ಮೀರತ್ (ಉತ್ತರ ಪ್ರದೇಶ): ಕೋವಿಡ್ನಿಂದ ಸಾವನ್ನಪ್ಪಿದವರ ಮೃತದೇಹ ಅದಲು ಬದಲಾಗಿ ಕುಟುಂಬವರಿಗೆ ಸೇರಿದ ಘಟನೆ ಉತ್ತರ ಪ್ರದೆಶದ ಮೀರತ್ನಲ್ಲಿ ಬೆಳಕಿಗೆ ಬಂದಿದೆ.
ಕೋವಿಡ್ನಿಂದ ಮೃತಪಟ್ಟ 84 ವರ್ಷದ ತಮ್ಮ ಕುಟುಂಬ ಸದಸ್ಯನ ಅಂತ್ಯಕ್ರಿಯೆ ನಡೆಸುವ ವೇಳೆ, ಅಂತಿಮ ದರ್ಶನ ಪಡೆಯಲು ಮನೆಯ ಸದಸ್ಯರೊಬ್ಬರು ದೇಹದ ಮುಖ ನೋಡಿದಾಗ ವಿಷಯ ಬೆಳಕಿಗೆ ಬಂದು, ಕೂಡಲೇ ಅಂತ್ಯಸಂಸ್ಕಾರ ನಿಲ್ಲಿಸಿದ್ದಾರೆ.
ಕುಟುಂಬವು ಕೊರೊನಾ ಸೋಂಕಿನಿಂದ ಮೃತಪಟ್ಟ 50 ವರ್ಷದ ಬೇರೊಂದು ವ್ಯಕ್ತಿಯ ಶವ ದಹನಮಾಡಲು ಹೊರಟಿದ್ದಾಗ ಕೊನೆಯ ಘಳಿಗೆಯಲ್ಲಿ ವಿಷಯ ತಿಳಿದಿದೆ.
ಮೀರತ್ನ ಕುಟುಂಬವು ಅವರ ಕುಟುಂಬ ಸದಸ್ಯನ ಮೃತದೇಹ ಕೊಂಡೊಯ್ದ ಕುಟುಂಬವನ್ನು ಸಂಪರ್ಕಿಸುವಾಗ ತುಂಬಾ ತಡವಾಗಿತ್ತು. ಏಕೆಂದರೆ ಮೋದಿನಗರದ ಆ ಕುಟುಂಬವು ಶವಸಂಸ್ಕಾರ ಮುಗಿಸಿ, ಚಿತಾಭಸ್ಮವನ್ನು ಹೊತ್ತುಕೊಂಡು ಹೋಗುತ್ತಿದ್ದರು. ತಾವು ಅಂತ್ಯಸಂಸ್ಕಾರ ನಡೆಸಿದ ಮೃತದೇಹ ತಮ್ಮ ಕುಟುಂಬ ಸದಸ್ಯನದ್ದಲ್ಲ ಎಂಬ ಮಾಹಿತಿಯೇ ಅವರಿಗಿರಲಿಲ್ಲ.
ಈ ವಿಷಯದ ಕುರಿತು ವೃದ್ಧನ ಕುಟುಂಬವು ಎಲ್ಎಲ್ಆರ್ಎಂ ವೈದ್ಯಕೀಯ ಕಾಲೇಜನ್ನು ಸಂಪರ್ಕಿಸಿದಾಗ, ಕೋವಿಡ್ -19 ರೋಗಿಯ ಶವವನ್ನು ಬಿಚ್ಚಿದ ಕಾರಣ ಅಲ್ಲಿನ ಅಧಿಕಾರಿಗಳು ಕುಟುಂಬದವರಿಗೆ ಗದರಿಸಿದ್ದಾರೆ.
"ಕುಟುಂಬದ ಹಿರಿಯ ವ್ಯಕ್ತಿಯನ್ನು ಕೊನೆಯ ಬಾರಿಗೆ ನೋಡಬೇಕೆಂದು ಕೆಲವು ಕುಟುಂಬ ಸದಸ್ಯರು ಒತ್ತಾಯಿಸಿದ್ದರಿಂದ ನಾವು ಮೃತದೇಹವನ್ನು ಸುತ್ತಿದ್ದ ಕವರ್ ಬಿಡಿಸಿದ್ದೆವು. ಆಗ ಅದು ಬೇರೊಬ್ಬರ ಮೃತದೇಹ ಎಂದು ನಮಗೆ ತಿಳಿದುಬಂದಿದೆ. ನಾವು ಎಲ್ಎಲ್ಆರ್ಎಂ ವೈದ್ಯಕೀಯ ಕಾಲೇಜನ್ನು ಸಂಪರ್ಕಿಸಿದಾಗ, ಅವರ ಅವರ ತಪ್ಪನ್ನು ಸ್ವೀಕರಿಸುವ ಬದಲು, ಮೃತ ದೇಹದ ಕವರ್ ಬಿಚ್ಚಿದ್ದಕ್ಕಾಗಿ ನಮ್ಮ ಮೇಲೆ ಕೂಗಲು ಪ್ರಾರಂಭಿಸಿದರು" ಎಂದು ಮೃತ ವೃದ್ಧನ ಸೋದರಳಿಯ ತಿಳಿಸಿದ್ದಾರೆ.
"ಈ ಕುರಿತು ಕರೆ ಬಂದಾಗ ನಾವು ಅಂತ್ಯಕ್ರಿಯೆ ಮಾಡಿಯಾಗಿತ್ತು. ನಾವು ಬೇರೊಬ್ಬ ವ್ಯಕ್ತಿಯ ಅಂತಿಮ ವಿಧಿಗಳನ್ನು ನೆರವೇರಿಸಿದ್ದೇವೆ ಎಂದು ನಮಗೆ ಬಳಿಕ ತಿಳಿಯಿತು" ಎಂದು 50 ವರ್ಷದ ವ್ಯಕ್ತಿಯ ಮಗ ಹೇಳಿದ್ದಾರೆ.
ನಂತರ ಮಧ್ಯವಯಸ್ಕ ವ್ಯಕ್ತಿಯ ಶವವನ್ನು ಮೋದಿನಗರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಮೀರತ್ ಕುಟುಂಬಕ್ಕೆ ಚಿತಾಭಸ್ಮವನ್ನು ನೀಡಲಾಯಿತು.
ಈ ಕುರಿತು ತನಿಖೆ ನಡೆಸಲು ಜಿಲ್ಲಾಧಿಕಾರಿ ಅನಿಲ್ ಧಿಂಗ್ರಾ ಆದೇಶಿಸಿದ್ದಾರೆ. ಘಟನೆ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಮುಖ್ಯ ವೈದ್ಯಾಧಿಕಾರಿಗಳ ತಂಡ ತನಿಖೆ ನಡೆಸಲಿದೆ ಎಂದು ಧಿಂಗ್ರಾ ತಿಳಿಸಿದ್ದಾರೆ.
"ಕರ್ತವ್ಯದಲ್ಲಿದ್ದ ವೈದ್ಯರು, ದಾದಿ ಮತ್ತು ವಾರ್ಡ್ ಬಾಯ್ ಈ ಕುರಿತು ವಿವರಣೆ ನೀಡುವಂತೆ ಕೇಳಿಕೊಳ್ಳಲಾಗಿದೆ" ಎಂದು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜು (ಎಲ್ಎಲ್ಆರ್ಎಂ) ಪ್ರಾಂಶುಪಾಲ ಜ್ಞಾನೇಂದ್ರ ಕುಮಾರ್ ಹೇಳಿದ್ದಾರೆ.