ಕರ್ನಾಟಕ

karnataka

ಸಿಎಂ ರೇಸ್​ನಲ್ಲಿ ಸತೀಶ್​ ಜಾರಕಿಹೊಳಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದೇನು? - Lakshmi Hebbalkar

ಸತೀಶ್​ ಜಾರಕಿಹೊಳಿ ಅವರ ಹೆಸರು ಸಿಎಂ ರೇಸ್​ನಲ್ಲಿ ಕೇಳಿ‌ಬರುತ್ತಿರುವ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪ್ರತಿಕ್ರಿಯಿಸಿ, ಪಕ್ಷದ ಹೈಕಮಾಂಡ್​ ನಿರ್ದೇಶನ ಹಾಗೂ 136 ಜನ ಶಾಸಕರ ಇಚ್ಛೆಯ ಮೇರೆಗೆ ಸಿಎಂ ಆಯ್ಕೆ ನಡೆಯಲಿದೆ ಎಂದಿದ್ದಾರೆ.

By ETV Bharat Karnataka Team

Published : 4 hours ago

Published : 4 hours ago

ಲಕ್ಷ್ಮೀ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (ETV Bharat)

ಬೆಳಗಾವಿ:"ಯಾರೇ ಸಿಎಂ ರೇಸ್​ನಲ್ಲಿದ್ದರೂ,ಹೈಕಮಾಂಡ್​ ನಿರ್ದೇಶನ ಹಾಗೂ 136 ಜನ ಎಂಎಲ್​ಎಗಳ ಇಚ್ಛೆಯ ಮೇರೆಗೆ ಸಿಎಂ ಆಯ್ಕೆ ನಡೆಯಲಿದೆ" ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ರೇಸ್​ನಲ್ಲಿ ಸಚಿವ ಸತೀಶ್​ ಜಾರಕಿಹೊಳಿ ಹೆಸರು ಕೇಳಿ‌ ಬರುತ್ತಿದೆಯಲ್ಲವೇ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

ಇನ್ನು, ಸಚಿವ ಸತೀಶ್​ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಇದರಲ್ಲಿ ಏನೂ ವಿಶೇಷವಿಲ್ಲ. ನಾನೂ ‌ಸಹ ಮೊನ್ನೆ ಹೋಗಿದ್ದೆ. ಅಧ್ಯಕ್ಷರು ನಮ್ಮ‌ ಸರ್ವೋಚ್ಚ ನಾಯಕರು, ಅವರನ್ನು ಭೇಟಿ ಆಗುತ್ತೇವೆ. ಕೆಲಸವಿದ್ದಾಗ ಭೇಟಿ ಆಗೋದು ಸಹಜ ಪ್ರಕ್ರಿಯೆ" ಎಂದು ಹೇಳಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (ETV Bharat)

"ಗೃಹಲಕ್ಷ್ಮಿ ಯೋಜನೆಯನ್ನು ಟೀಕಿಸುವ ಬಿಜೆಪಿಗರು ಹರಿಯಾಣದಲ್ಲಿ 2,100 ರೂ ಕೊಡುವ ಘೋಷಣೆ ಮಾಡಿದ್ದಾರೆ. ಮೊದಲಿನಿಂದಲೂ ಬಿಜೆಪಿಯವರಿಗೆ ಈ ಚಟ ಇದೆ. ಕಾಂಗ್ರೆಸ್​ನ ಎಲ್ಲ ಕಾರ್ಯಕ್ರಮಗಳ ಬಗ್ಗೆ ಟೀಕೆ-ಟಿಪ್ಪಣಿ ಮಾಡುತ್ತಾರೆ. ಆಮೇಲೆ ಅದೇ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾರೆ" ಎಂದು ಟೀಕಿಸಿದರು.

ನೀವು ಕಾಪಿರೈಟ್ ಕೇಸ್ ಹಾಕುತ್ತೀರಾ ಎಂಬ ಪ್ರಶ್ನೆಗೆ, "ಕಾಪಿರೈಟ್​ ಜನರೇ ಹಾಕಬೇಕು. ಲಾಡ್ಲಿ ಬೆಹ್ನಾ ಯೋಜನೆ ಅಂತ ಮಧ್ಯ ಪ್ರದೇಶದಲ್ಲಿ ಮಾಡಿದರು. ಈಗ ಮಹಾರಾಷ್ಟ್ರದಲ್ಲಿ ಮಾಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಹರಿಯಾಣದಲ್ಲೂ ಸಹ ಮಾಡುತ್ತಿದ್ದಾರೆ. ಕರ್ನಾಟಕ ಮಾಡಲ್, ಗುಜರಾತ್ ಮಾಡಲ್ ಹಿಂದಿಕ್ಕಿ ಮುಂದೆ ಹೋಗುತ್ತಿದ್ದು, ಅದಕ್ಕೆ ಹೆಮ್ಮೆ ಇದೆ" ಎಂದರು.

"ಗೃಹಲಕ್ಷ್ಮಿ ಯೋಜನೆಯ ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಹಾಕಲಾಗಿದೆ. ಎರಡು ಕಂತಿನಲ್ಲಿ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. 7 ಮತ್ತು 9ನೇ ತಾರೀಖಿನಿಂದು ಹಣ ಜಮೆ ಆಗಲಿದೆ. ಸುಮಾರು 5 ಸಾವಿರ ಕೋಟಿ ರೂ. ಗೃಹಲಕ್ಷ್ಮಿ ಹಣವನ್ನು ಸಂದಾಯ ಮಾಡಲಾಗಿದೆ. ಈವರೆಗೆ ಒಟ್ಟು 13 ತಿಂಗಳು ಹಣ ನೀಡಲಾಗಿದೆ" ಎಂದು ಮಾಹಿತಿ ನೀಡಿದರು.

"ಸಚಿವರ ಭೂಹಗರಣ ಬಯಲಿಗೆಳೆಯುವ ಬಗ್ಗೆ ಪಿ.ರಾಜೀವ್ ನೀಡಿರುವ ಆಧಾರರಹಿತ ಹೇಳಿಕೆಗೆ ಉತ್ತರಿಸುವ ಅವಶ್ಯಕತೆ ಇಲ್ಲ. ಯಾವಾಗ ಆಧಾರಸಹಿತ ಮಾತಾಡ್ತಾರೋ ಆಗ ಉತ್ತರಿಸುತ್ತೇನೆ. ಬಹಳ ಪ್ರೀ ಮೆಚ್ಯೂರ್ ಆಗುತ್ತದೆ. ಇಂತಹ ಪ್ರಶ್ನೆಗೆ ಉತ್ತರ ಕೊಡಬೇಕಾಗಿಲ್ಲ" ಎಂದು ತಿರುಗೇಟು ಕೊಟ್ಟರು.

ಬಿಜೆಪಿ ನಾಯಕರು ನಿಮ್ಮನ್ನು ಹೆದರಿಸುತ್ತಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, "ನಾನು ಯಾರಿಗೂ ಹೆದರೋದು, ಬಗ್ಗೋದು, ಜಗ್ಗೋದಿಲ್ಲ ಅಂತ ನಮ್ಮ ಮುಖ್ಯಮಂತ್ರಿಗಳೇ ಹೇಳಿದ್ದಾರೆ" ಎಂದರು.

"ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೊರಗಿಟ್ಟು ಸಭೆ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ.‌ ಹಾಗಾಗಿ, ಆ ವಿಚಾರ ಮಾತಾಡೋದು ಸೂಕ್ತ ಅಲ್ಲ" ಎಂದ ಅವರು, ಡಿಸಿಸಿ ಬ್ಯಾಂಕ್ ಚುನಾವಣೆಗೆ ನೀವು ತಯಾರಿ ಮಾಡುತ್ತಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, "ಇನ್ನೂ ಒಂದು ವರ್ಷ ಸಮಯವಿದೆ. ಎಲ್ಲರೂ ತಯಾರಿ ಮಾಡುತ್ತಿದ್ದಾರೆ. ನಾವೂ ಮಾಡುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ಜನಾರ್ದನ ರೆಡ್ಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾತನಾಡುತ್ತಿದ್ದಾರೆ: ಸಚಿವ ಬೋಸರಾಜು - S S Bosaraju

ABOUT THE AUTHOR

...view details