ಕರ್ನಾಟಕ

karnataka

By ETV Bharat Karnataka Team

Published : 6 hours ago

ETV Bharat / state

'ಸಿಎಂ ಪತ್ನಿ ಮುಗ್ಧೆ': ಮುಡಾ ಸೈಟ್‌ ವಾಪಸ್‌ ನಿರ್ಧಾರ ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕರು - MUDA Scam

ಮುಡಾ ನಿವೇಶನ ವಾಪಸ್ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ನಿರ್ಧಾರವನ್ನು ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಸಮರ್ಥಿಸಿಕೊಂಡಿದ್ದಾರೆ.

MUDA SCAM
ಮುಡಾ ಸೈಟ್‌ ವಾಪಸ್‌ ನಿರ್ಧಾರ ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕರು (ETV Bharat)

ಚಾಮರಾಜನಗರ/ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಮುಡಾಗೆ ಪತ್ರ ಬರೆದಿದ್ದನ್ನು ಚಾಮರಾಜನಗರ ಶಾಸಕ ಹಾಗೂ ಎಂ.ಎಸ್.ಐ.ಎಲ್ ನಿಗಮದ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಸಮರ್ಥಿಸಿಕೊಂಡಿದ್ದಾರೆ.

'ಜಾಗ ಬಳುವಳಿಯಾಗಿ ಬಂದಿದೆ': ಚಾಮರಾಜನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ, "ಸಿಎಂ ಅವರ ಪತ್ನಿ ಮುಗ್ಧೆ. ನಾನೇ ಇದುವರೆಗೂ ಅವರನ್ನು ಕಾಣಲು ಆಗಿಲ್ಲ. ಅವರಿಗೆ ನಿವೇಶನ ಪ್ರಾಮಾಣಿಕವಾಗಿ ಬಂದಿದೆ. ಹಿಂದೂಗಳಲ್ಲಿ ಅರಿಶಿಣ, ಕುಂಕುಮ ಕೊಡುವ ಸಂಪ್ರದಾಯವಿದೆ. ಅದರಂತೆ ಜಾಗ ಬಳುವಳಿಯಾಗಿ ಬಂದಿದೆ" ಎಂದರು.

ಇ.ಡಿ.ಯಲ್ಲಿ ಸಿಎಂ ವಿರುದ್ದ ಪ್ರಕರಣ ದಾಖಲಾಗಿರುವ ಬಗ್ಗೆ ಮಾತನಾಡಿ, "ಇ.ಡಿ.ಯವರು ಮಾಡಬಾರದನ್ನು ಮಾಡೋಕೆ ಆಗುತ್ತಾ? ವಾಪಸ್ ಕೊಟ್ಟ ಮೇಲೆ ಪ್ರಕರಣ ಮುಗಿದು ಹೋಯ್ತಲ್ಲಾ? ಆದರೆ, ಬಿಜೆಪಿಯವರು ರಾಜಕಾರಣವನ್ನು ಕಲುಷಿತಗೊಳಿಸಿದ್ದಾರೆ. ಇ.ಡಿ.ಎಂಟ್ರಿಯಾದ್ರೆ ಏನ್ ಮಾಡೋಕೆ ಆಗುತ್ತೆ" ಎಂದು ಪ್ರಶ್ನಿಸಿದರು.

'ಇಲ್ಲಿ ಯಾರೂ ಶುದ್ಧವಾಗಿಲ್ಲ': "ಸರ್ಕಾರ ಕೆಡವಲು ಒಂದೂವರೆ ಸಾವಿರ ಕೋಟಿ ರೂಪಾಯಿ ರೆಡಿ ಇದೆ ಎಂದು ಅವರ ಪಕ್ಷದ ಶಾಸಕರಾದ ಯತ್ನಾಳ್ ಹೇಳ್ತಾರೆ. ಯತ್ನಾಳರನ್ನು ಯಾರು, ಯಾಕೆ ಪ್ರಶ್ನೆ ಮಾಡಲ್ಲ? ಭ್ರಷ್ಟತನ ಬರೀ ಬಿಜೆಪಿಯಲ್ಲಿದೆ. ಕುಮಾರಸ್ವಾಮಿ ಆಗ್ಲೀ ಯಾರೇ ಆಗ್ಲೀ, ಇಲ್ಲಿ ಯಾರೂ ಶುದ್ಧವಾಗಿಲ್ಲ. ಎಲ್ರೂ ಮಾಡ ಬಾರದ್ದನ್ನು ಮಾಡಿರೋರೇ" ಎಂದು ಮೈತ್ರಿ ಪಾಳಯದ ವಿರುದ್ಧ ಹರಿಹಾಯ್ದರು.

'ಪಾರ್ವತಿಯವರು ಸಾಧ್ವಿ ಮಹಿಳೆ': ಮುಡಾ ಸೈಟ್ ವಾಪಸ್ ವಿಚಾರವಾಗಿ ಬೆಂಗಳೂರಲ್ಲಿ ಮಾತನಾಡಿದ ಸಚಿವ ಹೆಚ್.ಸಿ.ಮಹದೇವಪ್ಪ, "ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ಸಾಧ್ವಿ ಮಹಿಳೆ. ಇದನ್ನೆಲ್ಲ ನೋಡಿ‌ ಅವರ ಮನಸ್ಸಿಗೆ ಘಾಸಿಯಾಗಿರಬಹುದು" ಎಂದು ತಿಳಿಸಿದರು.

ಈ ಕುರಿತು ವಿಧಾನಸೌಧದಲ್ಲಿ ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಿದ್ದರಾಮಯ್ಯ ಯಾಕೆ ರಾಜೀನಾಮೆ ಕೊಡಬೇಕು?. ಇವರ ಕಡೆಯವರು (ಬಿಜೆಪಿ) ಎಷ್ಟು ಜನ ರಾಜೀನಾಮೆ ಕೊಟ್ಟಿದ್ದಾರೆ? ಎಷ್ಟು ಜನ ಕೇಂದ್ರದಲ್ಲಿ ಮಂತ್ರಿಗಳಿದ್ದಾರೆ? ಅಪರಾಧ ಪ್ರಕರಣಗಳಲ್ಲಿ ಇದ್ದವರು ಕೇಂದ್ರ ಮಂತ್ರಿ ಮಂಡಲದಲ್ಲಿದ್ದಾರೆ. ಅಂಥವರ ರಾಜೀನಾಮೆ ಕೇಳುತ್ತಿಲ್ಲ, ಸಿಎಂ ರಾಜೀನಾಮೆ ಕೇಳ್ತಿದ್ದಾರೆ" ಎಂದು ಕಿಡಿಕಾರಿದರು.

"ನನ್ನಿಂದ ಪತಿಗೆ ತೂಂದರೆ ಆಗಬಾರೆಂದು ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರು ಪತ್ರ ಬರೆದಿದ್ದಾರಷ್ಟೇ. ಪತ್ರ ಬರೆದಾಕ್ಷಣ ಅವರು ತಪ್ಪು ಮಾಡಿದ್ದರೆಂದು ಅಲ್ಲ" ಎಂದು ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಇದನ್ನೂ ಓದಿ:ಮುಡಾ ಸೈಟ್‌ ವಾಪಸ್‌: ರಾಜಕೀಯ ತೇಜೋವಧೆ ಮನಗಂಡು ಪತ್ನಿಯಿಂದ ಸ್ವತಂತ್ರ ತೀರ್ಮಾನ- ಸಿಎಂ - CM Siddaramaiah

ABOUT THE AUTHOR

...view details