300 ಅಡಿ ಆಳದ ಬಾವಿಗೆ ಬಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ: ವಿಡಿಯೋ
Published : Feb 28, 2024, 4:27 PM IST
ಹುಬ್ಬಳ್ಳಿ(ಧಾರವಾಡ): ಮಾನಸಿಕ ಅಸ್ವಸ್ಥನೊಬ್ಬ ಅಂದಾಜು 300 ಅಡಿ ಆಳದ ಬಾವಿಗೆ ಬಿದ್ದಿದ್ದು, ಸುರಕ್ಷಿತವಾಗಿ ಮೇಲಕ್ಕೆತ್ತಿರುವ ಘಟನೆ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದಲ್ಲಿ ನಡೆಯಿತು. ತರ್ಲಘಟ್ಟ ಗ್ರಾಮದ ಮಾಲತೇಶ ನಿಲ್ಲಪ್ಪ ಮಾವನೂರ (16) ರಕ್ಷಿಸಲ್ಪಟ್ಟ ವ್ಯಕ್ತಿ.
ಮಂಗಳವಾರ ರಾತ್ರಿ ಮನೆಯಿಂದ ಹೊರಬಂದ ಮಾಲತೇಶ ಏಕಾಏಕಿ ಬಾವಿಗೆ ಹಾರಿದ್ದಾರೆ. ಸದ್ದು ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ವ್ಯಕ್ತಿ ಮೇಲೆ ದಾಳಿ ಮಾಡಿದ್ದ ಕರಡಿ ಸೆರೆ
ಹಗ್ಗವನ್ನು ಒಂದು ಬುಟ್ಟಿಗೆ ಕಟ್ಟಿ ಬಾವಿಯೊಳಗೆ ಬಿಟ್ಟು, ಸುಮಾರು 2 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಮಾಲತೇಶನನ್ನು ಮೇಲೆತ್ತಲಾಗಿದೆ. ಬಾವಿಯಲ್ಲಿ ನೀರಿಲ್ಲದ ಕಾರಣ ಪ್ಲಾಸ್ಟಿಕ್, ಮುಳ್ಳುಕಂಟಿಗಳು ತುಂಬಿದ್ದವು. ಇದರಿಂದಾಗಿ ಕೈ, ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಅಲ್ಲಾಭಕ್ಷ ಕಲಾಯಿಗಾರ, ಸತೀಶ ಎಸ್, ಹೊನ್ನಪ್ಪ ಕೆ., ರಾಜು ಜಾದವ್, ವಿ.ವೈ.ದೊಡ್ಡವಾಡ, ರೋಹನ್ ಸೇರಿದಂತೆ ಹಲವರು ಇದ್ದರು.