ಕರ್ನಾಟಕ

karnataka

ETV Bharat / state

ಹಣತೆಗೆ ರಂಗು ತುಂಬುವ ವಿಶೇಷ ಚೇತನರು; ದೀಪಾವಳಿ ಹಬ್ಬಕ್ಕೆ ತಯಾರಿ

ಮಂಗಳೂರು ನಗರದಲ್ಲಿನ ಸಾನಿಧ್ಯ ವಿಶೇಷ ಮಕ್ಕಳ ಶಾಲೆಯಲ್ಲಿ 25 ವರ್ಷ ಮೇಲ್ಪಟ್ಟ ವಿಶೇಷ ಚೇತನರರು ಮಣ್ಣಿನ ಹಣತೆಗಳಿಗೆ ಹೊಸ ರಂಗು ನೀಡಿ ಶೃಂಗರಿಸುತ್ತಿದ್ದಾರೆ. ಈ ಹಣತೆಗಳಿಗೆ ಸ್ಥಳೀಯವಾಗಿ ಒಳ್ಳೆಯ ಬೇಡಿಕೆ ಇದೆ.

ಹಣತೆಗಳಿಗೆ ರಂಗು ನೀಡುವ ವಿಶೇಷ ಚೇತನರರಿಂದ ದೀಪಾವಳಿಗೆ ಹೊಸ ಮೆರಗು
ಹಣತೆಗಳಿಗೆ ರಂಗು ನೀಡುತ್ತಿರುವ ವಿಶೇಷ ಚೇತನರು (ETV Bharat)

By ETV Bharat Karnataka Team

Published : 6 hours ago

ಮಂಗಳೂರು:ನಾಡಿನೆಲ್ಲೆಡೆ ದೀಪಾವಳಿ ಹಬ್ಬಕ್ಕೆ ತಯಾರಿ ನಡೆಯುತ್ತಿದೆ. ಪಟಾಕಿ ಸಿಡಿಸುವುದರ ಜೊತೆಗೆ ಹಣತೆಯ ಮೂಲಕ ದೀಪ ಬೆಳಗುವುದು ಸಾಮಾನ್ಯ. ದೀಪಾವಳಿ ದಿನ ಹೀಗೆ ಬೆಳಗುವ ಹಣತೆಗೆ ಮಂಗಳೂರಿನಲ್ಲಿ ವಿಶೇಷಚೇತನರು ಹೊಸ ಹೊಸ ರಂಗು ನೀಡುತ್ತಿದ್ದಾರೆ.

ನಗರದ ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಮಕ್ಕಳ ಶಾಲೆಯಲ್ಲಿರುವ ಸಾನಿಧ್ಯ ಸ್ಕಿಲ್ ಡೆವಲಪ್ಮೆಂಟ್ ವಿಭಾಗದಲ್ಲಿ ವಿಶೇಷಚೇತನರರಿದ್ದಾರೆ. ಇವರೆಲ್ಲರೂ ಇಪ್ಪತ್ತೈದು ವರ್ಷ ಮೇಲ್ಪಟ್ಟವರು. ದೀಪಾವಳಿ ಹಿನ್ನೆಲೆಯಲ್ಲಿ ಇವರಿಗೆ ವಿಶೇಷ ಚಟುವಟಿಕೆ ಎಂಬಂತೆ ಇವರಿಂದ ಹಣತೆಗಳಿಗೆ ನವೀನ ರೂಪ ಕೊಡಿಸಲಾಗುತ್ತಿದೆ.

ಹಣತೆಗೆ ರಂಗು ತುಂಬುವ ವಿಶೇಷ ಚೇತನರು; ದೀಪಾವಳಿ ಹಬ್ಬಕ್ಕೆ ತಯಾರಿ (ETV Bharat)

ಕುಂಬಾರರಿಂದ ನೇರವಾಗಿ ಖರೀದಿಸಿದ ಮಣ್ಣಿನ ಹಣತೆಗಳನ್ನು ಇವರು ಮೊದಲಿಗೆ ನೀರಿನಿಂದ ತೊಳೆದು ಅದಕ್ಕೆ ಬಣ್ಣಗಳನ್ನು ನೀಡುತ್ತಾರೆ. ಆ ಬಳಿಕ ಟಿಕಿಲಿಗಳನ್ನು ಅಂಟಿಸಿ ಚಂದಗಾಣಿಸುತ್ತಾರೆ. ನಂತರ ಬಾಕ್ಸ್​​ಗೆ ತುಂಬಿಸಿ ಪ್ಯಾಕ್​​ ಮಾಡುತ್ತಾರೆ. ಶಾಲೆಯಲ್ಲಿ ಇವರಿಗೆ ಚಟುವಟಿಕೆಯಿಂದಿರಲು ಈ ರೀತಿಯ ಟಾಸ್ಕ್​ಗಳನ್ನು ನೀಡಲಾಗುತ್ತದೆ. ವಿಶೇಷ ಚೇತನ ವಿದ್ಯಾರ್ಥಿಗಳ ಹಣತೆಗಳಿಗೆ ಸ್ಥಳೀಯವಾಗಿ ಉತ್ತಮ ಬೇಡಿಕೆಯೂ ಇದೆಯಂತೆ.

ಇಪ್ಪತ್ತೈದು ವರ್ಷ ಮೇಲ್ಪಟ್ಟ ಈ ಎಲ್ಲ ವಿಶೇಷಚೇತನರು ಹಣತೆಗೆ ರಂಗು ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಬಾರಿ ಎರಡು ಸಾವಿರಕ್ಕೂ ಅಧಿಕ ಹಣತೆಗಳು ಮಾರಾಟವಾಗಿದ್ದು, ಮತ್ತಷ್ಟು ಹಣತೆಗಳಿಗೆ ಬೇಡಿಕೆ ಇದೆ.

ಮಣ್ಣಿನ ಹಣತೆಗಳು (ETV Bharat)

ಈ ಕುರಿತು ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ವಸಂತ್​ ಕುಮಾರ್​ ಶೆಟ್ಟಿ, "ವಿದ್ಯಾರ್ಥಿಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿರುವುದನ್ನು ನೋಡಿದಾಗ ಸಂತೋಷವಾಗುತ್ತದೆ. ನಾವು ದೀಪಾವಳಿ ಹಬ್ಬವನ್ನು ಈ ತಿಂಗಳ 31ರಂದು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ನಮ್ಮ ವಿಶೇಷಚೇತನ ಮಕ್ಕಳು ಹೊಸ ಹೊಸ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವುದು ಈ ವರ್ಷದ ವಿಶೇಷ. 2003ರಲ್ಲಿ ಇಬ್ಬರು ಮಕ್ಕಳೊಂದಿಗೆ ಆರಂಭಿಸಿದ್ದ ನಮ್ಮ ಈ ಪ್ರಯತ್ನ ಈಗ ಸಮುದಾಯದ ಬೆಂಬಲ ಪಡೆದಿದೆ. 25 ವರ್ಷ ಮೇಲ್ಪಟ್ಟ ವಿಶೇಷಚೇತನರಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ" ಎಂದರು.

ಹಣತೆಗಳನ್ನು ಸಿದ್ಧಪಡಿಸುತ್ತಿರುವುದು (ETV Bharat)

ಸಾನಿಧ್ಯ ಸ್ಕಿಲ್ ಡೆವಲಪ್ಮೆಂಟ್ ವಿಭಾಗದ ಮುಖ್ಯಸ್ಥೆ ಸುಮಾ ಡಿಸಿಲ್ವಾ ಮಾತನಾಡಿ, "ಮಕ್ಕಳಿಗಾಗಿ ವಿಭಿನ್ನ ಚಟುವಟಿಕೆಗಳನ್ನು ನೀಡುವ ಮೂಲಕ ಅವರ ಶಕ್ತಿಯನ್ನು ಮತ್ತಷ್ಟು ಬೆಳೆಸಲು ಪ್ರಯತ್ನಿಸುತ್ತಿದ್ದೇವೆ. ಅವರು ಹಣತೆಗಳಿಗೆ ಬಣ್ಣ, ಪ್ಯಾಕಿಂಗ್​​ ಮಾಡುತ್ತಾರೆ. ಈ ಎಲ್ಲ ಕಾರ್ಯದಲ್ಲಿ ನಮಗೆ ಹೆಚ್ಚಿನ ಬೆಂಬಲ ದೊರೆಯುತ್ತಿದೆ" ಎಂದು ತಿಳಿಸಿದರು.

ಇದನ್ನೂ ಓದಿ:ರಾಜ್ಯಾದ್ಯಂತ ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಚಾಲನೆ: ಹಿಂದೂ ರಾಷ್ಟ್ರ ಸಮನ್ವಯ ಸಮಿತಿ

ABOUT THE AUTHOR

...view details