ಕರ್ನಾಟಕ

karnataka

ETV Bharat / state

ಶ್ರೀರಾಮುಲು ವಿರುದ್ಧ ಛಾಡಿ ಹೇಳಿಲ್ಲ, ಅವರು ಶತ್ರುಗಳ ಜೊತೆ ಕೈ ಜೋಡಿಸಿರುವುದು ವಿಪರ್ಯಾಸ: ಜನಾರ್ದನ ರೆಡ್ಡಿ - MLA JANARDHANA REDDY

ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ದ ಹೈಕಮಾಂಡ್​ಗೆ ಹೇಳುವಂತಹ ಕೀಳು ವ್ಯಕ್ತಿ ನಾನಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.

mla-janardhana-reddy
ಶಾಸಕ ಜನಾರ್ಧನ ರೆಡ್ಡಿ (ETV Bharat)

By ETV Bharat Karnataka Team

Published : Jan 23, 2025, 3:14 PM IST

Updated : Jan 23, 2025, 5:05 PM IST

ಬೆಂಗಳೂರು :ನಾನು ಶ್ರೀರಾಮುಲು ವಿರುದ್ದ ಯಾವುದೇ ಛಾಡಿ ಹೇಳಿಲ್ಲ. ಅವರು ಶತ್ರುಗಳ ಜೊತೆ ಕೈ ಜೋಡಿಸಿರುವುದು ವಿಪರ್ಯಾಸ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಅದರ ಬಗ್ಗೆ ಸ್ಪಷ್ಟನೆ ಕೊಡುವುದಕ್ಕೆ ಬಂದಿದ್ದೇನೆ. ಮೊದಲಿಗೆ ನಾನು ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿಗೆ ಸೇರಿದ್ದೇನೆ. ನನ್ನ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನ ಮಾಡಿದ್ದೇನೆ. 18 ಕ್ಷೇತ್ರದಲ್ಲಿ ಓಡಾಟ ಮಾಡಿದ್ದೇನೆ. ಬಳ್ಳಾರಿ ಬಿಟ್ಟು ಬೇರೆ ಕಡೆಗಳಲ್ಲಿ ಓಡಾಟ ಮಾಡಿದ್ದೇನೆ. ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಅಂತ ಹೇಳಿದ್ದೇನೆ ಎಂದರು.

ಬಳ್ಳಾರಿಗೆ ಹೋಗಲು ಆಗುತ್ತಿರಲಿಲ್ಲ. ಅದಾದ ಮೇಲೆ ನನಗೆ ಸುಪ್ರೀಂಕೋರ್ಟ್ ಅನುಮತಿ ಕೊಟ್ಟಿತು‌. ಸಂಡೂರು ಎಸ್‌ಟಿ ಮೀಸಲು ಕ್ಷೇತ್ರ. ನಾನು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ರಾಮುಲು ಅವರು ಮೂರು ದಿನ ತಡವಾಗಿ ಸಂಡೂರು ಕ್ಷೇತ್ರಕ್ಕೆ ಬಂದ್ರು. ಅವರೊಟ್ಟಿಗೆ ನಾನು ಕೆಲಸ ಮಾಡಿದ್ದೇನೆ. ಸಿಎಂ ಆದಿಯಾಗಿ ಸರ್ಕಾರವೇ ಬಂದು ಕುಳಿತಿತ್ತು. ಹಣದ ಹೊಳೆ ಹರಿಸಿದ್ರು, ಹೀಗಾಗಿ, ನಮಗೆ ಸೋಲಾಯಿತು. ನಾನು ಛಾಡಿ ಹೇಳುವ ಕೆಳಮಟ್ಟಕ್ಕೆ ಹೋಗುವುದಿಲ್ಲ‌. ಅವರಿಗೆ ಅಭದ್ರತೆ ಕಾಡುತ್ತಿರಬೇಕು ಎಂದು ದೂರಿದರು.

ಶಾಸಕ ಜನಾರ್ದನ ರೆಡ್ಡಿ ಅವರು ಮಾತನಾಡಿದರು (ETV Bharat)

ಹನುಮಂತುಗೆ ನಾನು ಟಿಕೆಟ್​ ಕೊಡಿಸಲಿಲ್ಲ:ಸಂಡೂರು ವಿಧಾನಸಭಾ ಕ್ಷೇತ್ರದ ಉಪ -ಚುನಾವಣೆಯಲ್ಲಿ ಬಂಗಾರು ಹನುಮಂತುಗೆ ನಾನು ಟಿಕೆಟ್ ಕೊಡಿಸಲಿಲ್ಲ. ರಾಮುಲು ಅವರು ಈ ರೀತಿ ಮಾತನಾಡಿದ್ದಕ್ಕೆ ಸಾಕಷ್ಟು ಕಾರಣಗಳಿದೆ. ರಾಮುಲುಗೆ ಜನರ ಬೆಂಬಲ ಸಂಪೂರ್ಣವಾಗಿ ಕಳೆದು ಹೋಗಿದೆ. ರಾಮುಲು ಅವರಿಗೆ ನನ್ನ ಬಗ್ಗೆ ಗೊತ್ತು. ಅವರು ಬಳ್ಳಾರಿಯಲ್ಲಿ ಸೋತಿದ್ದಾರೆ ಅಂದರೆ, ಅವರೇ ಆತ್ಮ ವಿಮರ್ಶೆ ಮಾಡಬೇಕು. ರಾಮುಲು ಅವರ ಬಗ್ಗೆ ನಾನು ಹೈಕಮಾಂಡ್ ನಾಯಕರ ಬಳಿ ಹೇಳುವ ಕೀಳು ವ್ಯಕ್ತಿ ಅಲ್ಲ. ಅವರಿಗೆ ಅಭದ್ರತೆ ಇದೆ. ರಾಮುಲು ಅವರಿಗೆ ಇದೇ ಆಗಿರಬಹುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನೊಬ್ಬ ವಾಲ್ಮೀಕಿ ಸಮುದಾಯದ ನಾಯಕ ಬಂದರೆ ನನ್ನ ರಾಜಕೀಯ ಭವಿಷ್ಯಕ್ಕೆ ಪೆಟ್ಟು ಬೀಳಬಹುದು ಎಂಬ ಆತಂಕ ಇರಬಹುದು. ಅದು ನನಗೆ ಗೊತ್ತಿಲ್ಲ ಎಂದರು.

ಸದಾನಂದಗೌಡರ ನೇತೃತ್ವದಲ್ಲಿ ತಂಡ ಮಾಡಿದ್ದಾರೆ. ಅವರು ವರದಿ ಏನು ಮಾಡಿದ್ದಾರೋ ಗೊತ್ತಿಲ್ಲ. ರಾಮುಲುಗೆ ನಾನು ಒಂದು ವಿಷಯ ಹೇಳುತ್ತೇನೆ. ನನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿ ವಿಶ್ವಾಸ ಇದೆಯೋ ಅಷ್ಟೇ ಪ್ರೀತಿ ವಿಶ್ವಾಸ ರಾಮುಲು ಮೇಲಿದೆ. ನಾನು 14 ವರ್ಷ ಬಳ್ಳಾರಿಗೆ ಹೋಗುವುದಕ್ಕೆ ಆಗಿರಲಿಲ್ಲ. ಆಗ ಬಳ್ಳಾರಿ ಜನರ ವಿಶ್ವಾಸವನ್ನು ಗಳಿಸಬೇಕಾಗಿತ್ತು. ಒಬ್ಬ ರಾಜ್ಯ ಮಟ್ಟದ ನಾಯಕನಿಗೆ ಸ್ವಂತ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗುತ್ತಿಲ್ಲ ಅಂದರೆ ಶ್ರೀರಾಮುಲು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ಜಾರಕಿಹೊಳಿ ಮಣಿಸಲು ಡಿಕೆಶಿ, ಶ್ರೀರಾಮುಲ ಅವರನ್ನ ಕರೆಯುತ್ತಿದ್ದಾರೆ :ನನಗೆ ಸಾಯುವವರೆಗೂ ರಾಮುಲು ಸ್ನೇಹಿತ. ಶ್ರೀರಾಮುಲು ಯಾವತ್ತು ನನಗೆ ಮಿತ್ರನೇ. ಆದರೆ ಶತ್ರುಗಳ ಜೊತೆ ಸೇರಿ ಮಾಡುವುದು ಸರಿಯಲ್ಲ. ಹೇಗಾದರೂ ಮಾಡಿ ಸತೀಶ್ ಜಾರಕಿಹೊಳಿ ಮಣಿಸಲು ಶ್ರೀರಾಮುಲುನನ್ನು ಕಾಂಗ್ರೆಸ್ ಪಕ್ಷಕ್ಕೆ ಡಿ ಕೆ ಶಿವಕುಮಾರ್ ಕರೆಯುತ್ತಿದ್ದಾರೆ. ಸತೀಶ್ ಜಾರಕಿಹೊಳಿಯನ್ನು ಸೋಲಿಸಲು ಯಾರಾದರು ಬೇಕು ಅಂತ ಡಿಕೆಶಿ ಅವರು ಹೇಗಾದರು ಮಾಡಿ ಶ್ರೀರಾಮುಲುರನ್ನು ಪಕ್ಷಕ್ಕೆ ಕರೆಯಲು ಯತ್ನಿಸುತ್ತಿದ್ದಾರೆ. ಪಕ್ಷ ಬಿಡುವುದು ಅವರಿಗೆ ಬಿಟ್ಟ ವಿಚಾರ‌. ಅವರು ಪಕ್ಷ ಬಿಡುವ ಬಗ್ಗೆ ಬಳ್ಳಾರಿಯಲ್ಲಿ ಜನರು ಮಾತನಾಡುತ್ತಿದ್ದಾರೆ. ಆದರೆ ಹೋಗೋದೇ ಆದರೆ ನನ್ನ ಮೇಲೆ ಆರೋಪ ಮಾಡಿ ಹೋಗುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ:ಪಕ್ಷ ಬಿಡೋದು ರಾಮುಲು ವೈಯಕ್ತಿಕ ವಿಚಾರ. ಪಕ್ಷ ಬಿಟ್ಟು ಹೋದ್ರೆ ಹೋಗಲಿ. ಆದ್ರೆ ನನ್ನ ಮೇಲೆ ಆರೋಪ ಮಾಡಿ ಹೋಗೋದು ಸರಿಯಲ್ಲ. ಅವರು ಕಾಂಗ್ರೆಸ್​ಗೆ ಹೋಗ್ತಾರಾ ಇನ್ನೆಲ್ಲಿಗೆ ಹೋಗ್ತಾರೆ ಅವರಿಗೆ ಬಿಟ್ಟಿದ್ದು. ಡಿಕೆಶಿ ಅವರು ಸತೀಶ್ ಜಾರಕಿಹೊಳಿಯವರನ್ನು ಮಣಿಸಲು ರಾಮುಲುನ ಪಕ್ಷಕ್ಕೆ ಹೇಗಾದರೂ ಕರೆದುಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ. ರಾಮುಲುಗೆ ಬಳ್ಳಾರಿಯಲ್ಲಿ ಇರೋ ವಾತಾವರಣ ನೋಡಿಕೊಂಡು ಡಿಕೆಶಿ ಅವರನ್ನು ಕರೆದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಈ ಕುರಿತು ಬಳ್ಳಾರಿ ಭಾಗದಲ್ಲೆಲ್ಲ ಜನ ಮಾತಾಡ್ತಿದ್ದಾರೆ. ಇಡೀ ಬಳ್ಳಾರಿಯಲ್ಲಿ ಇದರ ಬಗ್ಗೆ ದೊಡ್ಡ ಸುದ್ದಿ ಹಬ್ಬಿದೆ ಎಂದು ಇದೇ ವೇಳೆ ತಿಳಿಸಿದರು.

ಅಂದು ಚಾಕು, ಲಾಂಗು ಹಿಡಿದುಕೊಂಡು ಬಂದಿದ್ರು : ಇದೇ ವೇಳೆ ಹಳೆಯ ಘಟನೆಯನ್ನು ಮೆಲುಕು ಹಾಕಿದ ಜನಾರ್ದನ ರೆಡ್ಡಿ, ರಾಮುಲು ಅವರನ್ನು ನಾನು ಬಾಲ್ಯದಿಂದಲೂ ನೋಡಿದ್ದೇನೆ. ರಾಮುಲು ಅವರ ಮಾವ ರೈಲ್ವೇ ಬಾಬು ಅವರನ್ನು ಕೊಲೆ ಮಾಡಲಾಗುತ್ತದೆ. 1991ರಲ್ಲಿ ಆದ ಭೀಕರ ಕೊಲೆ ಅದು. ಆಗ ರಾಜಕೀಯ ಶತ್ರುಗಳ ವಿರುದ್ಧ ಪ್ರತೀಕಾರ ತೀರಿಸಲು ಶ್ರೀರಾಮುಲು ಮುಂದಾಗಿದ್ದರು. ಅವರು ಚಾಕು, ಬೆನ್ನಿಗೆ ಲಾಂಗು ಹಿಡಿದುಕೊಂಡು 40 ಜನ ಬೆಂಬಲಿಗರ ಜೊತೆ ಬಂದಿದ್ರು. ಅಂದು ರಾಮುಲು ಅವರನ್ನು ಕಾಪಾಡಿಕೊಳ್ಳಬೇಕಾದ ಸ್ಥಿತಿ ಇತ್ತು. ಅವರ ಮೇಲೂ ಜೀವ ಬೆದರಿಕೆ ಇತ್ತು. ರಕ್ಷಣೆಗಾಗಿ ರಾಮುಲು ಹುಡುಗರ ಜೊತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರು. ಅಂದು ರಾಮುಲು ಅವರನ್ನು ನಾವು ಉಳಿಸಿಕೊಳ್ಳಬೇಕಾಗಿತ್ತು. ನಮ್ಮ ತಾಯಿ ಕಾಪಾಡು ಅವನನ್ನು ಎಂದಿದ್ರು. ಅಂದು ನಾನು ಅವರ ಜೊತೆಗೆ ನಿಂತೆ. ನಾನು ಅವರನ್ನು ಉಳಿಸಿಕೊಂಡೆ ಎಂದು ಹೇಳಿದರು.

ಅಂದು ರಾಮುಲು ಓಡೋಡಿ ಬಂದ. ನಾನು ಅಂದು ಅವನನ್ನು ಸನ್ಮಾರ್ಗಕ್ಕೆ ತಂದಿದ್ದೆ‌. ಪ್ರತಿಕಾರ ತೀರಿಸಲು ಮುಂದಾಗಿದ್ದ ರಾಮುಲುಗೆ ರಾಮಾಯಣ ಹೇಳಿ ಒಳ್ಳೆಯ ಮಾರ್ಗಕ್ಕೆ ತಂದಿದ್ದೆ.‌ ಅದೇ ಇಂದು ತಪ್ಪಾಯ್ತು. ಅವನು ಒಮ್ಮೆ ಕ್ರೈಂನಲ್ಲಿ ಭಾಗಿ ಆದ್ರೆ, ಮತ್ತೆ ಅದೇ ಮಾರ್ಗದಲ್ಲಿ ಹೋಗುತ್ತಾನೆ ಎಂದು ಅವನಿಗೆ ಬುದ್ದಿ ಹೇಳಿದ್ದೆ. ರಾಮುಲು ಮತ್ತವರ ತಂಡ ಸೂರ್ಯನಾರಾಯಣ ರೆಡ್ಡಿ ಕೊಲೆಗೆ ಸ್ಕೆಚ್ ಹಾಕಿದ್ರು. ಅದನ್ನು ತಡೆದು ಸನ್ಮಾರ್ಗದಲ್ಲಿ ಕರ್ಕೊಂಡು ಬಂದಿದ್ದು ನಾನು ಎಂದರು.

2004ರಲ್ಲಿ ಕಾರ್ಪೊರೇಟರ್ ಕೊಲೆ ಆಯಿತು. ಅಂದು ಮೊದಲ ಬಾರಿಗೆ ರಾಮುಲು ಶಾಸಕರಾದ್ರು. ಕೊಲೆ ಆರೋಪ ರಾಮುಲು ಮೇಲೆ ಬಂದಿತ್ತು. ಶ್ರೀರಾಮುಲು ಅವರ ಮೇಲೆ ಕೊಲೆ ಕೇಸ್ ಬಂದಾಗ ನಾನು ಸುದ್ದಿಗೋಷ್ಠಿ ಮಾಡಿದ್ದೆ. ಅಂದು ನಾನು ಬಿಜೆಪಿ ಜಿಲ್ಲಾಧ್ಯಕ್ಷ ಆಗಿದ್ದೆ. ಕೊಲೆ ಮಾಡಿಸಿದವರ ಮೇಲೆ ಮೇಲೆ ನಾನು ಆರೋಪ ಮಾಡಿದೆ. ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆಯನ್ನೂ ಹಾಕಿದ್ರು ಎಂದು ತಿಳಿಸಿದರು.‌

ನನ್ನ ಮಾತಿನಂತೆ ರಾಮುಲು ರಾಜಕೀಯಕ್ಕೆ ಬಂದರು:ನನ್ನ ಮಾತಿನಂತೆ ರಾಮುಲು ರಾಜಕೀಯಕ್ಕೆ ಬಂದ್ರು. 1999ರಲ್ಲಿ ಯಡಿಯೂರಪ್ಪ ಹಾಗೂ ಸುಷ್ಮಾ ಸ್ವರಾಜ್ ಭೇಟಿ ಮಾಡಿಸಿದೆ. ಶಾಸಕ ಕ್ಷೇತ್ರಕ್ಕೆ ಟಿಕೆಟ್ ಕೊಡಿಸಿದೆ. ಆಗ ರಾಮುಲು ಬಿಎಸ್​ವೈ ಮುಂದೆ ಕಣ್ಣೀರು ಹಾಕಿದ್ರು‌. ಆ ಚುನಾವಣೆಯಲ್ಲಿ ರಾಮುಲು ಸೋತ್ರು. ಆದರೆ ಬಿಜೆಪಿಯಲ್ಲಿ ಅವರು ಬೆಳೆದ್ರು. ನಮ್ಮಿಬ್ಬರ ಸ್ನೇಹ ರಾಜಕೀಯ ಮೀರಿದ್ದು. ನಂತರ ಸಮ್ಮಿಶ್ರ ಸರ್ಕಾರ ಬಂದಾಗ ರಾಮುಲುನ ಮಂತ್ರಿ ಮಾಡಿಸಿದ್ದು ನಾನು. 2018ರಲ್ಲಿ ಬಳ್ಳಾರಿ ಗ್ರಾಮಾಂತರ ಬಿಟ್ಟು ರಾಮುಲು ಮೊಳಕಾಲ್ಮೂರಿನಲ್ಲಿ ಸ್ಪರ್ಧೆ ಮಾಡಿದ್ರು. ಬಳ್ಳಾರಿ ಗ್ರಾಮಾಂತರದಲ್ಲಿ ಆಗ ಅವರಿಗೆ ಸೋಲೋ ಭಯ ಇತ್ತು. ಆಗ ಬಾದಾಮಿಗೂ ಅವರಿಗೆ ಟಿಕೆಟ್ ಕೊಡಲಾಯ್ತು. ಮೊಳಕಾಲ್ಮೂರಿನಲ್ಲಿ ಆಕಾಂಕ್ಷಿ, ಆಗಿನ ಶಾಸಕ ತಿಪ್ಪೇಸ್ವಾಮಿ ರಾಮುಲು ಮೇಲೆ ದಾಳಿ ಮಾಡಿಸಿದ್ರು. ನಾನು ಆಗ ಮೊಳಕಾಲ್ಮೂರಿಗೆ ಹೋದೆ. ರಾಮುಲು ಪರ ಪ್ರಚಾರ ಮಾಡಿದೆ, 45 ಸಾವಿರ ಮತಗಳಿಂದ ನಾನು ಆಗ ರಾಮುಲುನ ಗೆಲ್ಲಿಸಿದೆ ಎಂದು ತಿರುಗೇಟು ನೀಡಿದರು.

ಏಜೆನ್ಸಿಗಳು ತನಿಖೆ ಮಾಡಿದರೆ ರಾಮುಲು ಮೈಮೇಲೆ ಬರುತ್ತೆ : ಈ 14 ವರ್ಷದಲ್ಲಿ ರಾಮುಲು ತಮ್ಮ‌ ಮೈಮೇಲೆ ಬಹಳ ಎಳೆದುಕೊಂಡಿದ್ದಾರೆ. ಬಹಳ ವಿಚಾರ ಇವೆ ‌ಮಾತಾಡಲು. ಏಜೆನ್ಸಿಗಳು ತನಿಖೆ ಮಾಡಿದರೆ ಬಹಳ ವಿಚಾರಗಳು ರಾಮುಲು ಮೇಲೆ ಬರುತ್ತೆ. ಅಷ್ಟು ವಿಚಾರಗಳನ್ನು ಅವರು ಮೈಮೇಲೆ ಎಳೆದುಕೊಂಡಿದ್ದಾರೆ. ಅದರ ಬಗ್ಗೆ ನಾನು ಈಗ ಮಾತಾಡಲ್ಲ, ಸಮಯ ಬಂದಾಗ ಮಾತಾಡ್ತೇನೆ ಎಂದು ಇದೇ ವೇಳೆ ಬಹಿರಂಗ ಪಡಿಸಿದರು.

ದೇವಿ ಬಳಿ ಹೋಗಿ ಎಲ್ಲವನ್ನ ಹೇಳಲಿ:ನಾನು ನನ್ನ ಸ್ನೇಹಿತನಿಗೆ ದ್ರೋಹ ಮಾಡಿದೆ, ಅವಮಾನ ಮಾಡಿದೆ ಅಂತ ರಾಮುಲು ಬಳ್ಳಾರಿಯಮ್ಮ ದೇವಿ ಬಳಿ ಹೋಗಿ ಕಣ್ಣೀರು ಹಾಕಲಿ. ಕರ್ಮ ಯಾರಿಗೂ ಬಿಡಲ್ಲ. ನಾನು ಎಲ್ಲೆ ಮೆಟ್ಟಿ ನಿಂತು ಬಂದಿದ್ದೇನೆ‌. ನನಗೆ ಅನ್ಯಾಯ ಮಾಡಿದವರಿಗೆ ಇವತ್ತು ಕರ್ಮ ಏನೇನು ಮಾಡ್ತಿದೆ ಅಂತ ನೋಡುತ್ತಿದ್ದೇನೆ‌. ಕರ್ಮ ಮತ್ತು ಭಗವಂತನ ಮೇಲೆ ನಾನು ನಂಬಿಕೆ ಇಟ್ಟಿದ್ದೇನೆ ಎಂದರು.

ನನ್ನ ವಿರುದ್ಧ ಸ್ವಾಮಿ ದ್ರೋಹ, ಆಸ್ತಿ ದ್ರೋಹ, ತಾಯಿ ದ್ರೋಹ ಮಾಡಿದ್ದಾರೆ:ನಾನು ಬಿಜೆಪಿಯ ಕಾರ್ಯಕರ್ತನಾಗಿ ಪಕ್ಷ ಹೇಳಿದ ಕೆಲಸ ಮಾಡುತ್ತೇನೆ. ಪಕ್ಷ ಬಂಗಾರು ಹನುಮಂತು ಪರ ಕೆಲಸ ಮಾಡು ಅಂದರೆ ಮಾಡುತ್ತೇನೆ. ರಾಮುಲು ಗೆಲ್ಲಿಸು ಅಂದರೆ ಕೆಲಸ ಮಾಡುತ್ತೇವೆ. ಸೋಲುವುದು ಗೆಲ್ಲುವುದು ಅವರಿಗೆ ಬಿಟ್ಟಿದ್ದು. 40 ವರ್ಷದ ಕಥೆ ಒಂದೇ ದಿನ ಹೇಳಲು ಸಾಧ್ಯವಿಲ್ಲ. ರಾಮುಲು ನನ್ನ ವಿರುದ್ಧ ಸ್ವಾಮಿ ದ್ರೋಹ, ಆಸ್ತಿ ದ್ರೋಹ, ತಾಯಿ ದ್ರೋಹ ಮಾಡಿದ್ದಾರೆ. ಹಲವು ವಿಚಾರಗಳನ್ನು ಆಯಾಯಾ ಸಂದರ್ಭ ಬಂದಾಗ ಮಾತಾಡ್ತೇನೆ ಎಂದು ಹೇಳಿದರು.

ವಿಜಯೇಂದ್ರರನ್ನ ರಾಜ್ಯದ ಅಧ್ಯಕ್ಷ ಮಾಡಿದ್ದು ಪಕ್ಷ. ನಾವೆಲ್ಲ ಅದಕ್ಕೆ ಬದ್ಧ ಇರ್ಬೇಕು. ಅಡ್ವಾಣಿಯವರು ಇದ್ದಾಗಲೇ ಮೋದಿಯವರನ್ನು ದೇಶದ ಪ್ರಧಾನಿಯಾಗಿ ಘೋಷಿಸಲಾಯ್ತು. ಆಗ ಎಲ್ಲರೂ ಮೋದಿಯವರನ್ನು ಬೆಂಬಲಿಸಿದರು. ಈಗ ವಿಜಯೇಂದ್ರರನ್ನ ಅಧ್ಯಕ್ಷ ಮಾಡಿದ ಮೇಲೆ ನಾವೆಲ್ಲ ಒಪ್ಕೊಂಡು ಕೆಲಸ ಮಾಡಬೇಕು. ನಾಲ್ಕಾರು ಜನ‌ ಅನಗತ್ಯವಾಗಿ ಮಾತಾಡ್ತಾರೆ. ರಾಮುಲು ಸಹ ಅವರ ಹಾಗೆ ವಿಜಯೇಂದ್ರ, ರೆಡ್ಡಿ ಬಗ್ಗೆ ಮಾತಾಡಿ ದೊಡ್ಡವನಾಗ್ತೀನಿ ಅಂತ ಅನ್ಕೊಂಡ್ರೆ ಅದು ದಡ್ಡತನ. ರಾಜ್ಯದಲ್ಲಿ ಕಾರ್ಯಕರ್ತರು ವಿಜಯೇಂದ್ರರನ್ನ ಒಪ್ಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ :ರಾಜ್ಯ ಬಿಜೆಪಿಯಲ್ಲಿ ಬಣ ಸಂಘರ್ಷ ಜೋರು : ಜನಾರ್ದನ ರೆಡ್ಡಿ - ಶ್ರೀರಾಮುಲು ನಡುವಿನ ವೈಮನಸ್ಸು ಸ್ಫೋಟ - SRIRAMULU AGAINST JANARDHAN REDDY

Last Updated : Jan 23, 2025, 5:05 PM IST

ABOUT THE AUTHOR

...view details