ಅಲಿಗಢ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಒಂದು ಸಣ್ಣ ಕಚೋರಿ ಅಂಗಡಿಯ ಮಾಲೀಕ ವಾಣಿಜ್ಯ ತೆರಿಗೆ ಅಧಿಕಾರಿಗಳೇ ಮೂರ್ಛೆ ಹೋಗುವ ರೀತಿ ಮಾಡಿದ್ದಾನೆ.
ಅಲಿಘಢದ ಸೀಮಾ ಸಿನೆಮಾ ಹಾಲ್ ಸಮೀಪ ಮುಖೇಶ್ ಒಡೆತನದ ಸಣ್ಣದಾದ 'ಮುಕೇಶ್ ಕಚೋರಿ' ಅಂಗಡಿ ಇದೆ. ಇಲ್ಲಿ ಸಿಗುವ ಸಿಗುವ ಕಚೋರಿ ಅಂದ್ರೆ, ಸ್ಥಳೀಯರಿಗಂತೂ ಪಂಚಪ್ರಾಣ. ಈ ಅಂಗಡಿಯಲ್ಲಿ ಮುಖೇಶ್ ಬೆಳಗ್ಗಿನಿಂದ ಸಂಜೆಯವರೆಗೂ ಕಚೋರಿ ಹಾಗು ಸಮೋಸಾಗಳನ್ನು ಮಾರಾಟ ಮಾಡುತ್ತಾರೆ. ವಿಶೇಷ ಅಂದ್ರೆ, ನೀವಿಲ್ಲಿ ಕಚೋರಿ ಖರೀದಿಸಿ ತಿನ್ನಬೇಕಾದ್ರೆ ದಿನದ ಯಾವುದೇ ಸಮಯದಲ್ಲಾದ್ರೂ ಸರತಿ ಸಾಲಲ್ಲಿ ನಿಲ್ಲಲೇಬೇಕು. ಯಾಕಂದ್ರೆ ಅಷ್ಟೊಂದು ಜನದಟ್ಟನೆ ಇಲ್ಲಿರುತ್ತಿದೆ. ಅಷ್ಟೊಂದು ಫೇಮಸ್ ಈ ದುಖಾನ್!
ಆದ್ರೆ, ತೀರಾ ಇತ್ತೀಚೆಗಿನವರೆಗೂ ವ್ಯಾಪಾರ ಚೆನ್ನಾಗೇ ಇತ್ತು. ಕೈ ತುಂಬಾ ಅಂದ್ರೆ, ಲಕ್ಷಗಟ್ಟಲೆ ಹಣನೂ ಬರ್ತಾ ಇತ್ತು. ಆದ್ರೆ, ಯಾರೋ ಈತ ಸರಿಯಾಗಿ ತೆರಿಗೆ ಪಾವತಿಸುತ್ತಿಲ್ಲ ಎಂಬುದಾಗಿ ಕಮರ್ಶಿಯಲ್ ಟ್ಯಾಕ್ಸ್ ಇಲಾಖೆಗೆ ದೂರು ಕೊಟ್ಟಿದ್ದಾರೆ. ಈತನ ಕಚೋರಿ ಅಂಗಡಿ ಜಿಎಸ್ಟಿ ಅಡಿ ನೋಂದಾವಣಿಯಾಗದ ಹಿನ್ನೆಲೆ ಹಾಗು ಸರ್ಕಾರಕ್ಕೆ ಯಾವುದೇ ತೆರಿಗೆ ಕಟ್ಟದ ಕಾರಣ ನೀಡಿ ಇಲಾಖೆ ಅಧಿಕಾರಿಗಳು ಈತನಿಗೆ ನೋಟಿಸ್ ಜಾರಿ ಮಾಡಿದ್ದರು.
ಮುಕೇಶ್ ಹೇಳೋದೇನು?
ಈ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಕಳೆದ 12 ವರ್ಷಗಳಿಂದ ಈ ಅಂಗಡಿ ನಡೆಸುತ್ತಿದ್ದೇನೆ. ಜಿಎಸ್ಟಿ ಬಳಿ ನನ್ನ ಅಂಗಡಿಯನ್ನು ನೋಂದಾವಣಿ ಮಾಡಿಕೊಳ್ಳಬೇಕು ಎಂದು ನನಗೆ ಯಾರೂ ಹೇಳಿಲ್ಲ. ನಾವು ಜನಸಾಮಾನ್ಯರಾಗಿದ್ದು, ಕಚೋರಿ ಹಾಗು ಸಮೋಸ ಮಾರುವ ಮೂಲಕ ಬದುಕು ನಡೆಸುತ್ತಿದ್ದೇವೆ ಎಂದು ಹೇಳುತ್ತಾರೆ ಅಂಗಡಿ ಮಾಲೀಕ ಮುಕೇಶ್.
ಆದ್ರೆ, ರಾಜ್ಯ ಗುಪ್ತಚರ ಇಲಾಖೆಯ, ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ವ್ಯಾಪಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ದಾಖಲೆ ಸಮೇತ ಮುಕೇಶ್ ಕೊಟ್ಟಿದ್ದಾರೆ. ತಿಂಡಿ ತಯಾರಿಸಲು ಬೇಕಿರುವ ಕಚ್ಚಾ ಪದಾರ್ಥಗಳು, ಎಣ್ಣೆ ಹಾಗು ಎಲ್ಪಿ ಗ್ಯಾಸ್ ಇತ್ಯಾದಿ ಎಲ್ಲಾ ಮಾಹಿತಿಯನ್ನೂ ಅವರು ನೀಡಿದ್ದಾರೆ ಎಂದು ಹೇಳಿದ್ದಾರೆ.
ಜಿಎಸ್ಟಿ ನಿಯಮ ಏನು ಹೇಳುತ್ತೆ?
ವಾರ್ಷಿಕ ಟರ್ನ್ ಒವರ್ 40 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿರುವ ಯಾವುದೇ ಅಂಗಡಿ ಮುಂಗಟ್ಟುಗಳು ಜಿಎಸ್ಟಿ ನೋಂದಾವಣಿ ಆಗಲೇಬೇಕಿದೆ. ಜೊತೆಗೆ ಉತ್ಪಾದಿತ ಆಹಾರ ಪದಾರ್ಥಗಳ ಮೇಲೆ ಶೇ 5 ರಷ್ಟು ತೆರಿಗೆ ಕಟ್ಟಬೇಕಿದೆ.