ಕರ್ನಾಟಕ

karnataka

ಭ್ರಷ್ಟಾಚಾರ ಆರೋಪ ಹಿಂಪಡೆಯಿರಿ, ಇಲ್ಲವೇ ಕೇಸ್​ ಸಿಬಿಐ ತನಿಖೆಗೆ ನೀಡಿ: ಸಿಎಂಗೆ ಸಂಸದ ಕೋಟಾ ಸವಾಲು - MP kota fire on cm

By ETV Bharat Karnataka Team

Published : Jul 20, 2024, 10:04 PM IST

ಸಿಎಂ ಸಿದ್ದರಾಮಯ್ಯ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆದ ಹಗರಣಗಳನ್ನು ತನಿಖೆಗೆ ನೀಡಿದ್ದಾರೆ. ಇದರಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸ್​ ಪೂಜಾರಿ ಅವರ ಮೇಲೂ ಆರೋಪ ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ಸಂಸದ ಪೂಜಾರಿ ಸಿಎಂಗೆ ಪತ್ರ ಬರೆದಿದ್ದಾರೆ.

ಸಿಎಂಗೆ ಸಂಸದ ಕೋಟಾ ಸವಾಲು
ಸಿಎಂಗೆ ಸಂಸದ ಕೋಟಾ ಸವಾಲು (ETV Bharat)

ಬೆಂಗಳೂರು:ವಾಲ್ಮೀಕಿ ನಿಗಮ ಹಗರಣವು ವಿಧಾನಮಂಡಲ ಅಧಿವೇಶನದಲ್ಲಿ ಭಾರೀ ಗದ್ದಲ ಎಬ್ಬಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿಗರ ಆರೋಪಕ್ಕೆ ಪ್ರತಿಯಾಗಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಆದ ಹಗರಣಗಳ ಪಟ್ಟಿಯನ್ನು ನೀಡಿದ್ದಾರೆ. ಅದರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದು, ಆ ಇಲಾಖೆಯ ಮಾಜಿ ಸಚಿವರಾಗಿದ್ದ ಹಾಲಿ ಸಂಸದ ಕೋಟಾ ಶ್ರೀನಿವಾಸ್​ ಪೂಜಾರಿ​ ಅವರ ಅಸಮಾಧಾನಕ್ಕೆ ಗುರಿಯಾಗಿದೆ.

ಈ ಬಗ್ಗೆ ಸಿಎಂಗೆ ಪತ್ರ ಬರೆದಿರುವ ಅವರು, ತಮ್ಮ ಮೇಲೆ ಮಾಡಿರುವ ಭ್ರಷ್ಟಾಚಾರದ ಆರೋಪಗಳನ್ನು ಸುಳ್ಳು ಎಂದು ಹೇಳಿ ಹಿಂಪಡೆಯಬೇಕು. ಇಲ್ಲವಾದಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಸವಾಲು ಹಾಕಿದ್ದಾರೆ.

ಪತ್ರದ ಸಾರಾಂಶ ಹೀಗಿದೆ:ಸಿಎಂಸಿದ್ದರಾಮಯ್ಯ ಅವರೇ, ಜುಲೈ 19 ರಂದು ವಿಧಾನಮಂಡಲ ಅಧಿವೇಶನದಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವರ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದೀರಿ. ಇಲಾಖೆಯ ಕೊಳವೆ ಬಾವಿ ಟೆಂಡರ್ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ ಎಂದು ದೂರಿದ್ದೀರಿ. ಈ ಬಗ್ಗೆ ನಿಮ್ಮ ಸಂಪುಟದ ಈಗಿನ ಸಚಿವ ಪ್ರಿಯಾಂಕ್ ಖರ್ಗೆ ಅಂದು ಸದನದಲ್ಲಿ ಪ್ರಸ್ತಾಪಿಸಿದಾಗ ಪ್ರಕರಣವನ್ನು ಸಿಐಡಿ ತನಿಖೆಗೆ ನಾನೇ ಶಿಫಾರಸ್ಸು ಮಾಡಿದ್ದೆ. ಅದು ಸರ್ಕಾರದ ಕಡತದಲ್ಲಿದೆ.

ನಾನು ಅಧಿಕಾರ ಸ್ವೀಕರಿಸುವ ಮೊದಲು ಕೊಳವೆ ಬಾವಿ, ಡ್ರಿಲ್ಲಿಂಗ್ ಮತ್ತು ಪಂಪ್ ಖರೀದಿ ಟೆಂಡರ್ ಪ್ರಕ್ರಿಯೆ ನಡೆದಿತ್ತು. ಟೆಂಡರ್‌ನಲ್ಲಿನ ಗೊಂದಲ ಮತ್ತು ಸಮಸ್ಯೆಗಳನ್ನು ನಿವಾರಿಸಲು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊಳವೆ ಬಾವಿ ಫಲಾನುಭವಿ ರೈತರ ಖಾತೆಗೆ ನೇರ ಹಣ ವರ್ಗಾವಣೆ(ಡಿಬಿಟಿ) ಯೋಜನೆ ಜಾರಿ ಮಾಡಿದ್ದೆ. ಟೆಂಡರ್ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲದೆ ರೈತರು ಏಜೆನ್ಸಿ ಮೂಲಕ ಕೊಳವೆ ಬಾವಿ ಕೊರೆಸಿಕೊಂಡರೂ, ಅವರ ಖಾತೆಗೆ ನೇರ ಹಣ ಹಾಕುವ ಯೋಜನೆ ಇದಾಗಿತ್ತು. ಇದನ್ನು ಜಾರಿ ಮಾಡಿದ್ದು ನಾನು ಎಂಬುದು ನಿಮಗೂ ತಿಳಿದಿದೆ. ಈಗ ವಾಲ್ಮೀಕಿ ನಿಗಮದ ಹಗರಣದಲ್ಲಿ ತಮ್ಮ ಸರ್ಕಾರಕ್ಕೆ ಎದುರಾದ ಸಮಸ್ಯೆಯನ್ನು ವಿರೋಧ ಪಕ್ಷದ ಮೇಲೆ ಹೊರಿಸಲು ಈ ಆರೋಪ ಮಾಡಿದ್ದೀರಿ ಎಂದು ಟೀಕಿಸಿದ್ದಾರೆ.

ಅಂದು ಯಾಕೆ ಆರೋಪ ಮಾಡಿಲ್ಲ:ಭೋವಿ ನಿಗಮದ ಭ್ರಷ್ಟಾಚಾರದಲ್ಲೂ ನನ್ನ ಹೆಸರನ್ನು ಉಲ್ಲೇಖಿಸಿದ್ದೀರಿ. ನಾನು ಸಚಿವನಾದ ಬಳಿಕ ಭೋವಿ ನಿಗಮದ ಅಧಿಕಾರಿಗಳಿಬ್ಬರು ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಭಿತ್ತರವಾದ ಬಳಿಕ ಅವರನ್ನು ಅಮಾನತಿನಲ್ಲಿಟ್ಟು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದೆ. ಆ ಸಂದರ್ಭ ನೀವೇ ಪ್ರತಿಪಕ್ಷದ ನಾಯಕರಾಗಿದ್ದರೂ, ಈ ಬಗ್ಗೆ ಚಕಾರ ಎತ್ತಿರಲಿಲ್ಲ. ಮೂರೂವರೆ ವರ್ಷಗಳ ವಿಪಕ್ಷ ನಾಯಕನ ಜವಾಬ್ದಾರಿ ವಹಿಸಿದ್ದ ತಾವು ಒಂದೇ ಒಂದು ಬಾರಿ ನನ್ನ ಇಲಾಖೆ ಅಥವಾ ನನ್ನ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ನನ್ನ ಅವಧಿಯಲ್ಲಿ ಸಿಐಡಿಗೆ ವಹಿಸಿದ ಪ್ರಕರಣಗಳು ತನಿಖೆಯಲ್ಲಿವೆ ಎಂದಿದ್ದಾರೆ.

ಹಾಗೊಂದು ವೇಳೆ ಭ್ರಷ್ಟಾಚಾರ ನಡೆದಿದೆ ಎಂದಾದಲ್ಲಿ ನಿಮ್ಮ ಸರ್ಕಾರ ಅಧಿಕಾರಕ್ಕೆ ಒಂದು ವರ್ಷವಾಗುತ್ತಿದೆ. ಇಲಾಖೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ನನ್ನ ಮೇಲೆ ಕ್ರಮ ಜರುಗಿಸಬಹುದಿತ್ತಲ್ಲ. ಅದು ಬಿಟ್ಟು ಇದೀಗ ಆರೋಪಕ್ಕಾಗಿ - ಆರೋಪ ಎಂಬ ಮಾದರಿಯಲ್ಲಿ ನನ್ನ ಮೇಲೆ ಭ್ರಷ್ಟಾಚಾರದ ಗೂಬೆ ಕೂರಿಸಿದ್ದು, ನೋವುಂಟು ಮಾಡಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ನೀವು ಮಾಡಿದ ಆರೋಪಗಳು ನಿಜವಾದಲ್ಲಿ ಪ್ರಕರಣವನ್ನು ಈಗಲೇ ಸಿಬಿಐಗೆ ನೀಡಿ, ಇಲ್ಲವಾದಲ್ಲಿ ನನ್ನ ಮೇಲಿನ ಹೇಳಿಕೆಯನ್ನು ವಾಪಸ್​ ಪಡೆಯಿರಿ. ಇಲ್ಲವಾದಲ್ಲಿ ವಿಧಾನಸೌಧದ ಆವರಣದಲ್ಲಿರುವ ರಾಷ್ಟ್ರಪಿತ ಗಾಂಧೀಜಿ ಪ್ರತಿಮೆ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ನಾವು ಯಾವುದೇ ಬೆದರಿಕೆಯೊಡ್ಡಿಲ್ಲ, ಸತ್ಯಾಂಶ ಜನರ ಮುಂದಿಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ - CM Siddaramaiah

ABOUT THE AUTHOR

...view details