ಕರ್ನಾಟಕ

karnataka

By ETV Bharat Karnataka Team

Published : Jul 13, 2024, 5:16 PM IST

ETV Bharat / state

ನಾಪತ್ತೆಯಾಗಿರುವ ಬ್ಯಾಂಕ್ ಅಧಿಕಾರಿಗಳಿಗಾಗಿ ಶೋಧ: ಎಸ್ಐಟಿ, ಸಿಬಿಐನಿಂದಲೂ ತನಿಖೆ ಚುರುಕು - Valmiki Corporation case

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಮತ್ತು ಸಿಬಿಐ ತನಿಖೆ ಚುರುಕುಗೊಳಿಸಿದ್ದು, ನಾಪತ್ತೆಯಾಗಿರುವ ಬ್ಯಾಂಕ್ ಅಧಿಕಾರಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

MISSING BANK OFFICIALS  SIT AND CBI INVESTIGATION  MONEY LAUNDERING CASE  BENGALURU
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ (https://kmvstdcl.karnataka.gov.in/)

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರನನ್ನ ಬಂಧಿಸಿ ಜಾರಿ ನಿರ್ದೇನಾಲಯ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಮತ್ತೊಂದೆಡೆ 94 ಕೋಟಿಯಿಂದ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಯೂನಿಯನ್ ಬ್ಯಾಂಕ್​ನ ಆರು ಮಂದಿ ಅಧಿಕಾರಿಗಳು ನಾಪತ್ತೆಯಾಗಿದ್ದು, ಶೋಧ ಕಾರ್ಯಕ್ಕೆ ಎಸ್ಐಟಿ ತಲಾಶ್ ನಡೆಸುತ್ತಿದೆ.

ವಾಲ್ಮೀಕಿ ಅಭಿವೃದ್ಧಿ ಅವ್ಯವಹಾರ ಪ್ರಕರಣದ ತನಿಖೆಯನ್ನ ಮೂರು ತನಿಖಾ ಸಂಸ್ಥೆಗಳು ಪರ್ಯಾಯವಾಗಿ ತನಿಖೆ ನಡೆಸುತ್ತಿವೆ. ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆಯಡಿ ನಾಗೇಂದ್ರನನ್ನ ಬಂಧಿಸಿ ತನಿಖೆ ನಡೆಸುತ್ತಿದೆ. ಎಸ್ಐಟಿ ಸಹ ವಾಲ್ಮೀಕಿ ನಿಗಮದ ಜನರಲ್ ಮ್ಯಾನೇಜರ್ ರಾಜಶೇಖರ್ ಮೇ.12ರಂದು ನೀಡಿದ ದೂರಿನಡಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ವರ್ಗಾಯಿಸಿಕೊಂಡು ಎಸ್ಐಟಿ ತನಿಖೆ ನಡೆಸುತ್ತಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂಡಿ ಮತ್ತು ಸಿಇಒ ಮನಮೇಕಲೈ, ನಿರ್ದೇಶಕರಾದ ನಿತೇಶ್ ರಂಜನ್, ರಾಮಸುಬ್ರಮಣ್ಯಂ, ಸಂಜಯ್ ರುದ್ರ, ಪಂಕಜ್ ದ್ವಿವೇದಿ, ಎಂ.ಜಿ.ರೋಡ್​ನ ಬ್ಯಾಂಕ್ ಚೀಫ್ ಮ್ಯಾನೇಜರ್ ಸುಚಿಸ್ಮಿತಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರ ಬಂಧನಕ್ಕಾಗಿ ಎಸ್ಐಟಿ ಶೋಧ ನಡೆಸುತ್ತಿದೆ. ಮತ್ತೊಂದೆಡೆ ಕೋಟ್ಯಂತರ ಹಣ ವಂಚನೆ ಸಂಬಂಧ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಸಿಬಿಐ, ಜನರಲ್ ಮ್ಯಾನೇಜರ್ ಸುಚಿಸ್ಮಿತಾ, ಡೆಪ್ಯೂಟಿ ಮ್ಯಾನೇಜರ್ ಡಿ.ದೀಪಾ ಹಾಗೂ ಕೇಶವಮೂರ್ತಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆಗಳು ಶೋಧ ಕಾರ್ಯ ತೀವ್ರಗೊಳಿಸಿವೆ.

94 ಕೋಟಿ ವರ್ಗಾವಣೆಗೆ ಆದೇಶ ಕೊಟ್ಟಿದ್ದು ಯಾರು ?: ವಾಲ್ಮೀಕಿ ನಿಗಮಕ್ಕೆ ಸೇರಿದ್ದ ಹಣವನ್ನ ಯೂನಿಯನ್ ಬ್ಯಾಂಕ್​ನಿಂದ ಹೈದರಾಬಾದ್ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್​ಗೆ 94 ಕೋಟಿ ರೂ. ವರ್ಗಾವಣೆಯಾಗಿತ್ತು. ಹೈದರಾಬಾದ್ ಬ್ಯಾಂಕ್​ನಿಂದ ವಿವಿಧ ಕಂಪನಿಗಳ ಹೆಸರಿನಲ್ಲಿ 18 ಖಾತೆಗಳಿಗೆ 89 ಕೋಟಿ ರೂ. ವರ್ಗಾವಣೆಯಾಗಿತ್ತು. ವಂಚನೆ ಪ್ರಕರಣದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕನಾಗಿದ್ದ ಜೆ.ಜಿ.ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್, ಫಸ್ಟ್ ಫೈನಾನ್ಸ್ ಕೋಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ಸತ್ಯನಾರಾಯಣ ಇಟಗಿ, ನೆಕ್ಕುಂಟಿ ನಾಗರಾಜ್, ನಾಗೇಶ್ವರರಾವ್, ಸತ್ಯನಾರಾಯಣ್ ವರ್ಮಾ ಚಂದ್ರಮೋಹನ್ ಎಂಬುವರನ್ನ ಬಂಧಿಸಿ ಎಸ್ಐಟಿ ವಿಚಾರಣೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ ಹೆಸರಿರುವ ಬ್ಯಾಂಕ್ ಹಿರಿಯ ಅಧಿಕಾರಿಗಳು ಇದುವರೆಗೂ ಎಸ್ಐಟಿ ಮುಂದೆ ಹಾಜರಾಗಿಲ್ಲ. ದೊಡ್ಡ ಮಟ್ಟದ ಹಣವನ್ನ ವರ್ಗಾಯಿಸಲು ಆದೇಶ ನೀಡಿದವರು ಯಾರು ಎಂಬುದನ್ನ ಪತ್ತೆ ಹಚ್ಚಬೇಕಾಗಿದೆ. ಎಂ.ಜಿ.ರಸ್ತೆಯ ಜನರಲ್ ಮ್ಯಾನೇಜರ್ ಆಗಿರುವ ಸುಚಿಸ್ಮಿತಾ ಹಾಗೂ ಡೆಪ್ಯೂಟಿ ಮ್ಯಾನೇಜರ್ ದೀಪಾ ಅವರ ಹೆಸರು ಬಲವಾಗಿ ಕೇಳಿಬಂದಿದ್ದರೂ ಅವರನ್ನ ವಿಚಾರಣೆ ನಡೆಸಿದ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ ಎನ್ನುತ್ತಾರೆ ಎಸ್​ಐಟಿ ಅಧಿಕಾರಿಗಳು.

ಓದಿ:ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣವನ್ನು ಇ.ಡಿ, ಸಿಬಿಐ ರಾಜಕೀಯವಾಗಿ ಬಳಸಿಕೊಳ್ಳಬಾರದು: ಸಚಿವ ಪರಮೇಶ್ವರ್ - Valmiki Corporation case

ABOUT THE AUTHOR

...view details