ಕರ್ನಾಟಕ

karnataka

ETV Bharat / state

ಬಿಬಿಎಂಪಿಯಿಂದ ನಾಯಿಗಳಿಗಾಗಿ "ಕುಕುರ್ ತಿಹಾರ್" ಉತ್ಸವ ಆಚರಣೆ

ಇದೇ ತಿಂಗಳ 17ರಂದು ನಾಯಿಗಳಿಗಾಗಿ ಬಿಬಿಎಂಪಿಯು ಕುಕುರ್​ ತಿಹಾರ್​​ ಉತ್ಸವ ಆಚರಿಸಲು ನಿರ್ಧರಿಸಿದೆ.

By ETV Bharat Karnataka Team

Published : 5 hours ago

dog
ನಾಯಿ (ETV Bharat)

ಬೆಂಗಳೂರು :ಪ್ರಾಣಿಗಳೊಂದಿಗೆ ಸಾಮರಸ್ಯದ ಸಹಬಾಳ್ವೆಯು ನಮ್ಮ ಸುತ್ತಲಿನ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಪ್ರಾಣಿಗಳ ಜನನ ನಿಯಂತ್ರಣ ಮತ್ತು ವ್ಯಾಕ್ಸಿನೇಷನ್‌ಗಳ ಹೊರತಾಗಿ, ಪ್ರಾಣಿಗಳ ನಡವಳಿಕೆಯನ್ನು ಅರ್ಥಮಾಡಿಕೊಂಡು, ಪ್ರಕೃತಿ ಅವುಗಳನ್ನು ರಚಿಸಿದ ರೀತಿಯಲ್ಲಿ ಅವುಗಳನ್ನು ಒಪ್ಪಿಕೊಳ್ಳುವುದು ಸಹ ಮುಖ್ಯವಾದ ವಿಷಯವಾಗಿದೆ. ಈ ಹಿನ್ನೆಲೆ ನಾಯಿಗಳಿಗಾಗಿ ಅಕ್ಟೋಬರ್ 17 ರಂದು ಬಿಬಿಎಂಪಿ ಕುಕುರ್ ತಿಹಾರ್ ಉತ್ಸವ ಆಚರಿಸಲು ನಿರ್ಧರಿಸಿದೆ.

ಸಹವರ್ತಿನ್ ಅನಿಮಲ್ ವೆಲ್‌ಫೇರ್ ಟ್ರಸ್ಟ್ ಮತ್ತು ಇತರ ಆಸಕ್ತ ಸಂಸ್ಥೆಗಳೊಂದಿಗೆ ಪಾಲಿಕೆಯ ಪಶುಸಂಗೋಪನೆ ವಿಭಾಗ ಪ್ರಾಣಿಗಳಿಗೆ ಮಾನವೀಯ ವಾತಾವರಣವನ್ನು ನಿರ್ಮಿಸುವಲ್ಲಿ ಹಾಗೂ ಮಾನವ-ಪ್ರಾಣಿ ಸಂಘರ್ಷಗಳನ್ನು ಕಡಿಮೆ ಮಾಡಲು ಅನೇಕ ಉಪಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರತಿ ವಾರ್ಡ್​ಗಳಲ್ಲಿ ಸಹಬಾಳ್ವೆಯ ಚಾಂಪಿಯನ್ ಗಳನ್ನು ಸಕ್ರಿಯಗೊಳಿಸುವುದು ಈ ಉತ್ಸವದ ಉದ್ದೇಶವಾಗಿದೆ.

ನಾಯಿ (ETV Bharat)

ಸಮಾಜದಲ್ಲಿ ಕಡಿತ ಹಾಗೂ ದಾಳಿಯ ಭಯದಿಂದ ನಾಯಿಗಳ ಮೇಲೆ ಕೇವಲ ನಕಾರಾತ್ಮಕ ಭಾವನೆಯು ಹೆಚ್ಚಾಗುತ್ತಿದೆ. ಆದರೆ ನಾಯಿಗಳು ಬಹಳ ನಿಷ್ಠಾವಂತ, ವಿಧೇಯ, ರಕ್ಷಣಾತ್ಮಕ ಹಾಗೂ ಭಾವನಾತ್ಮಕ ಬೆಂಬಲ ನೀಡುವಂತ ಪ್ರಾಣಿಯೂ ಆಗಿದೆ. ಪ್ರಾಣಿಗಳೊಂದಿಗಿನ ಸಂಘರ್ಷ ನಿರ್ವಹಿಸಲು, ರೇಬೀಸ್ ಕಾಯಿಲೆಯನ್ನು ತಡೆಗಟ್ಟುವ ಕ್ರಮಗಳನ್ನು ಪ್ರತಿಪಾದಿಸುತ್ತಿದ್ದರೂ, ಸಮಾಜಕ್ಕೆ ನಾಯಿಗಳ ಸಕಾರಾತ್ಮಕ ಕೊಡುಗೆಗಳನ್ನು ಆಚರಿಸಲು ಮತ್ತು ಎತ್ತಿ ತೋರಿಸಲು ಈ ಉತ್ಸವ ಕಾರಣವಾಗಲಿದೆ.

'ಅಕ್ಟೋಬರ್ 17ರಂದು ನಾಯಿಗಳೊಂದಿಗಿನ ಪ್ರೀತಿ ಮತ್ತು ಬಾಂಧವ್ಯದ ಕಥೆಗಳನ್ನು ಹಂಚಿಕೊಳ್ಳುತ್ತಾ,
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಹಾಗೂ ಪ್ರಾಣಿಗಳ ಪಾಲಕರನ್ನು ಒಟ್ಟುಗೂಡಿಸುವ ಮೂಲಕ ಪಾಲಿಕೆ ನಾಯಿಗಳಿಗೆಂದು 'ಕುಕುರ್ ತಿಹಾರ್' ಉತ್ಸವ ಆಚರಿಸಲು ನಿರ್ಧರಿಸಿದೆ' ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.

ಕ್ಯೂ-ಆರ್ ಕೋಡ್ (ETV Bharat)

'ಉತ್ಸವದ ದಿನದಂದು, ಬಿಬಿಎಂಪಿ ಆಯಾ ವಾರ್ಡಿನ ರೆಸ್ಟೋರೆಂಟ್‌ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ, ಸಮುದಾಯದ ನಾಯಿಗಳಿಗೆ ಆಹಾರ ನೀಡುವಲ್ಲಿ ಸಹಾಯ ಮಾಡಲು 4 ವಾರ್ಡ್‌ಗಳ ಪೌರಕಾರ್ಮಿಕರ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಆಹಾರ ನೀಡುವ ಕಾರ್ಯವನ್ನು ಪ್ರಾರಂಭಿಸಲಿದೆ' ಎಂದು ಮಾಹಿತಿ ನೀಡಿದ್ದಾರೆ.

ಈ ಯೋಜನೆಯು ಮುಂದುವರೆದಂತೆ, ನಾವು ಪ್ರತಿ ವಾರ್ಡ್​ನಲ್ಲಿಯೂ ಆರೈಕೆದಾರರೊಂದಿಗೆ ರೆಸ್ಟೋರೆಂಟ್‌ಗಳನ್ನು ಸಂಪರ್ಕಿಸುವ ಮೂಲಕ, ಉಳಿದ ಆಹಾರವನ್ನು ಸದುಪಯೋಗಪಡಿಸುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ರೀತಿಯಲ್ಲಿ ನಾಯಿಗಳಿಗೆ ನಿರಂತರವಾಗಿ ಪ್ರತಿದಿನ ಒಂದು ಬಾರಿ ಆಹಾರವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ವಾರ್ಡ್‌ನಿಂದ ಸ್ವಯಂಸೇವಕರಾಗಿ ಮುಂಬರುವ ಎಲ್ಲಾ ಉಪಕ್ರಮಗಳಲ್ಲಿ ಭಾಗಿಯಾಗಲು ಯಾರು ಉತ್ಸುಕರಾಗಿದ್ದಾರೋ ಅವರು ಕ್ಯೂ-ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ನಮೂನೆಯನ್ನು ಅಕ್ಟೋಬರ್ 15ರ ಒಳಗೆ ಭರ್ತಿ ಮಾಡಬೇಕಿದೆ. ಯಾವುದೇ ಸಂದೇಹವಿದ್ದಲ್ಲಿ, ಮಾಹಿತಿಗಾಗಿ 1533 ಅನ್ನು ಕೂಡ ಸಂಪರ್ಕಿಸಬಹುದು ಎಂದು ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಇದನ್ನೂ ಓದಿ :ಮನುಷ್ಯರ ಮೇಲೆ ದಾಳಿ ತಡೆಯಲು ಬಿಬಿಎಂಪಿಯಿಂದ ಸಕಲ ಸಿದ್ಧತೆ - STREET DOGS

ABOUT THE AUTHOR

...view details