ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಪುಣೆ ಮಾದರಿಯ ಲ್ಯಾಬ್ ಪರೀಕ್ಷಾ ಕೇಂದ್ರ: ದಿನೇಶ್ ಗುಂಡೂರಾವ್ - DINESH GUNDU RAO MEETING

ಮಂಗನ ಕಾಯಿಲೆಗೆ ಯಾವುದೇ ಔಷಧ ಇಲ್ಲವಾದ್ದರಿಂದ ಕಾಯಿಲೆ ನಿಯಂತ್ರಣದ ಜೊತೆಗೆ ಕಾಯಿಲೆ ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

DINESH GUNDU RAO MEETING
ಸಾಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು. (ETV Bharat)

By ETV Bharat Karnataka Team

Published : Nov 27, 2024, 9:52 AM IST

ಶಿವಮೊಗ್ಗ: ಪುಣೆಯಲ್ಲಿರುವಂಥ ವೈರಣು ಪರೀಕ್ಷಾ ಕೇಂದ್ರವನ್ನು ಶಿವಮೊಗ್ಗದಲ್ಲಿ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮಂಗನ ಕಾಯಿಲೆಯಿಂದ ಹೆಚ್ಚು ಬಾಧಿತವಾಗಿರುವ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಹಾಗೂ ಕಾರವಾರ ಜಿಲ್ಲೆಗಳ ಅಧಿಕಾರಿಗಳ ಜೊತೆ ಮಂಗಳವಾರ ಸಾಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಸಚಿವರು, ಅಧಿಕಾರಿಗಳಿಗೆ ಕೆಲವು ಸೂಚನೆ ನೀಡಿದರು.

ಮುಖ್ಯವಾಗಿ, ಈ ಕಾಯಿಲೆಗೆ ಯಾವುದೇ ಔಷಧ ಇಲ್ಲವಾದ್ದರಿಂದ ಕಾಯಿಲೆ ನಿಯಂತ್ರಣದ ಜೊತೆಗೆ ಕಾಯಿಲೆ ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ನಾಲ್ಕೂ ಜಿಲ್ಲೆಯ ಅಧಿಕಾರಿಗಳಿಗೆ ತಿಳಿಸಿದರು. ಯಾವ ಜಿಲ್ಲೆಯಲ್ಲಿ ಈ ಕಾಯಿಲೆ ಹೆಚ್ಚು ಉದ್ಭವಿಸಿರುತ್ತದೋ ಅಲ್ಲೆಲ್ಲಾ ಜನರಿಗೆ ಅರಿವು ಮೂಡಿಸಬೇಕು ಎಂದರು.

ಮಂಗಗಳು ಸತ್ತರೆ ಅದರ ಮರಣೋತ್ತರ ಪರೀಕ್ಷೆ ನಡೆಸಿ ತಕ್ಷಣ ಫಲಿತಾಂಶ ಪಡೆದು ಕಾರ್ಯಪ್ರವೃತ್ತರಾಗಬೇಕು. ಇದಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಭೆ ನಡೆಸಬೇಕು. ಈಗಾಗಲೇ ಡಿಎಂಪಿ ಆಯಿಲ್ ಸರ್ಕಾರದ ಮಟ್ಟದಲ್ಲಿ ಇದೆಯಾದರೂ ಈ ನಾಲ್ಕೂ ಜಿಲ್ಲೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬೇಕಾದಷ್ಟು ದಾಸ್ತಾನು ಮಾಡಿ ಶಾಲಾ ಮಕ್ಕಳ ಮನೆಗಳಿಗೆ ವಿತರಿಸಬೇಕು. ಶಿರಸಿಯಲ್ಲಿ ಲ್ಯಾಬ್ ಟೆಸ್ಟ್ ಕೇಂದ್ರ ಸ್ಥಾಪನೆ ಸೇರಿ ಶಿವಮೊಗ್ಗ ಲ್ಯಾಬ್ ಟೆಸ್ಟ್ ಕೇಂದ್ರ ಉನ್ನತೀಕರಿಸಿ ಗ್ರೇಡ್ ಮೂರಕ್ಕೆ ಏರಿಸಲಾಗುವುದು ಎಂದರು.

ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಹಾಗೂ ಕಾರವಾರ ಜಿಲ್ಲೆಗಳಿಗೆ ಕೆಎಫ್​ಡಿ ವಾಹನಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು. ಮಣಿಪಾಲ್ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ ಉಚಿತ ಚಿಕಿತ್ಸೆಯನ್ನು ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿದವರಿಗೂ ನೀಡಲು ಸರ್ಕಾರದಿಂದ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಇದೇ ವೇಳೆ ತಿಳಿಸಿದರು.

ಮಂಗನ ಕಾಯಿಲೆ ಲ್ಯಾಬ್ ಟೆಸ್ಟ್​ ಸೆಂಟರ್ ಸಾಗರದಲ್ಲಿ ಮತ್ತೆ ಪುನರ್ ಆರಂಭಿಸಲಾಗುವುದು. ಮಂಗನ ಕಾಯಿಲೆಯ ಪ್ರಯೋಗಾಲಯ ಬಗ್ಗೆ ಹಾಗೂ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲಾಗುವುದು. ಸಾಗರ ಉಪವಿಭಾಗೀಯ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯ ಗ್ರೇಡ್​ಗೆ ಏರಿಸಲು ಕ್ರಮ ಕೂಡ ಕೈಗೊಳ್ಳಲಾಗುವುದು ಎಂದರು.

ಮಂಗನಕಾಯಿಲೆಯಿಂದ ಕಳೆದ ವರ್ಷ ಅನೇಕ ಸಾವು-ನೋವು ಸಂಭವಿಸಿದ್ದರಿಂದ ಸರ್ಕಾರ ಈ ವರ್ಷ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಮುಂಜಾಗ್ರತವಾಗಿ ಸಭೆ ಕೂಡ ನಡೆಸಲಾಗಿದೆ. ಈ ವರ್ಷ ಎಲ್ಲಾ ನಾಲ್ಕೂ ಜಿಲ್ಲೆಯಲ್ಲಿ ಸರ್ವೆ ಕಾರ್ಯ ಮಾಡಬೇಕು. ಕಾಯಿಲೆಯ ಬಗ್ಗೆ ಅಧಿಕಾರಿಗಳು ಹೆಚ್ಚು ಜಾಗ್ರತೆಯಿಂದ ಇರಬೇಕು. ಎಲ್ಲಿಯೂ ಸಾವು ಸಂಭವಿಸಬಾರದು. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಮಾದರಿಯಲ್ಲಿ ಶಿವಮೊಗ್ಗ ಮೆಗ್ಗಾನ್​ನಲ್ಲಿ ಚಿಕಿತ್ಸೆ ನೀಡಬೇಕು. ವೈದ್ಯರು ಹಾಗೂ ಬೇಕಾದ ವಾರ್ಡ್ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ:2026 ವೇಳೆಗೆ ಮಂಗನ ಕಾಯಿಲೆಗೆ ಲಸಿಕೆ ಲಭ್ಯವಾಗಲಿದೆ: ಸಚಿವ ದಿನೇಶ್ ಗುಂಡೂರಾವ್

ABOUT THE AUTHOR

...view details