ಕರ್ನಾಟಕ

karnataka

ETV Bharat / state

ಮುಡಾ ಪ್ರಕರಣ: ಬೆಂಗಳೂರು, ಮೈಸೂರು ಸೇರಿ 9 ಕಡೆ ಇಡಿ ಅಧಿಕಾರಿಗಳಿಂದ ದಾಳಿ, ದಾಖಲೆ ಪರಿಶೀಲನೆ

ಮುಡಾ ನಿವೇಶನ ಹಂಚಿಕೆಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಹಾಗೂ ಮೈಸೂರಿನ 9 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

MUDA CASE  ED RAID OVER MUDA CASE  MUDA CASE DETAILS  MYSURU
ಬೆಂಗಳೂರು, ಮೈಸೂರು ಸೇರಿ 9 ಕಡೆ ಇಡಿ ಅಧಿಕಾರಿಗಳು ದಾಳಿ, ದಾಖಲೆ ಪರಿಶೀಲನೆ (ETV Bharat)

By ETV Bharat Karnataka Team

Published : 4 hours ago

ಬೆಂಗಳೂರು/ಮೈಸೂರು: ಮುಡಾ ನಿವೇಶನ ಹಂಚಿಕೆಯಲ್ಲಿನ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಮೈಸೂರು ಹಾಗೂ ಬೆಂಗಳೂರಿನ 9ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪ್ರಕರಣದ ಬಗ್ಗೆ ಒಂದು ಕಡೆ ಲೋಕಾಯುಕ್ತ ತನಿಖೆ ನಡೆಸುತ್ತಿದ್ರೆ, ಮತ್ತೊಂದು ಕಡೆ ಇಡಿ ಸಹಾ ಕೇಸ್​ ದಾಖಲಿಸಿಕೊಂಡು ತನಿಖೆ ಮುಂದುವರಿಸಿದೆ. ಈಗಾಗಲೇ ಕಳೆದ ಶುಕ್ರವಾರ ಹಾಗೂ ಶನಿವಾರ ಸುಮಾರು 29 ಗಂಟೆಗಳ ಕಾಲ ಮುಡಾದಲ್ಲಿ ದಾಖಲೆಗಳನ್ನ ಪರಿಶೀಲನೆ ನಡೆಸಿ, ಕೆಲವು ಮಹತ್ವದ ದಾಖಲೆಗಳನ್ನು ಇಡಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು.

ಈ ಮಧ್ಯ ಮುಡಾದಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಿರುವ ಇಡಿ ಅಧಿಕಾರಿಗಳು 50:50 ರ ಅನುಪಾತ ಹಾಗೂ ಇತರೆ ನಿವೇಶನಗಳ ಮಾರಾಟದ ಸಂಬಂಧ ಮಹತ್ವದ ದಾಖಲೆಗಳು ಹಾಗೂ ಹಣಕಾಸು, ವಹಿವಾಟಿನ ಬಗ್ಗೆ ಮಾಹಿತಿ ಪಡೆದಿತ್ತು. ಇಡಿ ಅಧಿಕಾರಿಗಳು ಇಂದು ಬೆಂಗಳೂರು, ಮೈಸೂರಿನಲ್ಲಿ ಬಿಲ್ಡರ್ಸ್​​ ಹಾಗೂ ಮಾಜಿ ಮುಡಾ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಇಡಿ ದಾಳಿ: ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಓರ್ವ ಬಿಲ್ಡರ್​ ನಿವಾಸ, ಜೆ.ಪಿ. ನಗರ, ಸದಾಶಿವನಗರ ಸೇರಿದಂತೆ ಕೆಲವೆಡೆ ದಾಳಿ ನಡೆಸಿದ್ದು, ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 18ರಂದು ಮೈಸೂರಿನ ಮುಡಾ ಕಚೇರಿ ಸೇರಿದಂತೆ ವಿವಿಧೆಡೆ ಶೋಧ ನಡೆಸಿದ್ದ ಇಡಿ ಅಧಿಕಾರಿಗಳು ಕೆಲ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೆ ಮುಡಾದ ಆರು ಜನ ಅಧಿಕಾರಿಗಳನ್ನ ಶನಿವಾರ ಬೆಂಗಳೂರಿನ ಇಡಿ ಕಚೇರಿಯಲ್ಲಿ ವಿಚಾರಣೆಗೊಳಪಡಿಸಿದ್ದರು. ಮುಂದುವರೆದ ಭಾಗವಾಗಿ ಇಂದು ಎರಡನೇ ಹಂತದ ದಾಳಿ ನಡೆದಿದೆ.

ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಹೈಕೋರ್ಟ್​ನಲ್ಲಿ ಇಂದು ಆರೋಪಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ

ABOUT THE AUTHOR

...view details