶ ಪ್ರೇಮವು ಅವರ ಧರ್ಮದಿಂದ ಹುಟ್ಟಿಕೊಂಡಿದೆ ಎಂದು ಹೇಳಿದ್ದಾರೆ. ಧರ್ಮ ಎಂದರೆ ಕೇವಲ ಧರ್ಮ ಎಂದರ್ಥವಲ್ಲ, ಅದು ಧರ್ಮಕ್ಕಿಂತ ವಿಶಾಲವಾಗಿದೆ ಎಂದು ಹೇಳಿದರು.
ಯಾರಾದರೂ ಹಿಂದೂ ಆಗಿದ್ದರೆ ಅವನು ದೇಶಭಕ್ತನಾಗಿರಬೇಕು, ಅದು ಅವನ ಅಥವಾ ಅವಳ ಮೂಲ ಗುಣ ಮತ್ತು ಸ್ವಭಾವವಾಗಿರುತ್ತದೆ. ಕೆಲವೊಮ್ಮೆ ನೀವು ಅವನ ಅಥವಾ ಅವಳ ದೇಶಭಕ್ತಿಯನ್ನು ಜಾಗೃತಗೊಳಿಸಬೇಕಾಗಬಹುದು. ಆದರೆ, ಅವನು (ಹಿಂದೂ) ಎಂದಿಗೂ ಭಾರತ ವಿರೋಧಿಯಾಗಲು ಸಾಧ್ಯವಿಲ್ಲ. ಒಬ್ಬ ತನ್ನ ದೇಶವನ್ನು ಪ್ರೀತಿಸಿದರೆ, ಅದು ನೆಲದ ಮೇಲಿನ ಪ್ರೀತಿ ಮಾತ್ರವಲ್ಲ, ಇಲ್ಲಿನ ಜನ, ನದಿ, ಸಂಸ್ಕೃತಿ, ಸಂಪ್ರದಾಯಗಳು ಎಲ್ಲವೂ ಎಂದು ಭಾಗವತ್ ಅಭಿಪ್ರಾಯಪಟ್ಟರು.