ಮೈಸೂರು: ಮಹಿಳೆಯರು ಮತ್ತು ಯುವತಿಯರ ಅಸಭ್ಯ ಚಿತ್ರಗಳನ್ನು ಬಿಡಿಸಿ, ಅವರ ಹೆಸರುಗಳನ್ನು ನಮೂದಿಸಿ ಮನೆಗಳ ಮುಂದಿಟ್ಟು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ವರದರಾಜಸ್ವಾಮಿ ಬಡಾವಣೆ ನಿವಾಸಿ ಶಿವಣ್ಣ(54) ಸಿಕ್ಕಿ ಬಿದ್ದ ಆರೋಪಿ.
ಆರೋಪಿ ಸುಮಾರು ಮೂರ್ನಾಲ್ಕು ವರ್ಷಗಳಿಂದ ವರದರಾಜಸ್ವಾಮಿ ಬಡಾವಣೆ ಮಹಿಳೆಯರ ಚಿತ್ರಗಳನ್ನು ಅಸಭ್ಯವಾಗಿ ಬಿಡಿಸಿ ಹೆಸರುಗಳನ್ನು ಉಲ್ಲೇಖಿಸಿ ಅವರ ಮನೆಗಳ ಮುಂದೆ ಇಡುತ್ತಿದ್ದ. ನಿನ್ನೆ(ಸೋಮವಾರ) ತಡರಾತ್ರಿ ಸೈಕಲ್ನಲ್ಲಿ ಬಂದು ಮನೆ ಮುಂದೆ ಅಸಭ್ಯ ಚಿತ್ರಗಳನ್ನು ಇಡುವಾಗ, ಹೊಂಚು ಹಾಕಿ ಕಾಯುತ್ತಿದ್ದ ಗ್ರಾಮಸ್ಥರ ಕೈಗೆ ಶಿವಣ್ಣ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ನಂತರ ಗ್ರಾಮಸ್ಥರು ಆರೋಪಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.