ಕರ್ನಾಟಕ

karnataka

ETV Bharat / state

ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿದ್ದಕ್ಕೆ, ರಾಮಲಿಂಗಾರೆಡ್ಡಿ, ಸಂತೋಷ್ ಲಾಡ್ ಲೇವಡಿ

ಈ ಬಾರಿಯ ಲೋಕಸಭಾ ಚುನಾವಣೆಗೆ ಹಾಲಿ ಸಂಸದ ಪ್ರತಾಪ್​ ಸಿಂಹ ಅವರ ಬದಲಿಗೆ ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರಿಗೆ ಟಿಕೆಟ್​ ಘೋಣೆಯಾಗಿದೆ.

By ETV Bharat Karnataka Team

Published : Mar 14, 2024, 3:07 PM IST

Updated : Mar 14, 2024, 4:52 PM IST

Ramalinga Reddy and Santhosh Lad
ರಾಮಲಿಂಗಾ ರೆಡ್ಡಿ, ಸಂತೋಷ್​ ಲಾಡ್​

ಬೆಂಗಳೂರು: "ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಗೊತ್ತಿತ್ತು. ಏಕೆಂದರೆ ಸಂಸತ್ ಭವನದ ಒಳಗೆ ಗ್ಯಾಸ್ ಬಾಂಬ್ ಹಾಕಿದವರಿಗೆ ಇವರೇ ಪಾಸ್ ನೀಡಿದ್ದರು" ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ.

ರಾಮಲಿಂಗಾ ರೆಡ್ಡಿ, ಸಂತೋಷ್​ ಲಾಡ್​

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, "ನಮ್ಮ ಸರ್ಕಾರದ ವಿರುದ್ಧ ವಿರೋಧ ಮಾಡ್ಬೇಕು ಅಂತಾನೆ ಪ್ರತಾಪ್​ ಸಿಂಹ ವಿರೋಧ ಮಾಡುತ್ತಿದ್ದರು. ತಾಲಿಬಾನ್ ಸರ್ಕಾರ ಎಂದು ಸುಮ್ಮನೆ ಟೀಕಿಸುತ್ತಿದ್ದರು. ಅವರನ್ನು ಯಾರೂ ಒಪ್ಪಿಲ್ಲ" ಎಂದರು. "ಮೈಸೂರಿನ ಬಿಜೆಪಿಯಲ್ಲಿ 20-30 ವರ್ಷ ಕೆಲಸ ಮಾಡಿದ ಹಲವಾರು ನಾಯಕರು ಇದ್ದರು. ಆದರೆ ರಾಜ ಮನೆತನದವರಿಗೆ ಕರೆದು ಟಿಕೆಟ್ ನೀಡಿದ್ದಾರೆ. ಇದರಿಂದ ಬಿಜೆಪಿ ದಿವಾಳಿಯಾಗಿದೆ ಅನ್ನೋದು ಗೊತ್ತಾಗುತ್ತದೆ"ಎಂದು ಹೇಳಿದರು. "ಡಿ.ಕೆ.ಸುರೇಶ್ ಅವರು ಸಮರ್ಥರಿದ್ದಾರೆ. ನಾನು ರಾಮನಗರ ಜಿಲ್ಲಾ ಮಂತ್ರಿಯಾಗಿರುವುದರಿಂದ ಪ್ರಚಾರಕ್ಕೆ ಹೋಗುತ್ತೇನೆ. ಅದೇ ರೀತಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಪ್ರಕಟಿಸಿದ ನಂತರ ಅಲ್ಲೂ ಪ್ರಚಾರ ಮಾಡುತ್ತೇನೆ" ಎಂದರು.

ಸಚಿವ ಸಂತೋಷ್ ಲಾಡ್ ವ್ಯಂಗ್ಯ: "ದುರದೃಷ್ಟವಶಾತ್ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಅವರು ನನಗೂ ಒಳ್ಳೆಯ ಫ್ರೆಂಡ್, ನನಗೂ ಬೇಜಾರಿದೆ" ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದರು.

"I wish him good luck ಎಂದ ಲಾಡ್, ಪ್ರತಾಪ್ ಸಿಂಹ ಅವರಿಗೆ ಈ ರೀತಿ ಆಗಬಾರದಿತ್ತು. ಆದರೆ, ರಾಜಕಾರಣದಲ್ಲಿ ಈ ರೀತಿ ಆಗುತ್ತಿರುತ್ತದೆ.‌ ಸಿದ್ದರಾಮಯ್ಯ ಅವರಿಗೆ ಬೈದರೆ ಶಹಬಾಶ್ ಗಿರಿ ಸಿಗುತ್ತದೆಂದು ಅಂದುಕೊಂಡಿದ್ರೋ ಏನೋ? ಅವರ ವಿಚಾರದಲ್ಲಿ ನನಗೆ ತುಂಬಾ ದುಃಖ ಇದೆ. ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳಲಿದೆ" ಎಂದು ಹೇಳಿದರು.

ಬೈರತಿ ಸುರೇಶ್​ ವ್ಯಂಗ್ಯ: "ಸಂಸದ ಪ್ರತಾಪ್ ಸಿಂಹ ಅವರಿಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು. ಚಾಮುಂಡೇಶ್ವರಿ ತಾಯಿ ಇನ್ನು ಮುಂದೆ ಅವರಿಗೆ ಸದ್ಬುದ್ಧಿ ಕೊಡಲಿ. ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಇಲ್ಲ ಅಂತಿದ್ರು. ಈಗ ಅವರ ಪರಿಸ್ಥಿತಿ ನೋಡಿದ್ರೆ ಅಯ್ಯೋ ಅನ್ನಿಸುತ್ತದೆ. ಅಧಿಕಾರ ಇದ್ದಾಗ ಹಿಗ್ಗಬಾರದೆಂದು ಪ್ರತಾಪ್ ಸಿಂಹ ಅವರನ್ನು ನೋಡಿ ಕಲಿಯಬೇಕು" ಎಂದು ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವ್ಯಂಗ್ಯವಾಡಿದ್ದಾರೆ.

ಬೈರತಿ ಸುರೇಶ್​ ಹಾಗೂ ಶಾಸಕ ರಿಜ್ವಾನ್ ಅರ್ಷದ್

ಜಾತಿಗಳ ಮಧ್ಯೆ ಫೈರ್ ಹಾಕಿದ ಈಶ್ವರಪ್ಪ: "ಕೆ.ಎಸ್. ಈಶ್ವರಪ್ಪ, ಯಾವತ್ತೂ ಸಮುದಾಯದ ಫೈರ್ ಬ್ರಾಂಡ್ ಅಲ್ಲ. ಅವರು ಜಾತಿ, ಜಾತಿಗಳ ನಡುವೆ ಫೈರ್ ಹಾಕ್ತಿದ್ರು. ಜಾತಿ ಜಾತಿಗಳ ನಡುವೆ ತಂದು ಹಚ್ಚುವ ಕೆಲಸ ಮಾಡ್ತಿದ್ರು" ಎಂದು ಟೀಕಿಸಿದರು.

ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, "ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಣೆ ಮಾಡಿರುವುದು ಬಿಜೆಪಿ ಆಂತರಿಕ ವಿಚಾರ. ಆದರೆ, ಕಾಂಗ್ರೆಸ್ ಸರ್ಕಾರವನ್ನು ಭಯೋತ್ಪಾದಕ, ತಾಲಿಬಾನ್ ಸರ್ಕಾರ ಅಂತಿದ್ರು. ಕಲರ್ ಬಾಂಬ್ ಹಾಕಿದವರಿಗೆ ಸಂಸತ್ ಒಳಗಡೆ ಕರೆದುಕೊಂಡು ಹೋಗಲು ಪಾಸ್ ಕೊಟ್ಟಿದ್ರು. ಸಮಾಜದಲ್ಲಿ ಒಡಕು ಸೃಷ್ಟಿ ಮಾಡುವುದು ರಾಜಕಾರಣ ಅಲ್ಲ" ಎಂದರು.

"ಸಂಸತ್ ಒಳಗಡೆ ಕಲರ್ ಬಾಂಬ್ ಹಾಕಿದೋರನ್ನು ಕರೆದುಕೊಂಡು ಹೋಗಿದ್ದಕ್ಕಾ? ಅಥವಾ ಮೈಸೂರು ಹೈವೇ ರಸ್ತೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದೆ ಅಂತಾ ಹೇಳಿದ್ರು, ಅದಕ್ಕಾ?. ಯಾವ ಕಾರಣಕ್ಕೆ ಅವರನ್ನು ಡ್ರಾಪ್‌ ಮಾಡಿದ್ರು ಎಂಬುದರ ಬಗ್ಗೆ ಬಿಜೆಪಿಯವರು ಸ್ಪಷ್ಟನೆ ಕೊಡಬೇಕಲ್ವಾ?" ಎಂದು ಪ್ರಶ್ನಿಸಿದರು.

"ಪ್ರತಾಪ್​ ಸಿಂಹ ಅವರು ರಾಜಕೀಯ ಅಂದ್ರೆ ಸಮಾಜದಲ್ಲಿ ಒಡಕು ಸೃಷ್ಟಿಸುವುದು ರಾಜಕಾರಣ ಅಲ್ಲ. ಜಾತಿಗಳನ್ನು ಒಡೆಯುವುದಲ್ಲ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿದರೆ ಟಿಕೆಟ್ ಸಿಗುತ್ತದೆ ಅನ್ನುವ ಲೆಕ್ಕಾಚಾರದಲ್ಲಿ ಮಾತನಾಡಿದ್ದರು" ಎಂದು ಕುಟುಕಿದರು.

ಇದನ್ನೂ ಓದಿ:'ನಾನು 3 ಲಕ್ಷ ಲೀಡ್​ನಿಂದ ಗೆಲ್ಲುತ್ತೇನೆ, ಜಗದೀಶ್​ ಶೆಟ್ಟರ್ ಟಿಕೆಟ್ ತಪ್ಪಿಸುವ ಪ್ರಯತ್ನ ಮಾಡಿಲ್ಲ': ಪ್ರಹ್ಲಾದ್​ ಜೋಶಿ

Last Updated : Mar 14, 2024, 4:52 PM IST

ABOUT THE AUTHOR

...view details