ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ಖಾಸಗಿ ಅನುಯಾಯಿಗಳಿಂದ ಅಕ್ರಮವಾಗಿ ಮದ್ಯ ಸಾಗಿಸಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ನನ್ನು ಅಮಾನತು ಮಾಡಲಾಗಿದೆ.
ಅನಪರ್ತಿ ವಲಯದ ಕುತುಕುಲೂರ್ ಎಂಬ ಗ್ರಾಮದಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಯನ್ನು ಕಳೆದ ಒಂದು ವಾರದಿಂದ ಮುಚ್ಚಲಾಗಿದೆ. ಆದ್ರೆ ತನ್ನ ಅನುಯಾಯಿಗಳನ್ನು ಕಳುಹಿಸಿ ಮದ್ಯ ತರುವಂತೆ ಅಬಕಾರಿ ಸಿಐ ತ್ರಿನಾಥ್ ರೆಡ್ಡಿ ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕುತುಕುಲೂರ್ ತ್ರನಾಥ್ ರೆಡ್ಡಿ ಸಹಚರರು ಮದ್ಯ ಸಾಗಿಸುವಾಗ ಅನುಮಾನಗೊಂಡ ಗ್ರಾಮಸ್ಥರು ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ಕಂಗಾಲಾದ ಸಹಚರರು ಅಬಕಾರಿ ಸಿಐಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಬಕಾರಿ ಸಿಐ ತ್ರಿನಾಥ್ ರೆಡ್ಡಿ ಗೊಂದಲದ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಅನಪರ್ತಿ ಶಾಸಕ ಸತ್ತಿ ಸೂರ್ಯನಾರಾಯಣ ರೆಡ್ಡಿ ಅಧಿಕಾರಿಯನ್ನು ಪ್ರಶ್ನಿಸಿದಾಗ ಅಸಲಿ ವಿಷಯ ಬಯಲಾಗಿದೆ.
ಘಟನೆ ಬಗ್ಗೆ ಶಾಸಕ ಸೂರ್ಯನಾರಾಯಣ ಅವರು ಅನಪರ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಬಕಾರಿ ಅಧೀಕ್ಷಕ ನಾಗ ಪ್ರಭು ಕುಮಾರ್ ಅವರು, ತ್ರಿನಾಥ್ ರೆಡ್ಡಿಯನ್ನು ಅಮಾನತುಗೊಳಿಸಿದ್ದಾರೆ.