ಕರ್ನಾಟಕ

karnataka

ಶಿಮುಲ್‌ ಹಾಲು ಒಕ್ಕೂಟದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ - Shimul Election

By ETV Bharat Karnataka Team

Published : Jul 31, 2024, 9:22 AM IST

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ ಐದು ವರ್ಷದ ಆಡಳಿತ ಮಂಡಳಿ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದೆ.

SHIMUL ELECTION
ಶಿಮುಲ್‌ ಹಾಲು ಒಕ್ಕೂಟ (ETV Bharat)

ಶಿವಮೊಗ್ಗ:ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್‌)ದ ಆಡಳಿತ ಮಂಡಳಿ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದೆ.

ಮುಂದಿನ ಐದು ವರ್ಷಕ್ಕೆ ಶಿಮುಲ್‌ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಯಾಗಲಿದೆ. ಚುನಾವಣೆಗೆ ಮಂಗಳವಾರದಿಂದ (ಜುಲೈ 30) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಆಗಸ್ಟ್​ 6ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಆಗಸ್ಟ್ 8ರಂದು ನಾಮಪತ್ರ ವಾಪಸ್‌ ಪಡೆಯಲು ಅಂತಿಮ ದಿನವಾಗಿದೆ. ಆಗಸ್ಟ್ 14ರಂದು ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ಕಾರ್ಯ ಅಂದೇ ನಡೆದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್‌ ಬಿ.ಎನ್‌.ಗಿರೀಶ್‌ ನೇಮಕವಾಗಿದ್ದಾರೆ.

14 ನಿರ್ದೇಶಕರ ಆಯ್ಕೆ:ಮೂರು ಜಿಲ್ಲೆಯಿಂದ ಒಟ್ಟು‌ 14 ನಿರ್ದೇಶಕರನ್ನು ಶಿಮುಲ್‌ ಆಡಳಿತ ಮಂಡಳಿಗೆ ಆಯ್ಕೆ ಮಾಡಲಾಗುತ್ತದೆ. ಮೂರು ಜಿಲ್ಲೆಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ ನಿರ್ದೇಶರನ್ನು ಚುನಾಯಿಸಲಾಗುತ್ತದೆ. ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ವಿಭಾಗದಿಂದ ತಲಾ ಮೂವರು ನಿರ್ದೆಶಕರು, ಹೊಸನಗರ, ಸಾಗರ, ಸೊರಬ ಹಾಗೂ ಶಿಕಾರಿಪುರ ವಿಭಾಗಗಳಿಂದ ಒಟ್ಟು ಮೂರು ಜನ ನಿರ್ದೆಶಕರುಗಳು, ಅದರಂತೆ ದಾವಣಗೆರೆ ಮತ್ತು ಚಿತ್ರದುರ್ಗ ವಿಭಾಗಗಳಿಂದ ತಲಾ ನಾಲ್ವರು ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗುತ್ತದೆ.

ಶಿಮುಲ್‌ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ನಿರ್ದೇಶಕರನ್ನು ಆಯ್ಕೆ ಮಾಡುತ್ತಾರೆ. ಒಕ್ಕೂಟದಲ್ಲಿ 1,406 ಸಂಘಗಳಿವೆ. ಈ ಪೈಕಿ 1,171 ಸಂಘಗಳು ಮತದಾನದ ಹಕ್ಕು ಪಡೆದುಕೊಂಡಿವೆ. 235 ಸಂಘಗಳು ಮತದಾನಕ್ಕೆ ಅನರ್ಹಗೊಂಡಿವೆ. ಮತದಾನಕ್ಕೆ ಅರ್ಹವಾಗಿರುವ ಸಂಘಗಳು ತಮ್ಮ ಒಬ್ಬ ಪ್ರತಿನಿಧಿಯನ್ನು ಮತದಾರರನ್ನಾಗಿ ಆಯ್ಕೆ ಮಾಡುತ್ತವೆ. ಈ ಪ್ರತಿನಿಧಿ ಒಬ್ಬ ನಿರ್ದೇಶಕರನ್ನು ಆಯ್ಕೆ ಮಾಡುತ್ತಾರೆ.

ಶಿಮೂಲ್​ ಒಕ್ಕೂಟವನ್ನು ನಾಲ್ಕು ವಿಭಾಗವಾಗಿ ವಿಂಗಡಿಸಲಾಗಿದೆ. ಶಿವಮೊಗ್ಗ ವಿಭಾಗಕ್ಕೆ ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ತಾಲೂಕು ಸೇರಲಿವೆ. ಸಾಗರ ವಿಭಾಗಕ್ಕೆ ಸೊರಬ, ಸಾಗರ, ಹೊಸನಗರ, ಶಿಕಾರಿಪುರ ತಾಲೂಕು ಸೇರಲಿವೆ. ದಾವಣಗೆರೆ ವಿಭಾಗಕ್ಕೆ ಹರಿಹರ, ದಾವಣಗೆರೆ, ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಜಗಳೂರು ತಾಲೂಕು ಸೇರಲಿವೆ. ಚಿತ್ರದುರ್ಗ ವಿಭಾಗಕ್ಕೆ ಹೊಳಲ್ಕೆರೆ, ಚಿತ್ರದುರ್ಗ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲೂಕು ಸೇರಲಿವೆ. ಪ್ರತಿ ವಿಭಾಗದಿಂದ ಅತಿ ಹೆಚ್ಚು ಮತ ಪಡೆದವರನ್ನು ಆಯ್ಕೆ ಮಾಡಲಾಗುತ್ತದೆ.

ಚುನಾವಣಾ ಪ್ರಕ್ರಿಯೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿಯಾಗಿ ಜಿಲ್ಲಾಧಿಕಾರಿ ಇರಲಿದ್ದಾರೆ ಎಂದು ಶಿಮೂಲ್ ಎಂ.ಡಿ.ಶೇಖರ್ ತಿಳಿಸಿದ್ದಾರೆ.

ಇದನ್ನೂ ಓದಿ:ಕೆಎಂಎಫ್ ಇತಿಹಾಸದಲ್ಲೇ ಮೊದಲ ಬಾರಿಗೆ 1 ಕೋಟಿ ಲೀಟರ್ ದಾಟಿದ ಹಾಲಿನ ಸಂಗ್ರಹಣೆ: ಸಿಎಂ ಹರ್ಷ - KMF Milk Collection record

ABOUT THE AUTHOR

...view details