ಬೆಂಗಳೂರು/ ನವದೆಹಲಿ:ಕೇಂದ್ರ ಸರ್ಕಾರವು ನೀಡುವ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಯಾದ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಕರ್ನಾಟಕದ 9 ಮಂದಿ ಭಾಜನರಾಗಿದ್ದಾರೆ. ಈ ಎಲ್ಲ ಸಾಧಕರಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಮುರ್ಮು ಅವರು ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯಾತಿಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಕರುನಾಡ ಖ್ಯಾತ ಕೈಗಾರಿಕೋದ್ಯಮಿ ಸೀತಾರಾಮ್ ಜಿಂದಾಲ್ ಅವರು ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಇವರು 90 ವರ್ಷದ ಹಿರಿಯ ಕೈಗಾರಿಕೋದ್ಯಮಿಯಾಗಿದ್ದು, ಬೆಂಗಳೂರಿನ ಜಿಂದಾಲ್ ನೇಚರ್ಕ್ಯೂರ್ ಇನ್ಸ್ಟಿಟ್ಯೂಟ್ ಮೂಲಕ ಪ್ರಕೃತಿ ಚಿಕಿತ್ಸಾ ಪದ್ಧತಿಯನ್ನು ಪ್ರಚಾರ ಮಾಡುತ್ತಿದ್ದಾರೆ.
ಬೆಂಕಿಯಲ್ಲಿ ಅರಳಿದ ಪ್ಲಾಸ್ಟಿಕ್ ಸರ್ಜನ್ ಪ್ರೇಮಾಗೆ ಪದ್ಮಶ್ರೀ :ಸಣ್ಣ ವಯಸ್ಸಿನಲ್ಲಿ ಗ್ಯಾಸ್ ಸ್ಟವ್ ಸ್ಫೋಟದಿಂದ ದೇಹ ಸುಟ್ಟು, ಹಲವು ಬಾರಿ ಶಸ್ತ್ರಚಿಕಿತ್ಸೆಯಾಗಿ ಬದುಕುಳಿದ 72 ವರ್ಷದ ಪ್ರೇಮಾ ಧನರಾಜ್ ಬಳಿಕ ತಾವೇ ಶಸ್ತ್ರಚಿಕಿತ್ಸಕರಾಗಿ, ಇದುವರೆಗೆ 25,000 ಸುಟ್ಟು ಗಾಯಗೊಂಡ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇವರ ಸಾಮಾಜಿಕ ಕಾರ್ಯಕ್ಕೆ ಪದ್ಮಶ್ರೀ ಒಲಿದು ಬಂದಿದೆ.
ಇನ್ನು ಪೋಲಿಯೊದಿಂದ ತಮ್ಮ ಎರಡೂ ಕೈ ಕಾಲುಗಳನ್ನು ಕಳೆದುಕೊಂಡಿದ್ದ ಕೆ.ರಾಜಣ್ಣ ಅವರು ಸಾಮಾಜಿಕ ಕಾರ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಶ್ರೀಧರ್ ಮಾಕಂ ಕೃಷ್ಣಮೂರ್ತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿದೆ. 69 ವರ್ಷ ವಯಸ್ಸಿನ ಇವರು ಗಾಲಿಕುರ್ಚಿಯ ಶಿಕ್ಷಣ ತಜ್ಞರಾಗಿದ್ದು, ರಾಷ್ಟ್ರದ ಶಿಕ್ಷಣ ನೀತಿಗಳಿಗೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ.