ಕರ್ನಾಟಕ

karnataka

ETV Bharat / state

'ಮಂಗಳವಾರ ಬೆಳಗಾವಿಗೆ ಬರುತ್ತೇನೆ, ಅಷ್ಟರೊಳಗೆ ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್​ ವಾಪಸ್​ ಪಡೆಯಿರಿ' - NARAYANA GOWDA

ಕಂಡಕ್ಟರ್ ಮೇಲೆ ಆದ ಅನ್ಯಾಯ, ಉದ್ಧಟತನದ ವಿರುದ್ಧ ಪ್ರತಿಭಟಿಸಲು ಮತ್ತು ಕೆಲ ಮರಾಠಿ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಲು ಮಂಗಳವಾರ ಬೆಳಗ್ಗೆ ಬೆಳಗಾವಿಗೆ ಬರುತ್ತಿದ್ದೇನೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಹೇಳಿದ್ದಾರೆ.

NARAYANA GOWDA
ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ (ETV Bharat)

By ETV Bharat Karnataka Team

Published : Feb 23, 2025, 10:45 PM IST

ಬೆಳಗಾವಿ :"ಕನ್ನಡಿಗ ಕಂಡಕ್ಟರ್ ಮೇಲೆ ಆದ ಅನ್ಯಾಯ ಖಂಡಿಸಿ ಪ್ರತಿಭಟಿಸಲು ಮತ್ತು ಕೆಲ ಮರಾಠಿ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಲು ಮಂಗಳವಾರ ಬೆಳಗ್ಗೆ ನಾನು ಬೆಳಗಾವಿಗೆ ಬರುತ್ತಿದ್ದೇನೆ. ಕನ್ನಡದ ಕೆಚ್ಚೆದೆಯ ಕಲಿಗಳು, ಹುಲಿಗಳು ಎಲ್ಲರೂ ಅಂದು ಬೆಳಗಾವಿಗೆ ಬನ್ನಿ. ನಮ್ಮ ಮುಂದೆ ಆ ಕಿಡಿಗೇಡಿಗಳ ಪ್ರದರ್ಶಿಸಲಿ ನೋಡೋಣ. ನಾನು ಬರುವುದರೊಳಗೆ ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ವಾಪಸ್​ ಪಡೆಯುವಂತೆ" ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಆಗ್ರಹಿಸಿದ್ದಾರೆ.

ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ನಾರಾಯಣಗೌಡರು, "ಕನ್ನಡ ಮಾತಾಡಿದ್ದಕ್ಕೆ ಮರಾಠಿ ಮಾತಾಡು ಅಂತಾ ಕಂಡಕ್ಟರ್ ಮೇಲೆ ಎಂಇಎಸ್ ಮತ್ತು ಕೆಲ ಮರಾಠಿಗರು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇಂಥವರನ್ನು ಅನೇಕ ವರ್ಷಗಳಿಂದ ನಾನು ನೋಡಿದ್ದೇನೆ. ಹಿಂದೆ 7 ಜನ ಎಂಇಎಸ್ ಕಿಡಿಗೇಡಿಗಳು ಶಾಸಕರಾಗಿ ಆಯ್ಕೆಯಾಗಿ ಬರುತ್ತಿದ್ದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗೆಲ್ಲುತ್ತಿದ್ದರು. ಜಿ.ಪಂ., ತಾ.ಪಂ ಅವರ ಹಿಡಿತದಲ್ಲಿದ್ದವು. ಕನ್ನಡ ಬಾವುಟ ಹಾರಿಸದ ಸ್ಥಿತಿಯಿತ್ತು. ಆದರೆ, ಅವರನ್ನು ನಮ್ಮ ಕನ್ನಡಿಗರು ಬಗ್ಗು ಬಡಿದಿದ್ದಾರೆ. ಹಾಗಾಗಿ, ಇಂಥ ಉದ್ಧಟತನಕ್ಕೆ ನಾವು ಹೆದರುವುದಿಲ್ಲ. ಯಾಕೆಂದರೆ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹುಟ್ಟಿದ ಪುಣ್ಯಭೂಮಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ (ETV Bharat)

ಒಂದಿಂಚು ಜಾಗ ಕಬಳಿಸಲು ಸಾಧ್ಯವಿಲ್ಲ :"ಎಂಇಎಸ್ ಬೇರುಗಳನ್ನು ಈಗಾಗಲೇ ಕತ್ತರಿಸಿದ್ದೇವೆ. ಅದಕ್ಕಾಗಿ ಅಮಾಯಕ ಕನ್ನಡಿಗನ ಮೇಲೆ ದೌರ್ಜನ್ಯ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ನಾನು ಬೆಳಗಾವಿಗೆ ಬರುತ್ತಿದ್ದೇನೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಬೆಳಗಾವಿಯನ್ನು ನಿಮ್ಮ ಕೈಯಿಂದ ಏನೂ ಮಾಡಲು ಆಗೋದಿಲ್ಲ. ಒಂದಿಂಚು ಜಾಗ ಕಬಳಿಸಲು ನಿಮಗೆ ಸಾಧ್ಯವಿಲ್ಲ" ಎಂದು ಎಚ್ಚರಿಕೆ ರವಾನಿಸಿದರು.

"ಎಂಇಎಸ್ ಬೆನ್ನಿಗೆ ಬೆಳಗಾವಿ ರಾಜಕಾರಣಿಗಳು ನಿಂತಿದ್ದಾರೆ. ಕನ್ನಡಿಗರನ್ನು ಮರೆತು ಭ್ರಷ್ಟ ರಾಜಕಾಣಿಗಳು
ರಣಹೇಡಿಗಳಂತೆ ಅವರನ್ನು ಬೆಂಬಲಿಸುತ್ತಿದ್ದಾರೆ. ಇವರ ರಾಜಕೀಯ ಪ್ರಭಾವದಿಂದ ರಾತ್ರೋರಾತ್ರಿ ಕಂಡಕ್ಟರ್ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಕರ್ನಾಟಕದ ಬೆಳಗಾವಿಯಲ್ಲಿ ನೀವು ಕೆಲಸ ಮಾಡುತ್ತಿದ್ದಿರೋ ಅಥವಾ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದಿರೋ" ಎಂದು ಬೆಳಗಾವಿ ಪೊಲೀಸರ ವಿರುದ್ಧ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ಮರಾಠಿ ಪ್ರೇಮ ಮಹಾರಾಷ್ಟ್ರಕ್ಕೆ ಹೋಗಿ ತೋರಿಸಿ :"ಅಪ್ಪಟ ಚನ್ನವ್ವನ ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡಿದರೆ ನಿಮಗೆ ಯಾಕೆ ಉರಿಯುತ್ತದೆ?. ಯಾಕೆ ಹಲ್ಲೆ ಮಾಡಿದ್ದೀರಿ? ಮರಾಠಿ ಪ್ರೇಮ ಇದ್ದರೆ ಮಹಾರಾಷ್ಟ್ರಕ್ಕೆ ಹೋಗಿ ತೋರಿಸಿ. ಕರ್ನಾಟಕದಲ್ಲಿ ಕನ್ನಡಿಗ, ಕನ್ನಡ ಭಾಷೆಯೇ ಸಾರ್ವಭೌಮವೇ ಹೊರತು ಮರಾಠಿ, ಮರಾಠಿಗ ಅಲ್ಲ. ನೀವು ಅತಿಥಿ ಅಷ್ಟೇ" ಎಂದು ನಾರಾಯಣಗೌಡ ಹರಿಹಾಯ್ದರು.

ಬೆಳಗಾವಿಯಲ್ಲಿ ಕನ್ನಡ ಕಲಿತು, ಕನ್ನಡ ಮಾತನಾಡುತ್ತಾ ಮರಾಠಿಗರು ಇರಬೇಕು. ನಾನು ಬೆಳಗಾವಿಗೆ ಬರುವಷ್ಟರಲ್ಲಿ ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ವಾಪಸ್​ ಪಡೆಯಬೇಕು. ನನ್ನ ನಾಡಿನಲ್ಲಿ ನನ್ನ ಕನ್ನಡಿಗನ ಮೇಲೆ ನಡೆದ ದಬ್ಬಾಳಿಕೆಯನ್ನು ತಡೆಯುವ ಕೆಲಸ ನಾವು ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ : ಕರ್ನಾಟಕ-ಮಹಾರಾಷ್ಟ್ರ ಬಸ್ ಸಂಚಾರ ಸ್ಥಗಿತ

ಇದನ್ನೂ ಓದಿ:ಕಂಡಕ್ಟರ್​ ಮೇಲೆ ಹಲ್ಲೆ ಪ್ರಕರಣ : ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುವ ಬಸ್​ಗಳ ಸಂಖ್ಯೆ ಕಡಿಮೆ

ABOUT THE AUTHOR

...view details