ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬುಧವಾರ ಒಂದೇ ದಿನ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ 61 ವಿದೇಶಿಯರು ಸನಾತನ ಧರ್ಮವನ್ನು ಸ್ವೀಕರಿಸಿದರು. ಕುಂಭ ನಗರದ ಸೆಕ್ಟರ್ 17ರಲ್ಲಿರುವ ಶಕ್ತಿಧಾಮ ಆಶ್ರಮದಲ್ಲಿ ವೇದ ಮಂತ್ರಗಳ ಪಠಣದ ನಡುವೆ ಜಗದ್ಗುರು ಸಾಯಿ ಮಾ ಲಕ್ಷ್ಮಿ ದೇವಿ ಅವರಿಂದ 61 ವಿದೇಶಿಯರೂ ಸನಾತನ ಧರ್ಮ ಸ್ವೀಕರಿಸಿದರು. ಸಾಯಿ ಮಾ ಲಕ್ಷ್ಮಿ ದೇವಿಯ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೆ, ಶಕ್ತಿಧಾಮದ ಶಿಬಿರದಲ್ಲಿ ನಡೆದ ಈ ಪವಿತ್ರ ಮಹಾಕುಂಭ ಮೇಳದಲ್ಲಿ 200ಕ್ಕೂ ಹೆಚ್ಚು ವಿದೇಶಿಯರು ಸನಾತನ ದೀಕ್ಷೆಯನ್ನು ಸ್ವೀಕರಿಸಿದಂತಾಯಿತು.
ಈ ಶುಭ ಸಂದರ್ಭದಲ್ಲಿ ಭಕ್ತರು ಓಂ ನಮಃ ಶಿವಾಯ ಮಂತ್ರವನ್ನು ಹಾಡುತ್ತಾ ನೃತ್ಯ ಮಾಡುತ್ತಿರುವುದು ಗಮನ ಸೆಳೆಯಿತು. ಪ್ರಾರ್ಥನೆ ಮತ್ತು ಭಜನೆ, ಕೀರ್ತನೆಗಳಲ್ಲಿ ಭಾಗವಹಿಸಿ, ಕಾರ್ಯಕ್ರಮದ ಕೇಂದ್ರ ಬಿಂದುವಾದರು. ಸನಾತನ ಧರ್ಮದ ನಿಜವಾದ ಅರ್ಥವೇನು ಎಂಬುವುದರ ಕುರಿತು ಹಲವರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸನಾತನ ಧರ್ಮ ಮಾತ್ರ ಸನ್ಮಾರ್ಗ ತೋರಬಹುದು: ದೀಕ್ಷೆಯ ಕುರಿತು ಮಾತನಾಡಿದ ಜಗದ್ಗುರು ಸಾಯಿ ಮಾತೆ ಲಕ್ಷ್ಮಿ ದೇವಿ, ಕಾಲಾತೀತವಾದ ಸನಾತನ ಧರ್ಮದ ಆಕರ್ಷಣೆಯಿಂದಾಗಿ ಪ್ರಪಂಚದಾದ್ಯಂತ ಜನರು ಆಧ್ಯಾತ್ಮಿಕತೆಯಲ್ಲಿ ಭಾಗಿಯಾಗುವ ಮೂಲಕ ಸಂತಸ ಕಂಡುಕೊಳ್ಳುತ್ತಿದ್ದಾರೆ. ವ್ಯಸನ ಮತ್ತು ಒತ್ತಡದಲ್ಲಿ ಮುಳುಗಿರುವ ಇಂದಿನ ಯುವಕರಿಗೆ ಸನಾತನ ಧರ್ಮ ಮಾತ್ರ ಸರಿಯಾದ ಮಾರ್ಗವನ್ನು ತೋರಿಸಬಲ್ಲದು. ಇದರಿಂದಾಗಿಯೇ ಜನರು ಹಿಂದೂ ಧರ್ಮದತ್ತ ಆಕರ್ಷಿತರಾಗಲು ಮತ್ತು ಅದನ್ನು ಅಳವಡಿಸಿಕೊಳ್ಳಲು ಇದೇ ಕಾರಣ ಎಂದು ಹೇಳಿದರು.
ಬೆಲ್ಜಿಯಂನಲ್ಲಿ ಮೂಳೆಚಿಕಿತ್ಸಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ಯಾಥರೀನ್ ಗಿಲ್ಡೆಮಿನ್ ಕೂಡ ಗುರು ದೀಕ್ಷೆ ಪಡೆದವರಲ್ಲಿ ಒಬ್ಬರಾಗಿದ್ದು, ದೈನಂದಿನ ಜೀವನದ ಗಡಿಬಿಡಿ, ಒತ್ತಡ, ಜಂಜಾಟ ತನ್ನ ಜೀವನದಲ್ಲಿ ಹೆಚ್ಚಾಗಿತ್ತು. ತನ್ನ ವೈಯಕ್ತಿಕ ಜೀವನ ಕೂಡ ಸುಂದರವಾಗಿ ಇದ್ದಿರಲಿಲ್ಲ. ಹದಗೆಡುತ್ತಿದ್ದ ಮಾನಸಿಕ ಸ್ಥಿತಿಯಿಂದ ಹೊರಬರಲು ಒದ್ದಾಡುತ್ತಿದ್ದೆ. ನೆಮ್ಮದಿ ಹಾಗೂ ಆತ್ಮ ತೃಪ್ತಿಗಾಗಿ ಜಗದ್ಗುರು ಸಾಯಿ ಮಾ ಅವರನ್ನು ನಾನು ಕಾಣಬೇಕಾಯಿತು. ಇವರಿಂದ ನನ್ನ ಜೀವನದಲ್ಲಿ ಇದೀಗ ಹೊಸ ಚೈತನ್ಯ ಬಂದಿದೆ ಎಂದರು.
ಸನಾತನ ಧರ್ಮದ ಸರಳತೆ ನನ್ನನ್ನು ಸೆಳೆದಿದೆ: ಮಾರುಕಟ್ಟೆ ಕ್ಷೇತ್ರದಲ್ಲಿ ಕೆಲಸ ಮಾಡುವ ಐರ್ಲೆಂಡ್ನ ಡೇವಿಡ್ ಹ್ಯಾರಿಂಗ್ಟನ್ ಮಾತನಾಡಿ, ಸನಾತನ ಧರ್ಮದ ಸರಳತೆ ಏಳು ಸಮುದ್ರಗಳ ಆಚೆಯಿಂದ ನನ್ನನ್ನು ಸೆಳೆದಿದೆ. ನಮ್ಮ ಮೇಲೆ ಒತ್ತಡ ಹೇರದ ಏಕೈಕ ಜೀವನ ವಿಧಾನ ಇದಾಗಿದೆ. ಅದರ ಸರಳತೆ ಮತ್ತು ಪ್ರಾಮಾಣಿಕತೆಯು ಮೊದಲಿನಿಂದಲೂ ನನ್ನನ್ನು ಆಕರ್ಷಿಸಿತ್ತು. ಮಹಾ ಕುಂಭಮೇಳದ ಅದ್ಭುತ ಮತ್ತು ಪವಿತ್ರ ಸಂದರ್ಭದಲ್ಲಿ, ನಾನು ಸನಾತನ ಧರ್ಮವನ್ನು ಸ್ವೀಕರಿಸಿದೆ. ಅದು ನನಗೆ ಶಾಂತಿ ಮತ್ತು ಖುಷಿ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜೀವನದಲ್ಲಿ ಕಳೆದುಕೊಂಡದ್ದನ್ನು ಹುಡುಕುತ್ತಿದ್ದೆ. ನನ್ನ ಹುಡುಕಾಟ ಸನಾತನ ಧರ್ಮದಲ್ಲಿ ಸಿಕ್ಕಿದೆ. ಜಗದ್ಗುರು ಸಾಯಿ ಮಾತೆಯ ಸಾಮೀಪ್ಯದಲ್ಲಿ ನನ್ನ ಜೀವನಕ್ಕೆ ಹೊಸ ದಿಕ್ಕು ಸಿಕ್ಕಿತು. ಇಂದು ನಾನು ಅವರಿಂದ ಗುರು ದೀಕ್ಷೆ ಪಡೆದಿದ್ದೇನೆ. ಇದಕ್ಕಾಗಿಯೇ ಮಹಾಕುಂಭ ನನ್ನ ಜೀವನದಲ್ಲಿ ಬಂದಿರಬಹುದು. ಗುರು ದೀಕ್ಷೆಯನ್ನು ಸ್ವೀಕರಿಸಿ ನಾನು ಉತ್ಸುಕನಾಗಿದ್ದೇನೆ ಎಂದು ಫ್ರಾನ್ಸ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಆಲಿವಿಯರ್ ಗಿಯುಲಿಯೇರಿ ತಮ್ಮ ಅನುಭವ ಹಂಚಿಕೊಂಡರು.
ಈ ಕ್ಷೇತ್ರಗಳಲ್ಲೆಲ್ಲ ಸಾಧನೆ ಮಾಡಿದವರು ಪಡೆದರು ಸತಾತನ ದೀಕ್ಷೆ: ಅಮೆರಿಕದಲ್ಲಿ ವಾಸ್ತುಶಿಲ್ಪಿಯಾಗಿ ಕಾರ್ಯ ನಿರ್ವಹಿಸುವ ಮ್ಯಾಥ್ಯೂ ಲಾರೆನ್ಸ್, ಕೆನಡಾದಲ್ಲಿ ವೈದ್ಯಯಾಗಿರುವ ಆಂಡ್ರೆ ಅನತ್, ಅಮೆರಿಕದಲ್ಲಿ ಇಂಧನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜೆನ್ನಿ ಮಿಲ್ಲರ್, ಕೆನಡಾದಲ್ಲಿ ಐಟಿ ಡೆವಲಪರ್ ಆಗಿರುವ ಮ್ಯಾಥ್ಯೂ ಸವೊಯ್ ಮತ್ತು ಬೆಲ್ಜಿಯಂನಲ್ಲಿ ಆರೋಗ್ಯ ಮತ್ತು ಸುರಕ್ಷತಾ ಸಲಹೆಗಾರರಾಗಿ ಕಾರ್ಯ ನಿರ್ವಹಿಸುವ ಕ್ರಿಸ್ಟಲ್ ಡಿ ಕ್ಯಾಟ್ ಸೇರಿದಂತೆ ಅನೇಕ ಅನೇಕ ಉನ್ನತ ಹುದ್ದೆಯಲ್ಲಿರುವವರು ಸಾಯಿ ಮಾತೆ ಅವರಿಂದ ದೀಕ್ಷೆ ಪಡೆದರು.
ಸಾಯಿ ಮಾ ಲಕ್ಷ್ಮಿ ದೇವಿಯ ಮಾರ್ಗದರ್ಶನದಲ್ಲಿ ಈ ಮಹಾ ಕುಂಭಮೇಳದಲ್ಲಿ ಇಲ್ಲಿಯವರೆಗೆ, 200ಕ್ಕೂ ಹೆಚ್ಚು ವಿದೇಶಿಯರು ಸನಾತನ ದೀಕ್ಷೆ ಸ್ವೀಕರಿಸಿದ್ದಾರೆ ಎಂದು ಅಂದಾಜು ಮಾಡಲಾಗುತ್ತಿದೆ. ಮಾರಿಷಸ್ನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸಾಯಿ ಮಾ ಕಳೆದ ಒಂದೂವರೆ ದಶಕಗಳಿಂದ ಹಿಂದೂ ಧರ್ಮದ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ.
2019 ರಲ್ಲಿ, ಸಾಯಿ ಮಾ ಅವರಿಂದ ಪ್ರೇರಿತರಾಗಿ, ವಿದೇಶಿ ಮೂಲದ ಒಂಬತ್ತು ಶಿಷ್ಯರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದರು. ಮೂವರು ಮಹಿಳಾ ಸಂತರು ಸೇರಿದಂತೆ ಅವರೆಲ್ಲರೂ ಮಹಾಮಂಡಲೇಶ್ವರ ಎಂಬ ಬಿರುದು ಸಹ ಪಡೆದ್ದಾರೆ. ಸಾಯಿ ಮಾ ಅವರ ಭಕ್ತರಲ್ಲಿ ಪ್ರಪಂಚದಾದ್ಯಂತ 12ಕ್ಕೂ ಹೆಚ್ಚು ದೇಶಗಳ ನಿವಾಸಿಗಳು ಸೇರಿದ್ದಾರೆ. ಅವರು ಕೂಡ ಈಗ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಜಪಾನ್, ಅಮೆರಿಕ, ಇಸ್ರೇಲ್, ಫ್ರಾನ್ಸ್ ಮತ್ತು ಇತರ ಹಲವು ಯುರೋಪಿಯನ್ ದೇಶಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಅವರಿಂದ ದೀಕ್ಷೆ ಪಡೆದಿದ್ದು ಇಲ್ಲಿ ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ: ಮಹಾ ಕುಂಭ: 100ಕ್ಕೂ ಹೆಚ್ಚು ನಾಗ ಸನ್ಯಾಸಿನಿಯರಿಗೆ ದೀಕ್ಷೆ ಪ್ರಕ್ರಿಯೆ: 3 ವಿದೇಶಿ ಮಹಿಳೆಯರಿಗೂ ದೀಕ್ಷೆ - MAHA KUMBH 2025‘