ಕರ್ನಾಟಕ

karnataka

ಕೇಂದ್ರ ಸಚಿವ ಸ್ಥಾನದಿಂದ ಹೆಚ್​ಡಿಕೆ ಕೆಳಗಿಳಿಸಲು ಸಾಧ್ಯವಿಲ್ಲ: ನಿಖಿಲ್ ಕುಮಾರಸ್ವಾಮಿ - Nikhil Kumaraswamy

By ETV Bharat Karnataka Team

Published : Aug 25, 2024, 5:24 PM IST

ಮುಡಾ ಹಗರಣ ಮುಚ್ಚಿಹಾಕಲು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

nikhil kumaraswamy
ನಿಖಿಲ್ ಕುಮಾರಸ್ವಾಮಿ (ETV Bharat)

ಬೆಂಗಳೂರು: ''ಕೇವಲ ಜನತೆಯ ದಿಕ್ಕು ತಪ್ಪಿಸಲು ನಮ್ಮ ತಂದೆಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಲಾಗಿದೆ. ಇದು ಮುಡಾ ಹಗರಣ ಮುಚ್ಚಿಹಾಕುವ ಯತ್ನದ ಒಂದು ಭಾಗವಷ್ಟೇ, ಇಂತಹ ಯಾವ ಕಾರಣಗಳಿಂದಲೂ ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ'' ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಜೆಪಿ ಭವನದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣಾ ಸಿದ್ಧತೆಯ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಕೇಂದ್ರ ಸಚಿವ ಸ್ಥಾನದಿಂದ ಕುಮಾರಸ್ವಾಮಿಯವರನ್ನು ಇಳಿಸಲು ಕಾಂಗ್ರೆಸ್ ನಾಯಕರಿಂದ ಪ್ಲಾನ್ ನಡೆದಿದೆ. ಆದರೆ ಅದು ಸಾಧ್ಯವಿಲ್ಲ. ಕುಮಾರಸ್ವಾಮಿ ಗಣಿಗಾರಿಕೆಗೆ ಸಹಿ ಹಾಕಿಲ್ಲ'' ಎಂದರು.

''ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ ಲೋಕಾಯುಕ್ತ ಪತ್ರ ಬರೆದಿದೆ. ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ನಾಯಕತ್ವದ ಶಕ್ತಿ ಹಳೇ ಮೈಸೂರು ಪ್ರಾಂತ್ಯವಲ್ಲದೆ, ಉತ್ತರ ಕರ್ನಾಟಕದಲ್ಲಿಯೂ ಹೆಚ್ಚಾಗಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ದುಡಿದಿದ್ದಾರೆ. ನಿನ್ನೆ, ಮೊನ್ನೆ ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿದ್ದರು. ಅಲ್ಲಿ ಕುಮಾರಸ್ವಾಮಿ ಅವರನ್ನು ಯಾವ ರೀತಿ ಕಟ್ಟಿಹಾಕಬೇಕು ಅಂತ ಮುಖ್ಯವಾದ ಚರ್ಚೆ ಆಗಿದೆ. 2018ರಲ್ಲಿ ಕುಮಾರಸ್ವಾಮಿಯನ್ನು ಸಿಎಂ ಮಾಡಲು ಬಂದಿರಲ್ಲ, ಆಗ ನಿಮಗೆ ಈ ಮಾಹಿತಿ ಇರಲಿಲ್ವ. ಈಗ ಯಾಕೆ ಇದನ್ನ ಪ್ರಶ್ನೆ ಮಾಡುತ್ತಿದ್ದೀರಾ?'' ಎಂದು ನಿಖಿಲ್ ಪ್ರಶ್ನಿಸಿದರು.

ಜೆಡಿಎಸ್ ನಾಯಕರ ಸಭೆ (ETV Bharat)

''ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿದರೂ ಮುಡಾ ವಿಚಾರ ದೇಶಾದ್ಯಂತ ಚರ್ಚೆ ಆಗುತ್ತಿದೆ. ಮುಡಾ ಸಂಬಂಧ ಪ್ರತಿದಿನ ಒಂದಿಲ್ಲೊಂದು ದಾಖಲೆ ಹೊರಬರುತ್ತಿದೆ. ಸಿಎಂ ಪತ್ನಿ ವಿಜಯನಗರದಲ್ಲಿ ಸೈಟ್ ಡಿಮ್ಯಾಂಡ್ ಮಾಡಿದ್ದ ಪತ್ರ ಬಿಡುಗಡೆಯಾಗಿದೆ. ಅದು ನಿಮ್ಮ ಕಣ್ಣ್ಮುಂದೆ ಇದೆಯಲ್ಲ, ಆ ಪತ್ರದಲ್ಲಿ ಏನು ಬರೆದಿದ್ದಾರೆ? 40:60 ನಿವೇಶನ ನಮಗೆ ಬೇಡ, ಇಂತಹದೇ ಜಾಗಬೇಕು ಅಂತ ಬರೆದು, ಈಗ ವೈಟ್ನರ್ ಹಾಕಿ ಅಳಿಸಿದ್ದಾರೆ. ಅದರಲ್ಲಿ ವಿಜಯನಗರದಲ್ಲಿ ನಿವೇಶನ ಕೇಳಿದ್ದರು ಅಂತ ಇತ್ತು ಎಂಬುದು ನಮಗಿರುವ ಮಾಹಿತಿ'' ಎಂದು ಆರೋಪಿಸಿದರು.

''ಕುಮಾರಸ್ವಾಮಿಗೆ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಕಳೆದ ಎರಡು ಬಾರಿ ಜನ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಹಾಗಾಗಿ, ಪಕ್ಷದ ಧ್ವನಿಯಾಗಿ, ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣಕ್ಕೆ ಶೀಘ್ರದಲ್ಲೇ ಉಪಚುನಾವಣೆ ಘೋಷಣೆ ಆಗಲಿದೆ. ಆ ಹಿನ್ನೆಲೆಯಲ್ಲಿ ಪಕ್ಷದ ನಾಯಕರು, ಮುಖಂಡರಿಗೆ ಜವಾಬ್ದಾರಿ ಕೊಟ್ಟು ಕೆಲಸ ಮಾಡಬೇಕು ಎನ್ನುವುದು ಕಾರ್ಯಕರ್ತರ ಬಯಕೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ''.

''ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಪಕ್ಷಗಳು ಒಟ್ಟಾಗಿ ಕೆಲಸ ಮಾಡಿದ್ದೇವೆ. ಈಗಲೂ ಒಟ್ಟಾಗಿ ಹೋಗುತ್ತೇವೆ. ಯಾರಿಗೆ ಟಿಕೆಟ್ ಎನ್ನುವುದು ನಿರ್ಧಾರವಾಗಿಲ್ಲ. ಆದರೆ, ಎಲ್ಲವನ್ನೂ ಅಂತಿಮವಾಗಿ ಬಿಜೆಪಿ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಈಗಾಗಲೇ ವರದಿ ಸಹ ಹೈಕಮಾಂಡ್ ಕೈಸೇರಿದೆ. ಕೆಲವೇ ದಿನಗಳಲ್ಲಿ ಎನ್‌ಡಿಎ ಅಭ್ಯರ್ಥಿ ಘೋಷಣೆ ಮಾಡಲಿದ್ದಾರೆ'' ಎಂದರು.

ಬಿಜೆಪಿಗೆ ಜೆಡಿಎಸ್ ಸ್ಥಾನ ಬಿಟ್ಟು ಕೊಡುತ್ತಾ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ನಿಖಿಲ್, ''ಯಾವುದೇ ತೀರ್ಮಾನ ಅಥವಾ ಚರ್ಚೆ ಇಲ್ಲಿ ಮಾಡಲು ಆಗಲ್ಲ. ಯಾವುದೇ ಅಧಿಕೃತ ತೀರ್ಮಾನವಾದರೂ ಅಂತಿಮವಾಗಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ದೆಹಲಿ ನಾಯಕರು, ನಮ್ಮ ನಾಯಕರು ಸೇರಿ ಅಭ್ಯರ್ಥಿ ಯಾರೆಂದು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

''ಟಿಕೆಟ್ ಗೊಂದಲದಿಂದ ಕಾಂಗ್ರೆಸ್​​ಗೆ ಲಾಭ ಆಗುತ್ತಾ ಎನ್ನುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಚನ್ನಪಟ್ಟಣ ತಾಲೂಕು ಜೆಡಿಎಸ್ ಪಕ್ಷದ ಭದ್ರಕೋಟೆ. ವರದೇಗೌಡ ಎನ್ನುವ ಸಾಮಾನ್ಯ ವ್ಯಕ್ತಿಗೆ ನಮ್ಮ ಜನರು ಬೆಂಬಲ ನೀಡಿದ್ದರು. ಜೆಡಿಎಸ್​​ನ 60 ಸಾವಿರ ಮತಗಳಿವೆ. ಕಾಂಗ್ರೆಸ್​​ಗೆ ಚನ್ನಪಟ್ಟಣದಲ್ಲಿ ನೆಲೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪ ಮತಗಳು ಬಂದಿರಬಹುದು. ನಾವು ಡೇಟಾ ಇತಿಹಾಸ ನೋಡಿದಾಗ ಇದು ತಿಳಿಯುತ್ತದೆ. ಸಿ.ಪಿ.ಯೋಗಿಶ್ವರ್ ಸಹ ವೈಯಕ್ತಿಕ ವರ್ಚಸ್ಸು ಇಟ್ಟುಕೊಂಡಿದ್ದಾರೆ. ಎಲ್ಲವೂ ಉಭಯ ಪಕ್ಷಗಳ ವರಿಷ್ಠ ನಾಯರ ಸಮ್ಮುಖದಲ್ಲಿ ಅಂತಿಮವಾಗಲಿದೆ'' ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ:ಸಿದ್ದರಾಮಯ್ಯಗೆ ಹೈಕಮಾಂಡ್ ಬೆಂಬಲವಿದೆ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಸಚಿವ ಮಹದೇವಪ್ಪ - Leadership Changes

ABOUT THE AUTHOR

...view details