ಕರ್ನಾಟಕ

karnataka

ETV Bharat / state

ಏರ್​ಪೋರ್ಟ್​ಗೆ ಹೋಗ್ತಿರಾ? ಹಾಗಾದರೆ ಎರಡು ಗಂಟೆ ಮುನ್ನವೇ ಪ್ರಯಾಣಿಸಿ: ಇದು ಸಂಚಾರ ಪೊಲೀಸರು ನೀಡುತ್ತಿರುವ ಸಲಹೆ - why we go to airport before 2 hours

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೀವು ಹೋಗಬೇಕಾದರೆ ಎರಡು ಗಂಟೆ ಮುನ್ನವೇ ಪ್ರಯಾಣಿಸಿ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

By ETV Bharat Karnataka Team

Published : Jul 11, 2024, 9:37 PM IST

Updated : Jul 11, 2024, 10:14 PM IST

Kempegowda Airport
ಕೆಂಪೇಗೌಡ ವಿಮಾನ ನಿಲ್ದಾಣ (IANS)

ಬೆಂಗಳೂರು: ನೀವೇನಾದರೂ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಬೇಕಾ? ಹಾಗಾದರೆ ಎರಡು ಗಂಟೆ ಮುನ್ನವೇ ಮನೆ ಬಿಡಿ. ಇಲ್ಲದಿದ್ದರೆ ಸಂಚಾರ ದಟ್ಟಣೆಯಾದೀತು..! ಈ ಮಾತನ್ನ ನಾವು ಹೇಳುತ್ತಿಲ್ಲ, ಬದಲಾಗಿ ನಗರದ ಸಂಚಾರ ಪೊಲೀಸರು ರಾಜಧಾನಿಯ ಸವಾರರಿಗೆ ಹೇಳುತ್ತಿರುವ ಕಿವಿಮಾತಿದು.

ಹೌದು, ಬೆಂಗಳೂರು-ಬಳ್ಳಾರಿ ರಸ್ತೆಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಹೆಬ್ಬಾಳ ಮೇಲುಸೇತುವೆ ಬಳಿ ಬಿಡಿಎ ಹಾಗೂ ಬಿಎಂಆರ್​ಸಿಎಲ್ ಸಂಸ್ಥೆಗಳು ವಿವಿಧ ಕಾಮಗಾರಿ ನಡೆಸುತ್ತಿರುವುದರಿಂದ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಅದರಲ್ಲೂ ಪೀಕ್ ಅವರ್​ನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಹೀಗಾಗಿ ಏರ್ ಪೋರ್ಟ್​ಗೆ ನಿಗದಿತ ವೇಳೆಗೆ ತಲುಪಬೇಕಾದರೆ ಎರಡು ಗಂಟೆ ಮುನ್ನವೇ ಪ್ರಯಾಣಿಸಿ ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಸಂಚಾರ ಪೊಲೀಸರ ಸಲಹೆ (ETV Bharat)

ವಿಮಾಣ ನಿಲ್ದಾಣ, ಹೊರರಾಜ್ಯ ಹಾಗೂ ಜಿಲ್ಲೆಗಳಿಗೆ ಸಂಪರ್ಕಿಸುವ ಹೆಬ್ಬಾಳ ಮೇಲುಸೇತುವೆಯಲ್ಲಿ ಪ್ರತಿದಿನ ಸುಮಾರು 2.50 ಲಕ್ಷ ವಾಹನಗಳು ಸಂಚರಿಸುತ್ತವೆ. ಪ್ಲೈ ಓವರ್ ಮೇಲೆ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿವೆ. ಹೀಗಾಗಿ ಸಂಚಾರ ದಟ್ಟಣೆ ನಿಯಂತ್ರಿಸಲು ಬಿಡಿಎ ಹಾಗೂ ಬಿಎಂಆರ್​ಸಿಎಲ್ ವಿವಿಧ ಕಾಮಗಾರಿ ಕೈಗೆತ್ತಿಕೊಂಡಿದ್ದರಿಂದ ಪರ್ಯಾಯ ಮಾರ್ಗ ಬಳಸುವಂತೆ ಟ್ರಾಫಿಕ್ ಪೊಲೀಸರು ಕೋರಿದ್ದಾರೆ.

ಕೆ. ಆರ್ ಪುರ ಮಾರ್ಗದಿಂದ ನಗರಕ್ಕೆ ತಲುಪಲು ಹೆಬ್ಬಾಳ ಮೇಲುಸೇತುವೆ ಅಗಲೀಕರಣ ಕಾಮಗಾರಿಯನ್ನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕಾಮಗಾರಿ ನಡೆಸಲಾಗುತ್ತಿದೆ. ಸುಮಾರು 200 ಮೀಟರ್​ವರೆಗೆ ಅಗಲೀಕರಣ ಕಾರ್ಯವಾಗಲಿದೆ. ಅದೇ ರೀತಿ ಹೆಬ್ಬಾಳ ಪೊಲೀಸ್ ಠಾಣೆ ಜಂಕ್ಷನ್​ನಿಂದ ನಗರದ ಕಡೆಗೆ ಹೆಚ್ಚುವರಿ ಮೇಲುಸೇತುವೆ ನಿರ್ಮಾಣ ಭರದಿಂದ ಸಾಗಿದ್ದು, ಬಿಡಿಎ ನಿರ್ವಹಣೆ ಮಾಡುತ್ತಿದೆ.

ಸಂಚಾರ ಪೊಲೀಸರ ಸಲಹೆ (ETV Bharat)

ಇನ್ನು ಹೆಬ್ಬಾಳ ಸುತ್ತಮುತ್ತ ಬಿಎಂಆರ್​ಸಿಎಲ್ ಮೆಟ್ರೊ ಕಾಮಗಾರಿ ಕೈಗೆತ್ತಿಕೊಂಡಿದೆ. ಕೆ. ಆರ್ ಪುರದಿಂದ ಹೆಬ್ಬಾಳ ಜಂಕ್ಷನ್​ಗೆ ತಲುಪುವ ಮಾರ್ಗದಲ್ಲಿ ಬರುವ ಕೆಂಪಾಪುರ, ವಿಮಾನ ನಿಲ್ದಾಣ ರಸ್ತೆಯ ಬ್ಯಾಟರಾಯಪುರ, ಕೊಡಿಗೇಹಳ್ಳಿಯಲ್ಲಿ ಮೆಟ್ರೊ ಕಾಮಗಾರಿ ನಡೆಸುತ್ತಿರುವುದರಿಂದ ಮಂದಗತಿಯಲ್ಲಿ ವಾಹನಗಳು ಸಂಚರಿಸುತ್ತಿವೆ. ಹೀಗಾಗಿ ನಿಗದಿತ ವೇಳೆಗೆ ಏರ್​ಪೋರ್ಟ್​ಗೆ ತಲುಪಲು ವಿಳಂಬವಾಗುತ್ತಿದೆ. ಹೀಗಾಗಿ ಅನ್ಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಕೆ. ಆರ್ ಪುರ ಕಡೆಯಿಂದ ಏರ್​ಪೋರ್ಟ್​ಗೆ ತಲುಪಲು ಬಳಸಬೇಕಾದ ಮಾರ್ಗಗಳು ಹೊರವರ್ತುಲ ರಸ್ತೆಯಲ್ಲಿ ಬಲತಿರುವು ಪಡೆದು ಹೆಣ್ಣುರು ಕ್ರಾಸ್-ಬಾಗಲೂರು ರಸ್ತೆಯ ಏರ್​ಪೋರ್ಟ್​ನ ಪರ್ಯಾಯ ರಸ್ತೆ ಮೂಲಕ ತಲುಪಬಹುದು. ನಾಗವಾರ ಬಳಿ ಬಲ ತಿರುವು ಪಡೆದು ಥಣಿಸಂದ್ರ, ಹೆಗ್ಗಡೆ ನಗರ ಮುಖ್ಯರಸ್ತೆ-ರೇವಾ ಜಂಕ್ಷಣ್ ಮೂಲಕ ತಲುಪಬಹುದು.

ಸಂಚಾರ ಪೊಲೀಸರ ಸಲಹೆ (ETV Bharat)

ಇನ್ನು ಕೆ. ಆರ್ ಪುರ ಕಡೆಯಿಂದ ನಗರ ಕಡೆಗೆ ಬರುವ ವಾಹನಗಳು ಐಓಸಿ-ಮುಕುಂದ ಥಿಯೇಟರ್ ರಸ್ತೆಯ ಲಿಂಗರಾಜಪುರ ಮೇಲುಸೇತುವೆ ಮಾರ್ಗದ ಮೂಲಕ ಹಾಗೂ ನಾಗವಾರ ಹಾಗೂ ಟ್ಯಾನರಿ ರಸ್ತೆ ಮೂಲಕ ನಗರ ಪ್ರವೇಶಿಸಬಹುದಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ಕೆಂಪೇಗೌಡ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್​ ಆಧುನೀಕರಣ - KIA ATC

Last Updated : Jul 11, 2024, 10:14 PM IST

ABOUT THE AUTHOR

...view details