ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / state

ತೋಟಗಾರಿಕೆ ವಿವಿಯಲ್ಲಿ 13ನೇ ಘಟಿಕೋತ್ಸವ ; 16 ಚಿನ್ನದ ಪದಕ ಪಡೆದು ಮಿಂಚಿದ ವಿದ್ಯಾರ್ಥಿನಿ ಅಮೂಲ್ಯ - Horticulture University convocation

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 13 ನೇ ಘಟಿಕೋತ್ಸವ ಸಮಾರಂಭ ನಡೆಯಿತು. ಇದರಲ್ಲಿ 16 ಚಿನ್ನದ ಪದಕ ಪಡೆದು ವಿದ್ಯಾರ್ಥಿನಿ ಅಮೂಲ್ಯ ಎಂಬುವವರು ಮಿಂಚಿದರು.

convocation
ಘಟಿಕೋತ್ಸವ ಸಮಾರಂಭ (ETV Bharat)

ಬಾಗಲಕೋಟೆ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 13ನೇ ಘಟಿಕೋತ್ಸವ ಸಮಾರಂಭ ಜರುಗಿತು. ಸಮಾರಂಭದಲ್ಲಿ 21 ಜನ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಇದರಲ್ಲಿ 16 ಚಿನ್ನದ ಪದಕ ಪಡೆದ ಅಮೂಲ್ಯ ಎಂಬ ವಿದ್ಯಾರ್ಥಿನಿ ಚಿನ್ನದ ಹುಡುಗಿಯಾಗಿ ಗಮನ ಸೆಳೆದರು.

ಬಾಗಲಕೋಟೆ ನವನಗರದಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 13ನೇ ಘಟಿಕೋತ್ಸವ ಸಮಾರಂಭ ಜರುಗಿತು. ಸಮಾರಂಭದಲ್ಲಿ ತೋಟಗಾರಿಕೆ ಸಚಿವರಾದ ಎಸ್. ಎಸ್ ಮಲ್ಲಿಕಾರ್ಜುನ್ ಚಾಲನೆ ನೀಡಿ, ಪದವಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು.

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 13 ನೇ ಘಟಿಕೋತ್ಸವ ಸಮಾರಂಭ ನಡೆಯಿತು (ETV Bharat)

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಸರ್ಕಾರದ ವೈಜ್ಞಾನಿಕ ಮತ್ತು ಕೈಗಾರಿಕಾ ಅನುಸಂಧಾನ ಪರಿಷತ್​ನ ಮಹಾ ನಿರ್ದೇಶಕರಾದ ಡಾ. ಶ್ರೀಮತಿ ಎನ್ ಕಲೈಸೆಲ್ವಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕತೆಯ ತೀವ್ರ ಬೆಳವಣಿಗೆಗೆ ತೋಟಗಾರಿಕೆಯು ಸಂಭಾವ್ಯ ಕೃಷಿ ಉದ್ಯಮವಾಗಿ ಹೊರಹೊಮ್ಮುವಂತೆ ಮಾಡಿದೆ. ಹೆಚ್ಚಿನ ಸಂಖ್ಯೆಯ ಕೃಷಿ - ಕೈಗಾರಿಕೆಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿದೆ ಎಂದರು.

16 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಅಮೂಲ್ಯ (ETV Bharat)

21 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ:

ಘಟಿಕೋತ್ಸವದಲ್ಲಿ ಒಟ್ಟು 21 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಇದರಲ್ಲಿ ಅಮೂಲ್ಯ ಎಸ್ ಪಾಟೀಲ್ ಎಂಬ ವಿದ್ಯಾರ್ಥಿನಿ ಒಟ್ಟು 16 ಚಿನ್ನದ ಪದಕ ಪಡೆದು ಚಿನ್ನದ ಹುಡುಗಿಯಾಗಿ ಹೊರ ಹೊಮ್ಮಿದ್ದಾರೆ.

ಈ ಕುರಿತು ಮಾತನಾಡಿದ ಚಿನ್ನದ ಹುಡುಗಿ ಅಮೂಲ್ಯ ಎಸ್​, 'ಸತತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದು, ತಂದೆಯು ಸಹ ವಿಶ್ವವಿದ್ಯಾಲಯದಲ್ಲಿ ಡೀನ್ ಆಗಿ, ತಾಯಿಯೂ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರೋತ್ಸಾಹ ಹಾಗೂ ಸಹಕಾರದಿಂದ ಈ ಸಾಧನೆ ಮಾಡಿದ್ದೇನೆ. ಮೂಲತಃ ಬೀದರ್ ಜಿಲ್ಲೆಯವರಾಗಿದ್ದು, ರಾಜ್ಯದ ಇತರ ಪ್ರದೇಶಗಳಲ್ಲಿ ಅಧ್ಯಯನ ಮಾಡಿದ್ದೇನೆ' ಎಂದು ತನ್ನ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್ನೊಬ್ಬ ವಿದ್ಯಾರ್ಥಿನಿ ಸ್ಮಿತಾ ಮಾತನಾಡಿ, 'ನನಗೆ ಚಿನ್ನದ ಪದಕ ಬಂದಿರುವುದು ಖುಷಿಯಾಗುತ್ತಿದೆ. ಅಪ್ಪ ಅಮ್ಮಂದಿರಿಗೂ ಖುಷಿಯಾಗಿದೆ. ಉನ್ನತ ಶಿಕ್ಷಣವನ್ನು ಅಧ್ಯಯನ ಮಾಡುತ್ತೇನೆ, ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಯತ್ತ ಸಿದ್ದತೆ ನಡೆಸುತ್ತೇನೆ' ಎಂದಿದ್ದಾರೆ.

ಸಂಶೋಧನೆ ಮಾಡಿದ 5 ವಿದ್ಯಾರ್ಥಿಗಳಿಗೆ, ತೋಟಗಾರಿಕೆಯಲ್ಲಿ ಎಂಎಸ್​ಸಿ ಮಾಡಿದ 10 ವಿದ್ಯಾರ್ಥಿಗಳಿಗೆ ಒಟ್ಟು 36 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ನೆರವೇರಿಸಲಾಯಿತು. ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ವಿಷ್ಣುವರ್ಧನ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಇತರ ಗಣ್ಯಮಾನ್ಯರು ಭಾಗವಹಿಸಿದ್ದರು.

ಇದನ್ನೂ ಓದಿ :ತಾಯಿ ಆಶಾ‌ ಕಾರ್ಯಕರ್ತೆ, ತಂದೆ ಸಿಪಾಯಿ.. 9 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಹಳ್ಳಿ ಹುಡುಗಿ ಜಯಶ್ರೀ - KUD Convocation

ABOUT THE AUTHOR

...view details