Live: ರಾಘವೇಂದ್ರಸ್ವಾಮಿಗಳ ವಿಜೃಂಭಣೆಯ ಉತ್ತರಾಧನೆ ಸಂಭ್ರಮ - Aradhana Mahotsava
Published : Aug 22, 2024, 12:43 PM IST
|Updated : Aug 22, 2024, 2:56 PM IST
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ (ETV Bharat)
ರಾಯಚೂರು: ಕಲಿಯುಗದ ಕಾಮಧೇನು ಪ್ರಸಿದ್ಧಿಯ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ಮಠದಲ್ಲಿಂದು ಉತ್ತರಾಧನೆ ಸಂಭ್ರಮ ಮನೆ ಮಾಡಿದೆ. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಮ್ಮುಖದಲ್ಲಿ ರಾಯರ ಆರಾಧನೆ ನಡೆಯುತ್ತಿದ್ದು, ಸಂಸದ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾಗಿದ್ದಾರೆ. ರಾಯರ ಆರಾಧನಾ ಮಹೋತ್ಸವ ಹಿನ್ನೆಲೆ ರಾಯರ ಮಠದಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ನಿನ್ನೆ ರಾತ್ರಿಯಿಂದಲೇ ವಿವಿಧ ಕಾರ್ಯಕ್ರಮಗಳಲ್ಲಿ ನಡೆಯುತ್ತಿದ್ದು, ಯದುವೀರ್ ಭಾಗಿಯಾಗಿದ್ದಾರೆ. ಉತ್ತರಾಧನೆ ಹಿನ್ನೆಲೆಯಲ್ಲಿ ವಸಂತ ಉತ್ಸವ ಬಳಿಕ ರಾಯರ ಮಹಾರಥೋತ್ಸವ ನಡೆಯಲಿದ್ದು, ಸಂಸದ ಯದುವೀರ್ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಬಂದ ಭಕ್ತ ಗಣ ಆರಾಧನಾ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಇನ್ನು ನಿನ್ನೆ ರಾತ್ರಿಯೇ ಶ್ರೀಮಠಕ್ಕೆ ಆಗಮಿಸಿದ ಸಂಸದ ಯದುವೀರ್ ಅವರಿಗೆ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಸ್ವಾಗತ ಮಾಡಿದರು. ಸ್ವಾಗತದ ಬಳಿಕ ಯದುವೀರ್ ಮಂಚಾಲಮ್ಮ ಹಾಗೂ ಮೂಲ ರಾಯರ ವೃಂದಾವನದ ದರ್ಶನ ಪಡೆದುಕೊಂಡರು. ಇದಾದ ಬಳಿಕ ಇಲ್ಲಿನ ಶಿಲಾಮಂಟಪದ ಮುಂಭಾಗದಲ್ಲಿ ವಿನ್ಯಾಸಗೊಳಿಸಲಾದ ಚಿನ್ನದ ಲೇಪನದ ಕವಚ ಉದ್ಘಾಟಿಸಿದರು. ಇಂದು ಯದುವೀರ್ ಅವರಿಗೆ ರಾಯರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
Last Updated : Aug 22, 2024, 2:56 PM IST