ಕರ್ನಾಟಕ

karnataka

ETV Bharat / state

ಅಯೋಧ್ಯೆ ಬಾಲರಾಮನ ಮೂರ್ತಿ ಶಿಲೆ ಸಿಕ್ಕ ಹಾರೋಹಳ್ಳಿಯಲ್ಲಿ ಇಂದು ದೇಗುಲ ನಿರ್ಮಾಣಕ್ಕೆ ಚಾಲನೆ - TEMPLE CONSTRUCTION IN HAROHALI

ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಮೈಸೂರಿನ ಹಾರೋಹಳ್ಳಿಯ ಜಮೀನಿನಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣಕ್ಕೆ ಇಂದು ಚಾಲನೆ ಸಿಗಲಿದೆ.

TEMPLE CONSTRUCTION IN HAROHALI
ಬಾಲರಾಮನ ಮೂರ್ತಿ, ಶಿಲೆ ಸಿಕ್ಕ ಜಾಗ (ETV Bharat)

By ETV Bharat Karnataka Team

Published : Jan 22, 2025, 7:09 AM IST

ಮೈಸೂರು:ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾದ ಬಾಲರಾಮನ ಮೂರ್ತಿಗೆ ಶಿಲೆಯನ್ನು ನೀಡಿದ ಮೈಸೂರಿನ ಜಯಪುರ ಹೋಬಳಿಯ ಹಾರೋಹಳ್ಳಿ ಜಮೀನಿನಲ್ಲಿ ಕೊನೆಗೂ ಶ್ರೀರಾಮನ ದೇಗುಲ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ.

ಈ ಜಮೀನಿನಲ್ಲಿ ಶಿಲಾನ್ಯಾಸ ನೆರವೇರಿದ ವರ್ಷದ ಬಳಿಕ ರಾಮ ದೇಗುಲ ನಿರ್ಮಾಣಕ್ಕೆ ಚಾಲನೆ ಸಿಗಲಿದ್ದು, ದಕ್ಷಿಣದ ಅಯೋಧ್ಯೆಯಾಗಿ ಪರಿವರ್ತನೆಯಾಗಲಿದೆ. ಶಿಲೆ ನೀಡಿದ ಭೂಮಿಯ ಮಾಲೀಕ ರಾಮದಾಸ್ ಕುಟುಂಬದವರು ತಾವೇ ಗುಡಿ ನಿರ್ಮಾಣ ಮಾಡಲು ಸಕಲ ಸಿದ್ಧತೆ ನಡೆಸಿದ್ದು, ಇಂದು (ಜ.22ರಂದು) ಭೂಮಿ ಪೂಜೆ ನೆರವೇರಲಿದೆ. ಈಗಾಗಲೇ ಕುಟುಂಬಸ್ಥರು ಜಮೀನು ಹದ ಮಾಡಿ ದೇಗುಲ ನಿರ್ಮಾಣ ಕಾರ್ಯಕ್ಕೆ ಸಕಲ ಸಿದ್ಧತೆ ನಡೆಸಿದ್ದಾರೆ.

ಬಾಲರಾಮನ ಮೂರ್ತಿ ಶಿಲೆ ಸಿಕ್ಕ ಜಮೀನು (ETV Bharat)

ಕಳೆದ ಎರಡು ದಿನಗಳಿಂದ ಜಮೀನಿನಲ್ಲಿ ಸಚ್ಛತಾ ಕಾರ್ಯ ನಡೆಸುವುದರೊಂದಿಗೆ ಜೆಸಿಬಿ ಯಂತ್ರಗಳ ಮೂಲಕ ಜಮೀನಿನ ಮಣ್ಣನ್ನು ಮಟ್ಟ ಮಾಡಲಾಗಿದೆ. ಜತೆಗೆ ಭೂಮಿಯಲ್ಲಿ ಹುದುಗಿದ್ದ ರಾಮನ ಶಿಲೆ ಸಿಕ್ಕ ಬಂಡೆಯೊಂದಿಗೆ ಇತರ ಬಂಡೆಗಳನ್ನು ತೆರವುಗೊಳಿಸಲಾಗಿದೆ. ಗ್ರಾಮದಿಂದ ಜಮೀನಿಗೆ ರಸ್ತೆ ಸಂಪರ್ಕವನ್ನು ಸಹ ಮಾಡಲಾಗಿದೆ.

ದೇಗುಲ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಜತೆಗೆ ಅರುಣ್ ಯೋಗಿ ಅವರಿಂದಲೂ ಅಯೋಧ್ಯೆಯ ಮಾದರಿಯಲ್ಲಿಯೇ ಇಲ್ಲಿಯೂ ಶ್ರೀರಾಮನ ಮೂರ್ತಿ ಕೆತ್ತನೆ ಮಾಡಿಸಲು ಚರ್ಚೆಯಾಗಿತ್ತು. ಶಿಲೆ ಸಿಕ್ಕ ಜಾಗದಲ್ಲಿ ದೇಗುಲ ನಿರ್ಮಾಣಕ್ಕೆ ವರ್ಷದ ಹಿಂದೆಯೇ ಭೂಮಿಪೂಜೆ ನೆರವೇರಿಸಲಾಗಿದ್ದು, ಒಂದು ವರ್ಷದಿಂದ ಯಾವುದೇ ಪ್ರಗತಿಯಾಗದ ಕಾರಣ ನಾವೇ ನಮ್ಮ ಶಕ್ತಾನುಸಾರ ದೇಗುಲ ನಿರ್ಮಾಣಕ್ಕೆ ನಿರ್ಧರಿಸಿದ್ದೇವೆ. ಜ.22ರಂದು ದೇಗುಲ ನಿರ್ಮಾಣಕ್ಕೆ ಚಾಲನೆ ನೀಡುತ್ತಿದ್ದೇವೆ. ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಭೂ ಮಾಲೀಕ ರಾಮದಾಸ್ ಅವರ ಪುತ್ರ ರಂಗಸ್ವಾಮಿ.

ಬಾಲರಾಮನ ಮೂರ್ತಿ ಶಿಲೆ ಸಿಕ್ಕ ಜಮೀನು (ETV Bharat)

ದೇಗುಲ ನಿರ್ಮಾಣಕ್ಕೆ ಚಾಲನೆ ನೀಡುವ ಮುನ್ನ ಶ್ರೀರಾಮ ವಿಗ್ರಹಕ್ಕೆ ಶಿಲೆ ಸಿಕ್ಕಿದ ಬಂಡೆಯಲ್ಲಿ ಶ್ರೀರಾಮನ ತೈಲಚಿತ್ರ ಮತ್ತು ಮತ್ತೊಂದು ಬಂಡೆ ಮೇಲೆ ಹನುಮನ ವರ್ಣಚಿತ್ರವನ್ನು ಸಹ ಬರೆಸಲಾಗುತ್ತಿದೆ. ವಿಶೇಷ ಪೂಜೆ ಸಲ್ಲಿಸಲು ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಶಿಲೆ ಸಿಕ್ಕ ಜಾಗದಲ್ಲಿ ಗರ್ಭ ಗುಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ರಂಗಸ್ವಾಮಿ ಮಾಹಿತಿ ನೀಡಿದರು.

ಇದನ್ನೂ ಓದಿ:'ಬಾಲರಾಮನ ಮೂರ್ತಿ ಕೆತ್ತನೆ ಕನಸಿನಂತೆ ನಡೆದು ಹೋಯಿತು': ಶಿಲ್ಪಿ ಅರುಣ್‌ ಯೋಗಿರಾಜ್‌ ಸಂದರ್ಶನ

ಭಕ್ತರ ಸಂಖ್ಯೆ ಕುಸಿತ :ದೇಗುಲ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಬಳಿಕ ಮೈಸೂರು ಸೇರಿದಂತೆ ನಾನಾ ಕಡೆಯಿಂದ ರಾಮನ ಭಕ್ತರು ಬರುತ್ತಿದ್ದು, ನಂತರ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಈಗ ದೇಗುಲ ನಿರ್ಮಾಣವಾದರೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀರಾಮನ ದರ್ಶನ ಪಡೆಯಬಹುದು. ಈ ಜಾಗವು ಸಹ ದಕ್ಷಿಣ ಅಯೋಧ್ಯೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ರಾಮದಾಸ್ ಕುಟುಂಬದವರು.

ಬಾಲರಾಮನ ಮೂರ್ತಿ ಶಿಲೆ ಸಿಕ್ಕ ಜಮೀನಿಗೆ ಹೋಗುವ ದಾರಿ (ETV Bharat)

ಇದನ್ನೂ ಓದಿ:ಶ್ರೀರಾಮನ ವಿಗ್ರಹಕ್ಕೆ ಕಲ್ಲು ದೊರೆತ ಜಮೀನಿನಲ್ಲಿ ವಿಶೇಷ ಪೂಜೆ-ವಿಡಿಯೋ

ಬಾಲರಾಮನ ಮೂರ್ತಿ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಪ್ರಯುಕ್ತ ಹಾರೋಹಳ್ಳಿಯಲ್ಲಿ ಇಂದು (ಜ.22) ಸಂಜೆ ಅಶೋಕ ರಸ್ತೆಯಲ್ಲಿ ಲಕ್ಷ ದೀಪೋತ್ಸವ ಹಾಗೂ ಶ್ರೀವೀರಗಣಪತಿ ದೇವಸ್ಥಾನದಲ್ಲಿ ರಾಮತಾರಕ ಹೋಮವನ್ನು ಏರ್ಪಡಿಸಲಾಗಿದೆ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಲಿದ್ದಾರೆ ಎಂದು ಅರ್ಚಕ ಪ್ರಹ್ಲಾದ ರಾವ್ ತಿಳಿಸಿದ್ದಾರೆ‌.

ದೇಗುಲ ನಿರ್ಮಾಣಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ:ಡಿಕೆ ಶಿವಕುಮಾರ್​ಗೆ ಸಿಎಂ ಆಗುವಂತೆ ಆಶೀರ್ವದಿಸಿದ ಗುಣಧರನಂದಿ ಮಹಾರಾಜರು: ಡಿಸಿಎಂ ಹೇಳಿದ್ದಿಷ್ಟು

ABOUT THE AUTHOR

...view details