ಕರ್ನಾಟಕ

karnataka

ETV Bharat / state

ರಾಯಚೂರು: ರೈತರ ಮೇಲೆ ದಾಳಿ ಮಾಡಿದ ಚಿರತೆ ಹೊಡೆದು ಕೊಂದ ಜನರು - Mob Kills Leopard - MOB KILLS LEOPARD

ರೈತರ ಮೇಲೆರಗಿ ಗಾಯಗೊಳಿಸಿದ್ದ ಚಿರತೆಯನ್ನು ರೊಚ್ಚಿಗೆದ್ದ ಜನರು ಹೊಡೆದು ಕೊಂದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

leopard
ಚಿರತೆಯನ್ನು ಹೊಡೆದು ಕೊಂದ ಜನರು (ETV Bharat)

By ETV Bharat Karnataka Team

Published : Jul 7, 2024, 8:24 PM IST

ಚಿರತೆ ಹೊಡೆದು ಕೊಂದ ಜನರು (ETV Bharat)

ರಾಯಚೂರು: ರೈತರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಜನರೇ ಹೊಡೆದು ಕೊಂದಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ನಡೆದಿದೆ. ದೇವದುರ್ಗದ ಕಂಬದಾಳ ಗ್ರಾಮದ ಹೊರವಲಯದ ಗುಡ್ಡದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಮೂವರು ರೈತರ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತ್ತು.

ಘಟನೆ ಬೆನ್ನಲ್ಲೇ ಗ್ರಾಮಸ್ಥರು ಭಯಭೀತರಾಗಿದ್ದು, ಚಿರತೆಗಾಗಿ ಹುಡುಕಾಟ ನಡೆಸಿದ್ದರು. ಕೆಲ ಗಂಟೆಗಳಲ್ಲೇ ಸಾವಿರಾರು ಜನರು ಬೆಟ್ಟದಲ್ಲಿ ಚಿರತೆಯನ್ನು ಪತ್ತೆ ಹಚ್ಚಿದ್ದು, ಈ ವೇಳೆ ಹಲ್ಲೆ ನಡೆಸಿ ಕೊಂದಿದ್ದಾರೆ. ನಂತರ ಮೃತ ಚಿರತೆಯನ್ನು ಗುಡ್ಡದ ಕಲ್ಲು ಬಂಡೆಗಳ ಮಧ್ಯದಿಂದ ಹಿಡಿದು ಹೊರ ತಂದಿರುವ ದೃಶ್ಯಗಳು ಮೊಬೈಲ್​ಗಳಲ್ಲಿ ಸೆರೆಯಾಗಿದೆ.

ಮೃತ ಗಂಡು ಚಿರತೆಯನ್ನು ಮರಣೋತ್ತರ ಪರೀಕ್ಷೆಗಾಗಿ ದೇವದುರ್ಗದ ಪಶು ಆಸ್ಪತ್ರೆಗೆ ರವಾನಿಸಲಾಗಿದೆ. ದೇವದುರ್ಗ ಅರಣ್ಯ ಇಲಾಖೆ ಪ್ರದೇಶ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಘಟನೆ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಅರಣ್ಯ ಇಲಾಖೆಯ ಡಿಎಫ್​ಒ ಪ್ರವೀಣ್​, ''ದೇವದುರ್ಗ ತಾಲೂಕಿನ ಕಂಬದಾಳ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ವಿಷಯ ತಿಳಿದ ತಕ್ಷಣ ನಮ್ಮ ತಾಲೂಕು ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಬಳಿಕ ಚಿರತೆಯನ್ನು ಸೆರೆ ಹಿಡಿಯುವುದಕ್ಕೆ ಅಗತ್ಯ ತಯಾರಿ ನಡೆಸಲಾಗಿತ್ತು. ವಿಜಯನಗರ ಜಿಲ್ಲೆಯಿಂದ ಚಿರತೆ ಸೆರೆ ಹಿಡಿಯಲು ವಿಶೇಷ ತಂಡ ಆಗಮಿಸುತ್ತಿತ್ತು. ಆದರೆ ಚಿರತೆ ಹುಡುಕಾಟದ ವೇಳೆ ಉದ್ರಿಕ್ತಗೊಂಡ ಜನರನ್ನು ನಿಯಂತ್ರಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಜನ ಸಮೂಹವೇ ಚಿರತೆಯನ್ನು ಕೊಂದು ಹಾಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಚಿರತೆಯನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಸಿಕ್ಕಿರುವ ವಿಡಿಯೋ ತುಣುಕುಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು'' ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ರಾಯಚೂರು: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ಚಿರತೆ ದಾಳಿ - Leopard Attack

ABOUT THE AUTHOR

...view details