ಕರ್ನಾಟಕ

karnataka

ಹೆಚ್ಚಿದ ಮಳೆಯಿಂದ ಜಲಾಶಯಗಳಿಗೆ ಜೀವಕಳೆ: ಕಬಿನಿ ಡ್ಯಾಂ ಬಹುತೇಕ ಭರ್ತಿ, ನದಿಗೆ ಇಳಿಯದಂತೆ ಜನರಿಗೆ ಎಚ್ಚರಿಕೆ - Karnataka Rain

By ETV Bharat Karnataka Team

Published : Jul 18, 2024, 1:34 PM IST

Updated : Jul 18, 2024, 4:19 PM IST

ರಾಜ್ಯದ ಹಲವೆಡೆ ಮಳೆ ಮುಂದುವರೆದಿದೆ. ಪರಿಣಾಮ ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಭರ್ತಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿನ ನದಿ ಹಾಗೂ ಹಳ್ಳ-ಕೊಳ್ಳಗಳು ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಾಗಾಗಿ ನದಿಗೆ ಇಳಿಯದಂತೆ ಮೀನುಗಾರರು ಮತ್ತು ಜನರಿಗೆ ಎಚ್ಚರಿಕೆ ನೀಡಲಾಗಿದೆ.

KARNATAKA RAIN
ಕಬಿನಿ ಜಲಾಶಯ (ETV Bharat)

ಮೈಸೂರು: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಹೆಚ್.ಡಿ. ಕೋಟೆ ತಾಲೂಕಿನ ಬಿಚ್ಚನಹಳ್ಳಿ ಬಳಿಯ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಅಣ್ಣೆಕಟ್ಟೆಯಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಹಾಗಾಗಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ತಿಳಿಸಿದೆ.

ಕೇರಳದ ವಯಾನಾಡಿನಲ್ಲಿ ಕಳೆದ 4 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಬರುತ್ತಿದೆ. ಪರಿಣಾಮ 84 ಅಡಿ ಸಾಮರ್ಥ್ಯದ ಕಬಿನಿ ಜಲಾಶಯ ಬಹುತೇಕು ಭರ್ತಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 50 ಸಾವಿರ ಕ್ಯೂಸೆಕ್​ಗೂ ಹೆಚ್ಚಿನ ನೀರನ್ನು ಕಪಿಲಾ ನದಿಗೆ ಬಿಡಲಾಗುತ್ತಿದೆ. ಈ ಹಿನ್ನೆಲೆ ಹೆಚ್.ಡಿ.ಕೋಟೆ ತಾಲೂಕಿನ ಚೆಕ್ಕೂರು ಗ್ರಾಮದ ಮಾರ್ಗವಾಗಿ, ಕೆ.ಬೆಳ್ತೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ತಾಲೂಕಿನ ತುಂಬುಸೋಗೆ ಸೇತುವೆ ಮುಳುಗಡೆಯಾಗಿದೆ. ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಜತೆಗೆ ದಕ್ಷಿಣ ಕಾಶಿ ನಂಜನಗೂಡಿನ ಬಳಿಯ ಸ್ನಾನಘಟ್ಟ ಕೂಡ ಸಂಪೂರ್ಣ ಮುಳುಗಡೆಯಾಗಿದ್ದು, ಭಕ್ತರು ಪುಣ್ಯಸ್ನಾನಕ್ಕಾಗಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ನಂಜನಗೂಡಿನ ಸಂಚಾರಿ ಪೊಲೀಸರು ಬ್ಯಾರಿಕೇಡ್‌ ಹಾಕಿ, ಮೈಕ್​ಗಳ ಮೂಲಕ ಜನರಿಗೆ ಎಚ್ಚರಿಕೆ ಸಂದೇಶ ನೀಡುತ್ತಿದ್ದಾರೆ. ಇನ್ನೂ 3-4 ದಿನ ಮಳೆ ಹೀಗೆಯೇ ಮುಂದುವರೆಯಲಿದ್ದು, ಕಬಿನಿ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ. ಆದ್ದರಿಂದ ನದಿ ಪಾತ್ರದ ಜನರು ಸುರಕ್ಷಿತವಾಗಿ ಇರುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ.

ಎಚ್ಚರಿಕೆ ಫಲಕ (ETV Bharat)

113 ಅಡಿ ದಾಟಿದ ಕೆಆರ್​ಎಸ್​ ನೀರಿನ ಮಟ್ಟ:ಕನ್ನಡ ನಾಡಿನ ಜೀವನದಿ ಕಾವೇರಿ ನದಿಗೆ ಕಟ್ಟಲಾದ ನಾಡಿನ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕೆಆರ್​​ಎಸ್​ ಜಲಾಶಯದ ಗರಿಷ್ಠ ಮಟ್ಟ 124 ಅಡಿಯಾಗಿದ್ದು, ಜಲಾಶಯಕ್ಕೆ 36,772 ಕ್ಯೂಸೆಕ್​​ ನೀರು ಒಳ ಹರಿವು ಬರುತ್ತಿದೆ. ಇದರಿಂದ ಜಲಾಶಯದ ಇಂದಿನ ಮಟ್ಟ 113 ಅಡಿಗೆ ತಲುಪಿದೆ. ಜಲಾಶಯ ತುಂಬಲು ಕೇವಲ 13 ಅಡಿ ಬಾಕಿ ಇದೆ. ಮಂಡ್ಯ, ಮೈಸೂರು ಸೇರಿದಂತೆ ಕಾವೇರಿ ಪ್ರದೇಶದ ಜನರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ಸಿಎಂ ಬಾಗಿನಕ್ಕೆ ಸಿದ್ಧತೆ:ಕಬಿನಿ ಹಾಗೂ ಕೆಆರ್​ಎಸ್​ ಜಲಾಶಯ ಇನ್ನೊಂದು ವಾರದಲ್ಲಿ ಬಹುತೇಕ ಸಂಪೂರ್ಣ ಭರ್ತಿಯಾಗಲಿವೆ. ಈ ಹಿನ್ನೆಲೆ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದ ಬಾಗಿನ ಅರ್ಪಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೆಚ್.ಡಿ.ಕೋಟೆ ಕಾಂಗ್ರೆಸ್‌ ಶಾಸಕ ಅನಿಲ್‌ ಚಿಕ್ಕಮಾದು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಶೀಘ್ರವೇ ಬಾಗಿನ ಅರ್ಪಿಸುವ ದಿನಾಂಕ ಪ್ರಕಟಿಸಲಾಗುವುದು ಎಂದು ಸಹ ತಿಳಿಸಿದ್ದಾರೆ.

ಎಚ್ಚರಿಕೆ ಫಲಕ (ETV Bharat)

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು: ಮಲೆನಾಡು ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ನದಿ, ಹಳ್ಳ-ಕೊಳ್ಳಗಳು ಭರ್ತಿಯಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಅಣೆಕಟ್ಟೆ, ಜಲಪಾತ ಮತ್ತು ನದಿಗಳಿಗೆ ಇಳಿಯುವುದು, ಈಜಾಡುವುದು ಮತ್ತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಈ ರೀತಿಯ ಅಪಾಯಕಾರಿ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಭೇಟಿಯನ್ನು ನೀರಿನ ಹರಿವು ಕಡಿಮೆಯಾಗುವವರೆಗೂ ಸಂಬಂಧಪಟ್ಟ ಇಲಾಖೆಗಳಿಂದ ನಿಷೇಧಿಸಲಾಗಿರುತ್ತದೆ.

ಈ ಬಗ್ಗೆ ಈಗಾಗಲೇ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸೂಚನಾ ಫಲಕಗಳನ್ನು ಅಳವಡಿಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ನೀರಿನ ಹರಿವು ಕಡಿಮೆಯಾಗುವವರೆಗೆ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡದೇ ಸಹಕರಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ 112 ಸಹಾಯವಾಣಿಗೆ ಕರೆ ಮಾಡಲು ಕೋರಿದೆ.

ಇದನ್ನೂ ಓದಿ:ಶಿರೂರು ಗುಡ್ಡ ತೆರವು ಕಾರ್ಯಾಚರಣೆ: ನಾಪತ್ತೆಯಾದ 6 ಮಂದಿಗೆ ತೀವ್ರ ಶೋಧ, ಮತ್ತಷ್ಟು ಬಾಯ್ತೆರೆದ ಗುಡ್ಡ - Shirur Hill Collapse Operation

Last Updated : Jul 18, 2024, 4:19 PM IST

ABOUT THE AUTHOR

...view details