ಕರ್ನಾಟಕ

karnataka

ದ್ವಿತೀಯ ಪಿಯುಸಿ ಪರೀಕ್ಷೆ-3ರ ಫಲಿತಾಂಶ ಪ್ರಕಟ: ಶೇ.23.73 ರಷ್ಟು ವಿದ್ಯಾರ್ಥಿಗಳು ಪಾಸ್ - Second PUC Exam 3 Result

By ETV Bharat Karnataka Team

Published : Jul 16, 2024, 3:24 PM IST

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಲಿಯು ದ್ವಿತೀಯ ಪಿಯುಸಿ ಪರೀಕ್ಷೆ 3 ಫಲಿತಾಂಶವನ್ನು ಪ್ರಕಟಿಸಿದೆ. ಒಟ್ಟು 17,911 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಲಿ
ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಲಿ (ETV Bharat)

ಬೆಂಗಳೂರು:ದ್ವಿತೀಯ ಪಿಯುಸಿ ಪರೀಕ್ಷೆ-3 ರ ಫಲಿತಾಂಶ ಪ್ರಕಟಗೊಂಡಿದ್ದು, ಶೇ.23.73 ರಷ್ಟು ಫಲಿತಾಂಶ ಬಂದಿದೆ. ಜೂನ್ 24 ರಿಂದ ಜುಲೈ 5 ರವರೆಗೂ ರಾಜ್ಯದಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-3 ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಪ್ರಕಟಿಸಿದ್ದು, NIC ವೆಬ್‌ಸೈಟ್ https://karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದೆ.

ಪರೀಕ್ಷೆಗೆ ಹಾಜರಾದ 75,466 ವಿದ್ಯಾರ್ಥಿಗಳ ಪೈಕಿ 17,911 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.23.73 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 44,027 ವಿದ್ಯಾರ್ಥಿಗಳ ಪೈಕಿ 9,531 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.21.65 ರಷ್ಟು ಫಲಿತಾಂಶ ಪಡೆದರೆ. 31,439 ವಿದ್ಯಾರ್ಥಿನಿಯರ ಪೈಕಿ 8,380 ಉತ್ತೀರ್ಣರಾಗಿದ್ದು, ಶೇ.26.65 ರಷ್ಟು ಫಲಿತಾಂಶ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಶೇ.21.71, ವಾಣಿಜ್ಯ ವಿಭಾಗದಲ್ಲಿ ಶೇ.23.58, ವಿಜ್ಞಾನ ವಿಭಾಗದಲ್ಲಿ ಶೇ. 27.06 ರಷ್ಟು ಫಲಿತಾಂಶ ಬಂದಿದೆ.

ದ್ವಿತೀಯ ಪಿಯುಸಿ ಮೂರನೇ ಪರೀಕ್ಷೆ ಜೂನ್ 24 ರಿಂದ ಜುಲೈ 5 ರವರೆಗೆ ನಡೆದಿದ್ದು, ಜುಲೈ 9 ರಿಂದ 14 ರವರೆಗೆ 2,293 ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದಾರೆ. ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮೊದಲ, ಎರಡನೇ ಮತ್ತು ಮೂರನೇ ಪರೀಕ್ಷೆಯ ವಿಷಯವಾರು ಗರಿಷ್ಠ ಅಂಕ ಪರಿಗಣಿಸಿ ಅಂತಿಮ ಫಲಿತಾಂಶವನ್ನು ಪ್ರಕಟಿಸುವುದಾಗಿ ಮಂಡಲಿ ತಿಳಿಸಿದೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಪಡೆಯಲು ಜುಲೈ 17 ರಿಂದ 21 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿದ್ದು, ಸ್ಕ್ಯಾನಿಂಗ್ ಪ್ರತಿ ಡೌನ್ ಲೋಡ್ ಮಾಡಲು ಜುಲೈ 18 ರಿಂದ 22 ರವರೆಗೆ ಅವಕಾಶ ನೀಡಲಾಗಿದೆ. ಸ್ಕ್ಯಾನಿಂಗ್ ಪ್ರತಿ ಪಡೆದವರು ಮಾತ್ರ ಮರು ಎಣಿಕೆ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಜುಲೈ 18 ರಿಂದ 24 ರ ಒಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ.
ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 500 ರೂ. ಮರು ಮೌಲ್ಯಮಾಪನ ಪ್ರತಿ ವಿಷಯಕ್ಕೆ 1670 ರೂ. ನಿಗದಿಪಡಿಸಲಾಗಿದೆ ಎಂದು ಮಂಡಲಿ ಮಾಹಿತಿ ನೀಡಿದೆ.

ಮೊದಲ ಎರಡು ಪರೀಕ್ಷೆಯಲ್ಲಿ ಪಾಸಾಗದೇ ಇದ್ದ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಎಂದು ಘೋಷಿಸದೇ ಇನ್​ಕಂಪ್ಲೀಟ್ ಎಂದು ಕರೆಯಲಾಗಿತ್ತು. ಈಗ ಮೂರನೇ ಪರಿಕ್ಷೆಯಲ್ಲಿಯೂ ಯಾರು ಎಲ್ಲ ವಿಷಯ ಪಾಸ್ ಮಾಡಿಕೊಳ್ಳಲು ಆಗಿಲ್ಲವೋ ಅವರನ್ನು ಅನುತ್ತೀರ್ಣ ಎಂದು ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದು, ಮುಂದಿನ ವರ್ಷ ಪರೀಕ್ಷೆ ಬರೆಯಬಹುದಾಗಿದೆ.

ಇದನ್ನೂ ಓದಿ:ಸರ್ಕಾರಿ ನೌಕರರ ವೇತನ - ಪಿಂಚಣಿ ಪರಿಷ್ಕರಣೆ, ₹ 20,208 ಕೋಟಿ ಹೆಚ್ಚುವರಿ ವೆಚ್ಚ: ಸಿಎಂ ಮಾಹಿತಿ - 7TH STATE PAY COMMISSION

ABOUT THE AUTHOR

...view details