ಕರ್ನಾಟಕ

karnataka

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರಮಿಸಿದ್ದವರಿಗೆ ಸಿಗದ ಗೌರವಧನ; ಕಲಾವಿದರ ಅಳಲು - No payment to artists

By ETV Bharat Karnataka Team

Published : 4 hours ago

ಹಾವೇರಿಯಲ್ಲಿ ಕಳೆದ ಬಾರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದಿತ್ತು. ಆದರೆ ಈ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ್ದ ಕಲಾವಿದರಿಗೆ ಇನ್ನೂ ಗೌರವಧನ ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

Bhuvaneshwari Devi Ratha
ಭುವನೇಶ್ವರಿ ದೇವಿ ರಥ (ETV Bharat)

ಹಾವೇರಿ :ಡಿಸೆಂಬರ್ 20 ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನಕ್ಕೆ ಭರದ ಸಿದ್ಧತೆ ಆರಂಭವಾಗಿದ್ದು, ಸಿದ್ದಾಪುರ ಭುವನೇಶ್ವರಿ ದೇವಸ್ಥಾನದಿಂದ ಭಾನುವಾರ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಾಗಿದೆ. ಇದರ ಮಧ್ಯೆ ಹಾವೇರಿಯಲ್ಲಿ ನಡೆದ 86ನೇ ಸಾಹಿತ್ಯ ಸಮ್ಮೇಳನದಲ್ಲಿ ಶ್ರಮಿಸಿದ ಕಲಾವಿದರಿಗೆ ಗೌರವಧನ ಇನ್ನೂ ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಬಹಳ ವರ್ಷಗಳ ನಂತರ ಹಾವೇರಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿತ್ತು. ಏಲಕ್ಕಿ ಕಂಪಿನ ನಗರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟು, ಅದ್ಧೂರಿತನಕ್ಕೆ ಸಾಕ್ಷಿಯಾಗಿತ್ತು. ಅಂದು ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಸಾಹಿತ್ಯ ಸಮ್ಮೇಳನಕ್ಕೆ 25 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಪ್ರಥಮ ಬಾರಿಗೆ ಕನ್ನಡತಾಯಿಯ ಜ್ಯೋತಿ ಯಾತ್ರೆ ನಡೆಸಲು ಭುವನೇಶ್ವರಿ ರಥ ನಿರ್ಮಿಸಲಾಗಿತ್ತು.

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರಮಿಸಿದ್ದವರಿಗೆ ಸಿಗದ ಗೌರವಧನ ; ಕಲಾವಿದರ ಅಳಲು (ETV Bharat)

ಪ್ರಥಮ ಬಾರಿಗೆ ಸಮ್ಮೇಳನದ ಅಧ್ಯಕ್ಷರಿಗಾಗಿ ಸಾರೋಟು ನಿರ್ಮಿಸಲಾಗಿತ್ತು. ಅಲ್ಲದೆ ಸಮ್ಮೇಳನ ನಡೆಯುವ ಪ್ರದೇಶಕ್ಕೆ ಕನಕದಾಸರ ಪ್ರತಿಕೃತಿ ನಿರ್ಮಿಸುವ ಮೂಲಕ ಸಾಹಿತ್ಯಾಸಕ್ತರನ್ನು ಸೆಳೆಯಲಾಗಿತ್ತು. ಜೊತೆಗೆ ಕಾರ್ಯಕ್ರಮದ ಶೀರ್ಷಿಕೆಯ ಅಕ್ಷರಗಳು ಒಂದಕ್ಕಿಂತ ಒಂದು ಅದ್ಭುತವಾಗಿ ಮೂಡಿಬಂದಿದ್ದವು. ಸಾಹಿತ್ಯ ಸಮ್ಮೇಳನದ ಲಾಂಛನದಿಂದ ಹಿಡಿದು ಸಮ್ಮೇಳನದ ಅದ್ಧೂರಿತನಕ್ಕೆ ನೂರಾರು ಕಾರ್ಮಿಕರು ಶ್ರಮಿಸಿದ್ದರು.

ಕಾರ್ಮಿಕರ ಶ್ರಮದಿಂದ ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ವಿಶೇಷ ಮೆರುಗು ಬಂದಿತ್ತು. ಕಳೆದ ವರ್ಷ ನಿರ್ಮಿಸಿದ ಭುವನೇಶ್ವರಿ ಜ್ಯೋತಿ ರಥವನ್ನೇ ಈ ವರ್ಷ ಸಹ ಬಳಸಲಾಗುತ್ತಿದೆ. ಜೊತೆಗೆ ಅಧ್ಯಕ್ಷರ ಮೆರವಣಿಗೆ ಮಾಡುವ ಸಾರೋಟು ಸಹ ಕಳೆದ ವರ್ಷ ನಿರ್ಮಿಸಿದ್ದೇ. ಇವನ್ನೆಲ್ಲಾ ಹಾವೇರಿ ಕಲಾವಿದ ಷಹಜಹಾನ್ ಮುದಕವಿ 80 ಲಕ್ಷ ರೂಪಾಯಿಗೂ ಅಧಿಕ ಹಣ ಹಾಕಿ ನಿರ್ಮಿಸಿದ್ದಾರೆ.

ರಥದ ತಯಾರಿಕೆಯಲ್ಲಿ ತೊಡಗಿರುವ ಕಲಾವಿದರು (ETV Bharat)

ಜೊತೆಗೆ ಈ ಕಾರ್ಯಕ್ಕೆ ನೂರಾರು ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. ಆದರೆ ಷಹಜಹಾನ್​ ಮುದಕವಿಗೆ 50 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿದ್ದು ಬಿಟ್ಟರೆ ಉಳಿದ 30 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿಲ್ಲ. ಸಾಹಿತ್ಯ ಸಮ್ಮೇಳನಕ್ಕೆ ಕೆಲಸ ಮಾಡಿದ ಕಾರ್ಮಿಕರೆಲ್ಲ ಬಡ ಕಲಾವಿದರು. ಅವರೆಲ್ಲಾ ಸರ್ಕಾರದ ಸಹಾಯಧನ, ಗೌರವಧನ ಅವಲಂಬಿಸಿದ್ದಾರೆ. ಅವರಿಗೆಲ್ಲ ಇನ್ನೂ ಹಣ ನೀಡಲಾಗಿಲ್ಲ ಎಂದು ಕಲಾವಿದರು ಹೇಳಿದ್ದಾರೆ.

ಈ ಕುರಿತಂತೆ ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿಯವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇನೆ. ಬೆಂಗಳೂರಿಗೆ ಹಲವು ಬಾರಿ ಓಡಾಡಿದ್ದೇನೆ. ದುಡ್ಡು ಖರ್ಚಾಗಿದ್ದು ಬಿಟ್ಟರೆ ನಮ್ಮ ಹಣ ಮಾತ್ರ ಬಿಡುಗಡೆಯಾಗಿಲ್ಲ. ಪ್ರತಿಸಲ ಹೋದಾಗಲೆಲ್ಲಾ ಒಂದೊಂದು ಸಬೂಬು ಹೇಳುತ್ತಿದ್ದಾರೆ ಎಂದು ಕಲಾವಿದರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ರಥದ ತಯಾರಿಕೆಯಲ್ಲಿರುವ ಕಲಾವಿದರು (ETV Bharat)

ಈ ಬಗ್ಗೆ ಈಟಿವಿ ಭಾರತ ಕಲಾವಿದ ಷಹಜಹಾನ್ ಮುದಕವಿ ಅವರು ಮಾತನಾಡಿ, 'ಹಾವೇರಿಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಇಡೀ ನಾಡಿನಾದ್ಯಂತ ಜನ ಹೆಮ್ಮೆ ಪಟ್ಟರು. ಆದರೆ ಅಲ್ಲಿ 60 ರಿಂದ 70 ಕಲಾವಿದರು ವೇದಿಕೆ ಡೆಕೋರೇಷನ್​, ದ್ವಾರ ಬಾಗಿಲು, ಕನ್ನಡ ರಥ ಹಾಗೂ ಅಧ್ಯಕ್ಷರ ಮೆರವಣಿಗೆ ಸಾರೋಟುಗಳನ್ನ ಅಚ್ಚುಕಟ್ಟಾಗಿ ಮಾಡಿ ಸಮ್ಮೇಳನ ಯಶಸ್ವಿಯಾಗಲು ಹಗಲು ರಾತ್ರಿ ಶ್ರಮಿಸಿದ್ದರು. ಆದರೆ ಅವರ ಸಂಭಾವನೆ ಇನ್ನೂ ಪಾವತಿಯಾಗಿಲ್ಲ. ಡಿಸಿ ಆಫೀಸ್​ನಲ್ಲಿ ಎಲ್ಲರೂ ಸೇರಿ ನಿಗದಿಪಡಿಸಿದ ಸಂಭಾವನೆ ಪಾವತಿಯಾಗದೆ ಇದ್ದಿದ್ದಕ್ಕೆ ಇವತ್ತು ಕಲಾವಿದರು ಡಿಸಿ ಆಫೀಸ್​ ಬಾಗಿಲಿಗೆ, ಸಾಹಿತ್ಯ ಪರಿಷತ್​ ಬಾಗಿಲಿಗೆ ಅಲೆದಾಡುವಂತಾಗಿದೆ' ಎಂದಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದ ರಥ (ETV Bharat)

ಅಂದಾಜು 30 ಲಕ್ಷ ಹಣ ಬಾಕಿ : ಈ ಬಗ್ಗೆ ಸಾಹಿತಿ ಮಾಲತೇಶ ಅಂಗೂರು ಅವರು ಮಾತನಾಡಿ, 'ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕಲಾವಿದರು, ತಂತ್ರಜ್ಞರು, ಸಾಹಿತಿಗಳು ಎಲ್ಲರೂ ಕಾರಣರು. ಆದರೆ ಕನ್ನಡ ರಥ ತಯಾರಕರಿಗೆ ಅಂದಾಜು 30 ಲಕ್ಷ ಹಣವನ್ನು ಈವರೆಗೆ ಕೊಡದೇ ಇರುವುದು ವಿಪರ್ಯಾಸದ ಸಂಗತಿ. ಹೀಗಾಗಿ ಕಲೆ, ಸಂಸ್ಕೃತಿಯ ಚಿಂತಕರಾಗಿರುವ ಸಿಎಂ ಸಿದ್ದರಾಮಯ್ಯನವರು ಕಲಾವಿದರಿಗೆ ಬರಬೇಕಾದ ಹಣವನ್ನು ಕೊಡುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಂಡು ಮುಂದಿನ ಮಂಡ್ಯ ಸಾಹಿತ್ಯ ಸಮ್ಮೇಳನದ ಒಳಗೆ ಸಂದಾಯ ಮಾಡಬೇಕೆಂದು' ಮನವಿ ಮಾಡಿದ್ದಾರೆ.

ಇದನ್ನೂ ಓದಿ :ಹಾವೇರಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಲಾವಿದರಿಗೆ ಇನ್ನೂ ಸಿಕ್ಕಿಲ್ಲ ಗೌರವಧನ.. ಸ್ಮರಣ ಸಂಚಿಕೆ ಮರೀಚಿಕೆ

ABOUT THE AUTHOR

...view details