ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿ ಮತ್ತೆ ಮರಳುಗಾರಿಕೆ ಬಂದ್​​: ಮನೆ, ಕಟ್ಟಡ ನಿರ್ಮಾಣಕ್ಕೆ ಸಂಕಷ್ಟ

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ವ್ಯಕ್ತಿಯೋರ್ವರು ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳು ಸಿಗದೆ, ಜನರು ಪರದಾಡುವಂತಾಗಿದೆ. ಕಟ್ಟಡ ಸೇರಿದಂತೆ ಸಣ್ಣಪುಟ್ಟ ಮನೆ ಕಟ್ಟುವವರೂ ಮರಳಿಲ್ಲದೇ ತೊಂದರೆಗೀಡಾಗಿದ್ದಾರೆ.

By ETV Bharat Karnataka Team

Published : 4 hours ago

sand problem
ನದಿ, ಕಟ್ಟಡ ನಿರ್ಮಾಣ ಕಾಮಗಾರಿ (ETV Bharat)

ಕಾರವಾರ(ಉತ್ತರ ಕನ್ನಡ):ಮರಳು ವಿಚಾರ ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನರು ಮತ್ತೆ ಪರದಾಡುವಂತೆ ಮಾಡಿದೆ. ಕಳೆದೊಂದು ವರ್ಷದಿಂದ ಮರಳು ಸರಬರಾಜು ಬಂದ್ ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತೊಂದರೆಗೆ ಸಿಲುಕಿದ್ದಾರೆ. ಈವರೆಗೂ ಮರಳು ಪ್ರಾರಂಭಕ್ಕೆ ಯಾವುದೇ ಪ್ರಯತ್ನ ನಡೆಯದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಈ ಹಿಂದೆ ಶರಾವತಿ, ಕಾಳಿ, ಅಘನಾಶಿನಿ ಹಾಗೂ ಗಂಗಾವಳಿ ನದಿಯಲ್ಲಿ ಸುಮಾರು ನೂರಕ್ಕೂ ಅಧಿಕ ಲೀಸ್​​ದಾರರು ಮರಳು ತೆಗೆಯುತ್ತಿದ್ದರಿಂದ ಜನರಿಗೆ ಮರಳಿನ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಮೂರು ವರ್ಷದ ಹಿಂದೆ ಉಡುಪಿಯ ವ್ಯಕ್ತಿಯೊಬ್ಬರು ಕರಾವಳಿಯ ಮರಳುಗಾರಿಕೆ ವಿರುದ್ಧ ರಾಷ್ಟ್ರೀಯ ಹಸಿರುಪೀಠದ ಮೊರೆ ಹೋಗಿದ್ದರು. ಇದರಿಂದ ಸುಮಾರು ಎರಡು ವರ್ಷಕ್ಕೂ ಅಧಿಕ ಸಮಯ ಮರಳಿಲ್ಲದೇ ಜನರು ಪರದಾಡಿದ್ದರು. ಬಳಿಕ, ಕಳೆದ ವರ್ಷ ಮರಳುಗಾರಿಕೆಗಿದ್ದ ತೊಡಕು ಹೋಗಲಾಡಿಸಿ ಅವಕಾಶ ಕೊಡಲಾಗಿತ್ತು. ಆದರೀಗ ಮತ್ತೆ ಹೊನ್ನಾವರದ ವ್ಯಕ್ತಿಯೋರ್ವರು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (ಎನ್​ಜಿಟಿ) ಮೆಟ್ಟಿಲೇರಿದ್ದು, ಮರಳುಗಾರಿಕೆ ಸ್ಥಗಿತ ಮಾಡಲಾಗಿದೆ.

ಉತ್ತರ ಕನ್ನಡದಲ್ಲಿ ಮರಳುಗಾರಿಕೆ ಬಂದ್ (ETV Bharat)

ಇದರಿಂದ, ಸಣ್ಣಪುಟ್ಟ ಮನೆ ಕಟ್ಟುವವರಿಗೂ ಮರಳಿಲ್ಲದೇ ಪರಿತಪಿಸುವಂತಾಗಿದೆ. ಸದ್ಯ ಮಳೆಗಾಲ ಮುಗಿದಿರುವುದರಿಂದ ಮನೆ ನಿರ್ಮಾಣ ಕಾರ್ಯಗಳು ಚುರುಕುಗೊಂಡಿದೆ. ಪ್ಲಾಸ್ಟ್ರಿಂಗ್ ಸೇರಿದಂತೆ ಎಲ್ಲಾ ಕೆಲಸಕ್ಕೆ ಮರಳು ಅನಿವಾರ್ಯವಾಗಿದ್ದು, ಅದಕ್ಕಾಗಿ ಜನರು ಹುಡುಕಾಡುವ ಪರಿಸ್ಥಿತಿ ಇದೆ.

ಈ ಹಿಂದೆ ಮೀಟರ್ ಮರಳನ್ನು 1 ಸಾವಿರದಿಂದ 1,200 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಸದ್ಯ ಮರಳು ಬಂದ್ ಇರುವ ಹಿನ್ನೆಲೆಯಲ್ಲಿ, ಕದ್ದುಮುಚ್ಚಿ ಮರಳು ತೆಗೆದುಕೊಳ್ಳುವಂತಾಗಿದ್ದು, ಅದು ಮೀಟರ್ ಮರಳಿಗೆ 2 ಸಾವಿರದ ಗಡಿ ದಾಟಿದೆ. ಇನ್ನೊಂದೆಡೆ, ನದಿ ದಡದಲ್ಲಿದ್ದ ಮರಳನ್ನು ತೆಗೆದು ಸಣ್ಣಪುಟ್ಟ ಮನೆ ಕಟ್ಟುವವರಿಗೆ ಕೊಡುವ ಕೆಲಸವನ್ನು ಕೆಲವರು ಮಾಡುತ್ತಿದ್ದರು. ಆದರೆ ಅದಕ್ಕೂ ಪೊಲೀಸರು ಕಡಿವಾಣ ಹಾಕಿದ್ದು, ಜನರಿಗೆ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ:ಮಂಗಳೂರು: ಹುಲಿವೇಷ ಊದುಪೂಜೆಯಲ್ಲಿ ಸಂಜಯ್ ದತ್, 'ಪಿಲಿನಲಿಕೆ'ಯಲ್ಲಿ ಕ್ರಿಕೆಟಿಗ ಶಿವಂ ದುಬೆ ಭಾಗಿ

"ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಮಿತಿ ಮೀರಿದೆ. ಎಂ ಸ್ಯಾಂಡ್ ಸಹ ಸಿಗದಿರುವ ಕಾರಣ ಮನೆಗಳನ್ನು ಕಟ್ಟುವ ಕೆಲಸವನ್ನೇ ನಿಲ್ಲಿಸುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ಅಧಿಕೃತವಾಗಿಯೂ ಅನುಮತಿ ಕೊಡುವುದಿಲ್ಲ. ಅನಧಿಕೃತವಾಗಿ ಮರಳು ತೆಗೆದುಕೊಳ್ಳಲು ಪೊಲೀಸರು ಬಿಡುತ್ತಿಲ್ಲ" ಎನ್ನುವುದು ಮನೆ ಕಟ್ಟುವವರ ಅಳಲು.

ಉಸ್ತುವಾರಿ ಸಚಿವರು ಹೇಳುವುದೇನು?: ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಪ್ರಶ್ನಿಸಿದರೆ, ''ಬಿಜೆಪಿಯ ಮುಖಂಡರೊಬ್ಬರು ಮರಳು ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು, ಇದರಿಂದ ಸಮಸ್ಯೆ ಆಗಿದೆ. ಅವರು ಪ್ರಕರಣ ಹಿಂತೆಗೆದುಕೊಂಡರೆ ಅದೇ ದಿನ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಜಿಲ್ಲಾಧಿಕಾರಿ ಮೂಲಕ ಆದೇಶ ನೀಡುತ್ತೇವೆ'' ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಹಾವೇರಿ: ಶಾಂತೇಶ ದೇಗುಲದಲ್ಲಿ ಸಂತಾನಕ್ಕಾಗಿ ಔಷಧಿ ವಿತರಣೆ; ಪ್ರಸಾದ ಸ್ವೀಕರಿಸಿದ 2 ಸಾವಿರಕ್ಕೂ ಹೆಚ್ಚು ಮಹಿಳೆಯರು

ABOUT THE AUTHOR

...view details