ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಹಾಲಿನ ಬೆಲೆಯನ್ನೂ ಏರಿಸುವ ಮೂಲಕ ಗ್ರಾಹಕರ ಮೇಲೆ ಬರೆ ಎಳೆದಿರುವ ರಾಜ್ಯ ಸರ್ಕಾರ, ರೈತರ ಸಂಕಷ್ಟವನ್ನು ಕೇಳುತ್ತಿಲ್ಲ ಎಂಬ ಬಗ್ಗೆ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ. ಕಳೆದ ಹತ್ತು ತಿಂಗಳಿಂದ ಹಾಲಿನ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡಿದ್ದ ಸರ್ಕಾರ, ಏಪ್ರಿಲ್ನಲ್ಲಿ 110 ಕೋಟಿ ರೂ. ಬಿಡುಗಡೆ ಮಾಡಿ ರೈತರ ಖಾತೆಗೆ ಜಮೆ ಮಾಡಿದೆ.
ರಾಜ್ಯದಲ್ಲಿ 14 ಹಾಲು ಉತ್ಪಾದಕರ ಒಕ್ಕೂಟಗಳಿವೆ. ಇದರಲ್ಲಿ 15 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಈ ಸಂಘಗಳಲ್ಲಿ 24 ಲಕ್ಷ ಮಂದಿ ನೋಂದಾಯಿತ ಹಾಲು ಉತ್ಪಾದಕರಿದ್ದಾರೆ. ಇವರಲ್ಲಿ ಪ್ರತಿದಿನ ಸುಮಾರು 9 ಲಕ್ಷ ಮಂದಿ ರೈತರು ಹಾಲು ಸರಬರಾಜು ಮಾಡುತ್ತಿದ್ದಾರೆ. ರಾಜ್ಯದಲ್ಲಿನ ಒಟ್ಟು 15,700 ಎಂಪಿಸಿಎಸ್ಗಳಿದ್ದು, ಸಾಮಾನ್ಯ ವರ್ಗ 7,98,691, ಪರಿಶಿಷ್ಟ ಜಾತಿ 46,285 ಹಾಗೂ ಪರಿಶಿಷ್ಟ ಪಂಗಡ 32,475 ಮಂದಿ ಪ್ರೋತ್ಸಾಹಧನ ಪಡೆಯುತ್ತಿರುವ ರೈತರಿದ್ದಾರೆ.
ರಾಜ್ಯ ಸರ್ಕಾರ ಹೈನುಗಾರಿಕೆ ನಡೆಸುವ ರೈತರಿಗೆ ಅನುಕೂಲವಾಗಲಿ ಎಂಬ ಕಾರಣದಿಂದಾಗಿ ಕ್ಷೀರಧಾರೆ ಹೆಸರಿನಲ್ಲಿ ಪ್ರತಿಯೊಬ್ಬ ರೈತರಿಗೂ ಲೀಟರ್ಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಈ ರೈತರಿಗೆ ಆಗಸ್ಟ್ 2023ರಿಂದ ಮಾರ್ಚ್ 2023ರವರೆಗೆ ಸುಮಾರು 1,083 ಕೋಟಿ ರೂ. ಪ್ರೋತ್ಸಾಹಧನ ಬಾಕಿ ಉಳಿದಿದೆ. ಆದರೆ 2023 ಆಗಸ್ಟ್ ತಿಂಗಳಿಂದ ಮೇ 2024ರವರೆಗೆ ಪ್ರೋತ್ಸಾಹ ಧನವನ್ನು ಪಾವತಿಸಿಲ್ಲ. ಏಪ್ರಿಲ್ 2024ರ ಒಂದು ತಿಂಗಳ ಪ್ರೋತ್ಸಾಹ ಧನವನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ.
ಹಾಲು ಉತ್ಪಾದಕ ರೈತರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಪ್ರತಿ ಲೀಟರ್ ಹಾಲಿಗೆ 2 ರೂ. ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಆರಂಭಿಸಿದ್ದರು. 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಪ್ರೋತ್ಸಾಹ ಧನವನ್ನು 4 ರೂ.ಗೆ ಹೆಚ್ಚಿಸಿದರು. 2015ರಲ್ಲಿ ಇದೇ ಸಿದ್ದರಾಮಯ್ಯನವರು ಪ್ರೋತ್ಸಾಹ ಧನವನ್ನು 5 ರೂ.ಗೆ ಹೆಚ್ಚಳ ಮಾಡಿದರು. ಆರಂಭದಿಂದಲೂ ರಾಜ್ಯ ಸರ್ಕಾರ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡು ಅಲ್ಪಸ್ವಲ್ಪ ಹಣವನ್ನು ಪಾವತಿ ಮಾಡುತ್ತಿತ್ತು. ಆದರೆ, ಹಿಂದಿನ ಯಾವ ಸಾಲಿನಲ್ಲಿಯೂ 10 ತಿಂಗಳ ಬಾಕಿ ಉಳಿಸಿಕೊಂಡಿರಲಿಲ್ಲ.
ಒಂದು ತಿಂಗಳ ಹಣ ಜಮೆಯಾಗಿರುವ ಬಗ್ಗೆ ಡೈರಿ ಕಾರ್ಯದರ್ಶಿಗಳು ಹಾಲು ಉತ್ಪಾದಕರಿಗೆ ಮಾಹಿತಿ ನೀಡುತ್ತಿದ್ದಾರೆ. ಆದರೆ, ಬಾಕಿ ಉಳಿದಿರುವ 8 ತಿಂಗಳ ಹಣ ಯಾವಾಗ ಕೊಡುತ್ತಾರೆ ಎಂದು ರೈತರು ಪ್ರಶ್ನಿಸಿದರೆ, ಯಾರೂ ಉತ್ತರಿಸುತ್ತಿಲ್ಲ. ಇನ್ನು ಬಿಜೆಪಿ ನಾಯಕರು ಸಹ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಾಮಾನ್ಯವಾಗಿ ರೈತರು, ಕೃಷಿ ಜೊತೆಗೆ ಪೂರಕವಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಮುಂಗಾರು ವೇಳೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಸೇರಿದಂತೆ ಹಲವಾರು ಖರ್ಚು ವೆಚ್ಚಗಳಿಗೆ ಹೈನುಗಾರಿಕೆಯಿಂದ ಬರುವ ಹಣವೇ ಆದಾಯವಾಗಿರುತ್ತದೆ.