ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕತ್ವ ಬದಲಾವಣೆ ಕುರಿತು ಸೋಮವಾರ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ (ಸಿಡಬ್ಲ್ಯುಸಿ) ಅಸಮಾಧಾನ ಸ್ಪೋಟಗೊಂಡಿದ್ದು, ಪೂರ್ಣಾವಧಿ ಅಧ್ಯಕ್ಷ ಸ್ಥಾನವನ್ನು ಆಯ್ಕೆ ಮಾಡಿ ಪಕ್ಷದ 23 ಹಿರಿಯ ನಾಯಕರು ಸೋನಿಯಾ ಗಾಂಧಿಗೆ ಬರೆದಿದ್ದರು. ಈ ಪತ್ರದ ವಿರುದ್ಧ ರಾಹುಲ್ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ ಕೆಲ ಹಿರಿಯ ಮುಖಂಡರ ವಿರುದ್ಧ ರಾಹುಲ್ ಕೆಂಡಾಮಂಡಲರಾದರು. ಬಿಜೆಪಿಗೆ ನೆರವು ನೀಡಿದ ಆರೋಪ ಮಾಡಿದರು. ಇದು ಸಭೆಯಲ್ಲಿ ಭಾರಿ ವಾಗ್ವಾದಕ್ಕೆ ಕಾರಣವಾಯ್ತು ಎಂದು ಹೇಳಲಾಗಿದೆ.
ಪಕ್ಷದ ಹಿರಿಯ ನಾಯಕರು ಬರೆದಿರುವ ಪತ್ರವನ್ನು ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ಯಾಕೆ? ಇಷ್ಟಕ್ಕೂ ಪತ್ರ ಬರೆದಿದ್ದೇಕೆ? ಬಿಜೆಪಿ ನಾಯಕರೊಂದಿಗೆ ಒಡಂಬಡಿಕೆ ಮಾಡಿಕೊಂಡ ನಂತರ ಪತ್ರ ಬರೆದಿದ್ದಾರೆ. ಪತ್ರ ಬರೆದ ಮುಖಂಡರು ಬಿಜೆಪಿಯೊಂದಿಗೆ ತಂತ್ರ ರೂಪಿಸಿದ್ದಾರೆ ಎಂದು ರಾಗಾ ಸಭೆಯಲ್ಲಿ ಆರೋಪಿಸಿದ್ದಾರೆ ಎಂಬುದು ಗೊತ್ತಾಗಿದೆ.
ರಾಹುಲ್ ಗಾಂಧಿ ಮಾಡಿದ ಆರೋಪಕ್ಕೆ ಪಕ್ಷದ ಹಿರಿಯ ನಾಯಕರು ಕೆಂಡಾ ಮಂಡಲರಾಗಿದ್ದು, ಮಾಡಿರುವ ಆರೋಪ ಸಾಬೀತಾದರೆ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಆಜಾದ್ ತಮ್ಮ ಅಸಮಧಾನ ಹೊರಹಾಕಿದ್ದಾರೆ. ರಾಹುಲ್ ಆರೋಪವನ್ನು ಖಂಡಿಸಿರುವ ಕಪಿಲ್ ಸಿಬಲ್ ಅವರು ಕಳೆದ 30 ವರ್ಷದಲ್ಲಿ ಬಿಜೆಪಿ ಪರವಾಗಿ ಯಾವುದೇ ರೀತಿ ಒಂದೇ ಒಂದು ಹೇಳಿಕೆ ನೀಡಿಲ್ಲ. ಇಷ್ಟಾದರೂ ರಾಹುಲ್ ಗಾಂಧಿ ಅವರು ನಮ್ಮ ವಿರುದ್ಧ ಹೀಗೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ನಡೆದಿದ್ದೇನು?: ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ (ಸಿಡಬ್ಲ್ಯುಸಿ) ನಡೆಯುತ್ತಿದ್ದು, ಪಕ್ಷದ ಮಧ್ಯಂತರ ಅಧ್ಯಕ್ಷ ಸ್ಥಾನದಿಂದ ನನ್ನನ್ನು ತೆರವುಗೊಳಿಸಿ ದಕ್ಷ ನಾಯಕನನ್ನು ನೇಮಿಸಿ ಎಂದು ಸೋನಿಯಾ ಅವರು ಸಭೆಯಲ್ಲಿ ಒತ್ತಾಯಿಸಿದ್ದರು.
ಮುಖಂಡರು, ಸಂಸದರು, ಮಾಜಿ ಕೇಂದ್ರ ಸಚಿವರು ಸೇರಿದಂತೆ ಕಾಂಗ್ರೆಸ್ನ 23 ನಾಯಕರು ಪಕ್ಷದಲ್ಲಿ ಪೂರ್ಣಾವಧಿ, ದಕ್ಷ, ಪರಿಣಾಮಕಾರಿ ನಾಯಕತ್ವ ಹಾಗೂ ಸುಧಾರಣೆಗಳ ಅಗತ್ಯವಿದೆ ಮತ್ತು ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು.
ಪತ್ರ ಬಂದ ನಂತರ ಸೋನಿಯಾ ಗಾಂಧಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿ ಅವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿ ಎಂದು ಒತ್ತಾಯಿಸಿದ್ದಾರೆ. ಅದನ್ನು ತಿರಸ್ಕರಿಸಿರುವ ಸೋನಿಯಾ ಗಾಂಧಿ, ನೂತನ ಮುಖ್ಯಸ್ಥರ (ಪೂರ್ಣಾವಧಿ) ನೇಮಕಕ್ಕೆ ಪ್ರಕ್ರಿಯೆ ನಡೆಸಿ ಎಂದಿದ್ದಾರೆ.
ಬಲವಾದ ನಾಯಕತ್ವವನ್ನು ನೀಡಲು ಕಾಂಗ್ರೆಸ್ನಲ್ಲಿ ಬೇರೆ ನಾಯಕರು ಇಲ್ಲ. ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರೆಯಲಿ. ಒಂದು ವೇಳೆ ಸೋನಿಯಾ ತಮ್ಮ ನಿಲುವನ್ನು ಬದಲಿಸಿದರೆ, ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷರಾಗಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತ್ತು.