ತುಮಕೂರು: ನಗರದಲ್ಲಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈ ಮೂಲದ ಭರತ್ (40) ಮತ್ತು ಜಮಾಲುದೀನ್ (38) ಬಂಧಿತ ಆರೋಪಿಗಳು.
ಬಂಧಿತರಿಂದ 6 ಲಕ್ಷ 70 ಸಾವಿರ ರೂಪಾಯಿ ಮೌಲ್ಯದ 113 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದು, ಈ ಮೂಲಕ ಎರಡು ಪ್ರತ್ಯೇಕ ಸರಗಳ್ಳತನ ಪ್ರಕರಣಗಳನ್ನ ಪತ್ತೆ ಹಚ್ಚಲಾಗಿದೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆ ಮತ್ತು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಸರಗಳ್ಳತನ ಪ್ರಕರಣಗಳಲ್ಲಿ ಈ ಬಂಧಿತರು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ವಾಕಿಂಗ್ ಮಾಡುವ ಮಹಿಳೆಯರೇ ಟಾರ್ಗೆಟ್: ಆರೋಪಿಗಳು ಬೈಕ್ನಲ್ಲಿ ಸಂಚರಿಸುತ್ತಾ ವಾಕಿಂಗ್ ಮಾಡುವ ಒಂಟಿ ಮಹಿಳೆಯರನ್ನ ಗುರಿಯಾಗಿಸಿಕೊಂಡು ಹಿಂಬಾಲಿಸುತ್ತಿದ್ದರು. ಸೂಕ್ತ ಅವಕಾಶ ಕಂಡ ಕೂಡಲೇ ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು.
ಈ ಖದೀಮರು ತುಮಕೂರಿನ ವಾಲ್ಮೀಕಿ ನಗರದಲ್ಲಿ ವಸಂತಮ್ಮ ಎಂಬ ಮಹಿಳೆಯ ಸುಮಾರು 70 ಗ್ರಾಂ ತೂಕದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ವಸಂತಮ್ಮ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಕಳ್ಳರಿಂದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಬಾರ್ನಲ್ಲಿ ಕುಡಿದ ಮತ್ತಿನಲ್ಲಿ ಮಾರಾಮಾರಿ: ಆಸ್ಪತ್ರೆಗೆ ದಾಖಲು: ಇಲ್ಲಿನ ಬಾರ್ವೊಂದರಲ್ಲಿ ಕುಡಿತದ ಮತ್ತಿನಲ್ಲಿ ಇಬ್ಬರ ನಡುವೆ ಭಾರೀ ಗಲಾಟೆ ಸಂಭವಿಸಿ ಮಾರಾಮಾರಿ ಉಂಟಾಗಿದೆ. ಅಂತರಸನಹಳ್ಳಿಯ ರೌಡಿಶೀಟರ್ ಭರತ್ ಹಾಗೂ ಧನುಷ್ ಒಟ್ಟಿಗೆ ಕುಡಿದು ಬಳಿಕ ನಶೆಯಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಗಲಾಟೆ ವೇಳೆ ಭರತ್ ತನ್ನ ಕೈಯಲ್ಲಿದ್ದ ಮದ್ಯದ ಬಾಟಲಿನಿಂದ ಹೊಡೆದಿದ್ದರಿಂದ ಧನುಷ್ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದೆ.
ಇನ್ನು ಧನುಷ್ ಕೂಡ ಹಾಲೋ ಬ್ರಿಕ್ಸ್ ಎತ್ತಿ ಹಾಕಿದ್ದರಿಂದ ಭರತ್ ತಲೆಗೆ ತೀವ್ರ ಗಾಯವಾಗಿದೆ. ಹೊಡೆದಾಟದಲ್ಲಿ ಇಬ್ಬರೂ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ನಟೋರಿಯಸ್ ರೌಡಿಶೀಟರ್ ರೋಹಿತ್ ಗ್ಯಾಂಗ್ನ ಸದಸ್ಯರಾಗಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳುಗಳ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ಮಾರಾಮಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಐವರ ಬಂಧನ