ಕರ್ನಾಟಕ

karnataka

ETV Bharat / state

ನನಗೆ ಕಾವಲು ಹಾಕಿದ್ದಾರೆ, ನನ್ನ ಜೊತೆ ಇಬ್ಬರನ್ನು ಬಿಟ್ಟಿದ್ದಾರೆ: ಅಜ್ಜಂಪೀರ್ ಖಾದ್ರಿ

ನಾನು ನಾಮಪತ್ರ ವಾಪಸ್​ ಪಡೆಯುವ ಬಗ್ಗೆ ಯಾವ ತೀರ್ಮಾನವನ್ನೂ ಮಾಡಿಲ್ಲ ಎಂದು ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ತಿಳಿಸಿದ್ದಾರೆ.

ಅಜ್ಜಂಪೀರ್ ಖಾದ್ರಿ
ಅಜ್ಜಂಪೀರ್ ಖಾದ್ರಿ (ETV Bharat)

By ETV Bharat Karnataka Team

Published : 6 hours ago

ಬೆಂಗಳೂರು:"ನನಗೆ ಕಾವಲು‌ ಹಾಕಿದ್ದಾರೆ. ನನ್ನ ಜೊತೆ ಇಬ್ಬರನ್ನು ಬಿಟ್ಟಿದ್ದಾರೆ, ನಾನು ಜಮೀರ್ ನಿವಾಸದಲ್ಲಿದ್ದೇನೆ" ಎಂದು ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, "ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ. ಕಾಂಗ್ರೆಸ್ ಗೆಲ್ಲಬೇಕು, ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್​ ‌ನಾಮಪತ್ರ ವಾಪಸ್ ತೆಗೆಯಿಸಿ ಅಂತಾ ಹೇಳಿದ್ದೇನೆ. ಮುಂದಿನದ್ದು ಅಲ್ಲಾನಿಗೆ ಬಿಟ್ಟಿದ್ದೇನೆ. ಸಿಎಂ, ಡಿಸಿಎಂ, ಜಮೀರ್ ಅಹ್ಮದ್​ ಮಾತಾಡಿದ್ದಾರೆ. ನಾನು ಈಗ ಜಮೀರ್ ಅಹ್ಮದ್​ ಸಾಹೇಬರ ಮನೆಯಲ್ಲಿದ್ದೇನೆ. ನನ್ನನ್ನು ಹೈಜಾಕ್ ಮಾಡಿದ್ದಾರೆ ಅಂತಾ ನಾನು ಹೇಳಲ್ಲ‌. ಈಗಲೇ ನನ್ನ ನಿರ್ಧಾರ ಹೇಳಲು ಆಗಲ್ಲ. ಅ.30ರಂದು ನನ್ನ ನಿರ್ಧಾರ ಗೊತ್ತಾಗುತ್ತದೆ. ನಮ್ಮ ಕಾರ್ಯಕರ್ತರು ನಾಮಪತ್ರ ವಾಪಸ್​ ಪಡೆಯಬೇಡಿ ಅಂತಾ ಹೇಳ್ತಿದ್ದಾರೆ" ಎಂದು ತಿಳಿಸಿದರು.

ಅಜ್ಜಂಪೀರ್ ಖಾದ್ರಿ (ETV Bharat)

"ಶಿಗ್ಗಾಂವಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾದ ನಾನು ಇನ್ನೂ‌ ಗೊಂದಲದಲ್ಲಿದ್ದೇನೆ. ನನಗೆ ಪಕ್ಷ, ನಮ್ಮ ನಾಯಕರು ಮತ್ತು ಸಿಎಂ, ಡಿಸಿಎಂ, ಜಮೀರ್, ಸಂತೋಷ್ ಲಾಡ್ ಮುಖ್ಯ. ನಾಮಪತ್ರ ವಾಪಸ್ ಪಡೆಯುವಂತೆ ಅವರು ಹೇಳ್ತಿದ್ದಾರೆ. ಆದರೆ ನಾನು ಕಾರ್ಯಕರ್ತರನ್ನು ಬಿಡುವಂತಿಲ್ಲ" ಎಂದರು.

"ವಾಪಸ್ ಬೇಡ ಸ್ಪರ್ಧಿಸಿ ಅಂತ ಹೇಳ್ತಿದ್ದಾರೆ. ಹಾಗಾಗಿ ನಾನು ಇನ್ನೂ ಗೊಂದಲದಲ್ಲಿದ್ದೇನೆ. ಅ.30 ರವರೆಗೆ ಸಮಯ ಇದೆ ನೋಡೋಣ. ಅಲ್ಲಾ ಹೇಳಿದಂತೆ ನಾನು ನಡೆಯುತ್ತೇನೆ. ನಮ್ಮ ನಾಯಕರು ನನ್ನ ಕರೆತಂದಿದ್ದಾರೆ. ನಾಮಪತ್ರ ವಾಪಸ್​ ಪಡೆಯುವ ಬಗ್ಗೆ ಯಾವ ತೀರ್ಮಾನವನ್ನೂ ನಾನು ಮಾಡಿಲ್ಲ. ಅ.30 ರ ವರೆಗೆ ನನ್ನ ಅಭಿಪ್ರಾಯ ಹೇಳಲ್ಲ. ನಾನು ಎಲ್ಲೂ ಹೊಂದಾಣಿಕೆ ಮಾಡಿಕೊಂಡವನಲ್ಲ. ನಮ್ಮದು ಗುರು ಪರಂಪರೆಯ ಮನೆತನ" ಎಂದು ಹೇಳಿದರು.

"ಶಿಶುನಾಳ ಶರೀಫರಿಗೆ ದೀಕ್ಷೆ ಕೊಟ್ಟ ಮನೆತನ. ನಾನು ಯಾವತ್ತು ಸುಳ್ಳು ಹೇಳುವುದಿಲ್ಲ.‌ ನಾನೇ ಗೊಂದಲದಲ್ಲಿ ಇದ್ದೇನೆ. ನನಗೆ ಸ್ಪಷ್ಟತೆ ಇಲ್ಲ. ಬಳಿಕ ನಿಮಗೆ ಹೇಳಬಹುದು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಜಮೀರ್ ಅಹ್ಮದ್​ ಖಾನ್ ಮುಂದೆ ಹೇಳುವಾಗ ನಾನು ಪಾಸಿಟಿವ್​ ಆಗಿ ಇರಬೇಕು. ಹಾಗಾಗಿ ನಾನು ಕಾಯುತ್ತಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ವಾಪಸ್ ತೆಗೆಸಿ, ನಾನು ಒಬ್ಬ ಕಾಂಗ್ರೆಸಿಗ. ನನಗೆ ಅವಕಾಶ ನೀಡಿ ಎಂದು ಮತ್ತೆ ಕೇಳಿದ್ದೇನೆ. ಕೊನೆಯದಾಗಿ ಅಲ್ಲಾ ಏನು ಹೇಳುತ್ತಾನೆ, ಅದನ್ನು ಕೇಳಬೇಕು" ಎಂದು ತಿಳಿಸಿದರು.

ಇದನ್ನೂ ಓದಿ:ಚನ್ನಪಟ್ಟಣ ಉಪಚುನಾವಣೆಗೂ ಸಿಎಂ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ: ಸಚಿವ ಚಲುವರಾಯಸ್ವಾಮಿ

ABOUT THE AUTHOR

...view details