ವಿಶೇಷ ವರದಿ - ಹೆಚ್ ಬಿ ಗಡ್ಡದ್
ಹುಬ್ಬಳ್ಳಿ :ಎಕ್ಸ್ಪ್ರೆಸ್ ರೈಲುಗಳು ಹಾಗೂ ವಂದೇ ಭಾರತ್ ರೈಲು ಓಡಾಡುವ ಮಾರ್ಗದಲ್ಲಿ ಜನರು, ಪ್ರಾಣಿಗಳ ಸುರಕ್ಷತೆಗೆ ಆದ್ಯತೆ ನೀಡಲು ಭಾರತೀಯ ರೈಲ್ವೆ ವಿಶೇಷ ಯೋಜನೆ ರೂಪಿಸಿದೆ. ರೈಲು ಸಂಚಾರ ಮಾರ್ಗದಲ್ಲಿ ಜನ-ಜಾನುವಾರುಗಳ ಪ್ರಾಣ ಹಾನಿ ನಿಯಂತ್ರಿಸಲು ಮಾರ್ಗದುದ್ದಕ್ಕೂ ತಡೆಬೇಲಿ(ಫೆನ್ಸಿಂಗ್) ಕಾಮಗಾರಿಯನ್ನು ನೈಋತ್ಯ ರೈಲ್ವೆ ಕೈಗೆತ್ತಿಕೊಂಡಿದೆ.
ನೈಋತ್ಯ ರೈಲ್ವೆ ವಲಯದ ಅಂದಾಜು 793 ಕಿ.ಮೀ. ವ್ಯಾಪ್ತಿ ಮಾರ್ಗದಲ್ಲಿ ಕಬ್ಬಿಣ ಸರಳುಗಳ ತಡೆ ಬೇಲಿ ಹಾಗೂ ಗ್ರಾಮೀಣ ಪ್ರದೇಶಗಳ ಸ್ಥಳಗಳಲ್ಲಿ ಜನ ಸಂಚಾರ ನಿರ್ದಿಷ್ಟ ಟ್ರ್ಯಾಕ್ಟರ್, ಬೈಕ್ ಸಂಚಾರಕ್ಕಾಗಿ ಸಬ್ ವೇ, ಚಕ್ಕಡಿ ಮಾರ್ಗಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇದಕ್ಕಾಗಿ 724 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತಿದೆ. 420 ಕೋಟಿ ರೂ. ವೆಚ್ಚದಲ್ಲಿ ಕಬ್ಬಿಣದ ಬೇಲಿ ಹಾಗೂ 304 ಕೋಟಿ ರೂ. ವೆಚ್ಚದಲ್ಲಿ ಸಬ್ ವೇಗಳನ್ನು ನಿರ್ಮಿಸಲಾಗುತ್ತದೆ. ಈ ಯೋಜನೆ ಟೆಂಡರ್ ಕರೆಯಲಾಗಿದ್ದು, ಮೊದಲ ಹಂತದ ಕಾಮಗಾರಿ ನಡೆಯುತ್ತಿದೆ.
ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಪ್ರತಿಕ್ರಿಯೆ (ETV Bharat) ವಂದೇ ಭಾರತ ರೈಲು ಬಹುತೇಕ ಭಾಗಗಳಲ್ಲಿ ಗಂಟೆಗೆ 110 ರಿಂದ 130 ಕಿ.ಮೀ. ವೇಗದಲ್ಲಿ ಚಲಿಸುವ ಮಾರ್ಗಗಳು ಕಡಿಮೆ ಇವೆ. ವಂದೇ ಭಾರತ್ ರೈಲುಗಳ ವಿನ್ಯಾಸ ರೂಪಿಸಿರುವುದರಿಂದ ವೇಗ ಹೆಚ್ಚಳವಾಗಲಿದೆ. ಅಲ್ಲದೇ ಸಮಯ ಪಾಲನೆ ಅನುಸರಣೆ ಮಾಡಲು ಸಹಾಯಕವಾಗಲಿದೆ.
ನೈಋತ್ಯ ರೈಲ್ವೆ ವಲಯದ ಟ್ರ್ಯಾಕ್ಗಳಿಗೆ ಫೆನ್ಸಿಂಗ್ (ETV Bharat) ಈ ಕುರಿತು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿ, "ನೈಋತ್ಯ ರೈಲ್ವೆ ವಲಯದ 3 ವಿಭಾಗಗಳಲ್ಲಿ ಫೆನ್ಸಿಂಗ್ ಕಾರ್ಯ ಮಾಡಲಾಗುತ್ತಿದೆ. ವಂದೇ ಭಾರತ್ ಹಾಗೂ ಅದೇ ವೇಗದಲ್ಲಿ ರೈಲುಗಳ ಸಂಚರಿಸುವ ಮಾರ್ಗಗಳಲ್ಲಿ ಮಾತ್ರ ಅಳವಡಿಸಲಾಗುತ್ತಿದೆ. ಪ್ರಸ್ತುತ 110 ಕಿ.ಮೀ ಪ್ರತಿ ಗಂಟೆಗೆ ರೈಲು ಸಂಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ವೇಗ ಹೆಚ್ಚಾಗಲಿದ್ದು, ಆಗ ಸಣ್ಣ ಪ್ರಾಣಿ, ಮನುಷ್ಯನಿಗೆ ಅಪಘಾತವಾದ್ರೆ ಸಮಯ ಪರಿಪಾಲನೆ ಕಷ್ಟವಾಗಲಿದೆ. ಇದಲ್ಲದೆ ದೊಡ್ಡ ದುರಂತಗಳನ್ನು ತಪ್ಪಿಸಬಹುದು. ವಂದೇ ಭಾರತ್ ರೈಲುಗಳ ವೇಗ ಗಂಟೆಗೆ 110-130 ಕಿ.ಮೀ ಇದೆ. ವೇಗ ಕಾಯ್ದುಕೊಂಡು, ಸಮಯ ಪಾಲಿಸುವುದರ ಜೊತೆಗೆ ಜೀವಹಾನಿ ತಪ್ಪಿಸುವುದು ಮೂಲ ಉದ್ದೇಶವಾಗಿದೆ" ಎಂದು ಮಾಹಿತಿ ನೀಡಿದರು.
ನೈಋತ್ಯ ರೈಲ್ವೆ ವಲಯದ ಟ್ರ್ಯಾಕ್ಗಳಿಗೆ ಫೆನ್ಸಿಂಗ್ (ETV Bharat) "ಮೊದಲ ಹಂತದಲ್ಲಿ 793 ಕಿ.ಮೀ ಫೆನ್ಸಿಂಗ್ ಕಾಮಗಾರಿ ತಗೆದುಕೊಳ್ಳಲಾಗಿದೆ. ಇದರಲ್ಲಿ ಎರಡು ವಿಧಗಳಿವೆ. ರೈಲು ಟ್ರ್ಯಾಕ್ಗಳಿಗೆ ಎರಡು ಕಡೆ ರಕ್ಷಣಾ ಬೇಲಿ ಹಾಕಲಾಗುತ್ತದೆ. ಈ ರಕ್ಷಣಾ ಬೇಲಿಗೆ 420 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದರ ಪಕ್ಕದಲ್ಲಿ ಓಡಾಡುವ ಜನರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಸಬ್ ವೇ ಹಾಗೂ ಅಂಡರ್ ಪಾಸ್ಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ₹304 ಕೋಟಿ ಖರ್ಚು ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 724 ಕೋಟಿ ಹಣ ಮೀಸಲಿಡಲಾಗಿದ್ದು, ಇದರಲ್ಲಿ ₹30 ಕೋಟಿ ಪ್ರಸಕ್ತ ವರ್ಷ 2024-25ಗೆ ಬಿಡುಗಡೆಯಾಗಿದೆ. ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಕೂಡ ನಡೆಯುತ್ತಿದೆ. ಸದ್ಯಕ್ಕೆ 3 ಕಿ.ಮೀ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ" ಎಂದು ಮಾಹಿತಿ ನೀಡಿದರು.
ಫೆನ್ಸಿಂಗ್ ಮಾಡಬೇಕಾದ ಮಾರ್ಗಗಳು : "ಫೆನ್ಸಿಂಗ್ಗಾಗಿ ಕೆಲ ಮಾರ್ಗಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಹುಬ್ಬಳ್ಳಿ ವಿಭಾಗದ ಸೌತ್ ಹುಬ್ಬಳ್ಳಿ- ಕರ್ಜಗಿ, ಸೌತ್ ಹುಬ್ಬಳ್ಳಿ-ಧಾರವಾಡ ಮೊದಲ ಹಂತದಲ್ಲಿ ತಗೆದುಕೊಳ್ಳಲಾಗುತ್ತಿದೆ. ಮೈಸೂರು ವಿಭಾಗದಲ್ಲಿ ಮೈಸೂರು-ಯಲಿಯೂರು ಮತ್ತು ಸಂಪಿಗೆ ರೋಡ್, ಕರ್ಜಗಿ ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ಧಾರವಾಡ- ಬೆಂಗಳೂರು ಮಾರ್ಗ ಪೂರ್ಣಗೊಂಡತಾಗುತ್ತದೆ. ಬೆಂಗಳೂರು-ಧರ್ಮಾವರಂ, ಬೆಂಗಳೂರು- ಜೋಲಾರಪೇಟೆ, ಬೆಂಗಳೂರು- ಸಂಪಿಗೆ ರೋಡ್, ಬೆಂಗಳೂರು- ಮೈಸೂರು ಕೈಗೆತ್ತಿಕೊಳ್ಳಲಾಗಿದೆ. ಪ್ರಮುಖ ರೈಲು ಮಾರ್ಗ ಹಾಗೂ ವಂದೇ ಭಾರತ್ ರೈಲು ಓಡಾಡುವ ಮಾರ್ಗಗಳನ್ನು ಪರಿಗಣನೆಗೆ ತೆಗೆದುಕೊಂಡು ಮೊದಲ ಹಂತದಲ್ಲಿ 793 ಕಿ.ಮೀ ಪೂರ್ಣಗೊಳಿಸಲಾಗುವುದು" ಎಂದು ತಿಳಿಸಿದರು.
5 ಅಡಿ ಎತ್ತರದ ಬೇಲಿ : ಸದ್ಯ ನೈಋತ್ಯ ರೈಲ್ವೆಯ ವಂದೇ ಭಾರತ್ ರೈಲು ಸಂಚಾರದ ನೀಲನಕ್ಷೆಯಂತೆ ಬೆಂಗಳೂರು- ಮೈಸೂರು, ಬೆಂಗಳೂರು-ಧರ್ಮಾವರಂ, ಬೆಂಗಳೂರು-ಹುಬ್ಬಳ್ಳಿ, ಹುಬ್ಬಳ್ಳಿ-ಪುಣೆ. ಬೆಂಗಳೂರು-ಚೆನ್ನೈ ಮಾರ್ಗದ ಎರಡೂ ಬದಿಗಳಲ್ಲಿ ವಿಶೇಷ ತಡೆಬೇಲಿ ಅಳವಡಿಸಲಾಗುತ್ತಿದೆ. ಈ ಬೇಲಿ ಐದು ಅಡಿ ಎತ್ತರ ಇರಲಿದ್ದು, ಆಂಗ್ಲ ಅಕ್ಷರಮಾಲೆಯ 'ಡಬ್ಲ್ಯೂ' ಆಕಾರದಲ್ಲಿ ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ:ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯಕ್ಕೆ ಸೂರ್ಯ 'ಶಕ್ತಿ', ₹2.81 ಕೋಟಿ ಉಳಿತಾಯ