ಬೆಳಗಾವಿ:ಕಿತ್ತೂರು ಉತ್ಸವದ ಎರಡನೇ ದಿನ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡುಗಳಿಗೆ ಜನ ಹುಚ್ಚೆದ್ದು ಕುಣಿದರು. ಒಂದಾದ ಮೇಲೆ ಒಂದು ಸೂಪರ್ ಹಿಟ್ ಹಾಡು ಹಾಡಿ ಧೂಳೆಬ್ಬಿಸಿದ ವಿಜಯ್ ಪ್ರಕಾಶ್, ಉತ್ಸವಕ್ಕೆ ಸಾಂಸ್ಕೃತಿಕ ಮೆರಗು ತಂದು ಕೊಟ್ಟರು.
ಹೌದು, ಬೊಂಬೆ ಹೇಳುತೈತೆ ಹಾಡಿನ ಮೂಲಕ ವೇದಿಕೆಗೆ ಬಂದ ವಿಜಯ್ ಪ್ರಕಾಶ ನೆರೆದಿದ್ದ ಜನರನ್ನು ಒಂದು ಕ್ಷಣ ಭಾವ ಪರವಶರನ್ನಾಗಿ ಮಾಡಿದರು. ಅತ್ತ ವೇದಿಕೆ ಥ್ರೀಡಿ ಪರದೆ ಮೇಲೆ ಕರ್ನಾಟಕ ರತ್ನ ದಿ. ಡಾ. ಪುನೀತ್ರಾಜಕುಮಾರ್ ಭಾವಚಿತ್ರ ಪ್ರದರ್ಶನವಾಗುತ್ತಿದ್ದಂತೆ, ಇತ್ತ ಪ್ರೇಕ್ಷಕರು ತಮ್ಮ ಮೊಬೈಲ್ ಟಾರ್ಚ್ ಹಚ್ಚುವ ಮೂಲಕ ಅಪ್ಪು ಅವರಿಗೆ ಗೌರವ ಸಮರ್ಪಿಸಿದರು.
ಇದಾದ ಬಳಿಕ ಮತ್ತೆ ಪುನೀತ್ರಾಜಕುಮಾರ್ ಸಿನಿಮಾದ 'ಕಾಣದಂತೆ ಮಾಯವಾದನು, ಕೈಲಾಸ ಸೇರಿಕೊಂಡನು', ಡಾ. ರಾಜಕುಮಾರ್ ಅಭಿನಯದ 'ಲವ್ ಮಿ ಆರ್ ಹೇಟ್ ಮಿ', ದರ್ಶನ ಅಭಿನಯದ 'ಯಾರೇ ಬಂದರೂ, ಎದುರು ಯಾರೇ ನಿಂತರೂ ಪ್ರೀತಿ ಹಂಚುವ ಯಜಮಾನ', ಕಿರಿಕ್ ಪಾರ್ಟಿಯ 'ಬೆಳಗೆದ್ದು ಯಾರ ಮುಖವ ನಾನು ನೋಡಿದೆ', 'ಇದು ಹೂವಿನ ಲೋಕವೇ', ಕಾಂತಾರ ಚಿತ್ರದ 'ಸಿಂಗಾರ ಸಿರಿಯೆ', 'ಕಣ್ಣು ಹೊಡೆಯಾಕ', 'ಓಪನ್ ಹೇರ್ ಬಿಟ್ಟಕೊಂಡು', 'ಖಾಲಿ ಕ್ವಾಟರ್ ಬಾಟಲಿಯಂಗೆ ಲೈಫು' ಸೇರಿ ಮತ್ತಿತರ ಗೀತೆಗಳನ್ನು ಹಾಡಿದ ವಿಜಯ್ ಪ್ರಕಾಶ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ಕೊಂಡೊಯ್ದರು.