ಕರ್ನಾಟಕ

karnataka

ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿರೋಧಿಸಿ ಜೆಡಿಎಸ್‌ - ಬಿಜೆಪಿ ಪ್ರತಿಭಟನೆ: ಬಜೆಟ್​ನಲ್ಲಿ ರಾಜ್ಯಕ್ಕೆ ಅನ್ಯಾಯ ಎಂದು ಕಾಂಗ್ರೆಸ್​ ಕಿಡಿ - protest in Ramanagara

By ETV Bharat Karnataka Team

Published : Jul 27, 2024, 10:23 PM IST

ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿದ ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಜೆಡಿಎಸ್‌ ಹಾಗೂ ಬಿಜೆಪಿ ಮುಖಂಡರು ಪ್ರತಿಭಟಿಸಿದ್ದರೆ. ಮತ್ತೊಂದೆಡೆ, ಕೇಂದ್ರ ಬಜೆಟ್​ನಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಕಾಂಗ್ರೆಸ್​ ಪ್ರತಿಭಟಿಸಿದೆ.

ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿರೋಧಿಸಿ ಜೆಡಿಎಸ್‌ - ಬಿಜೆಪಿ ಪ್ರತಿಭಟನೆ
ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿರೋಧಿಸಿ ಜೆಡಿಎಸ್‌ - ಬಿಜೆಪಿ ಪ್ರತಿಭಟನೆ (ETV Bharat)

ರಾಮನಗರ:ರೇಷ್ಮೆನಗರಿ ರಾಮನಗರದಲ್ಲಿ ಇಂದು ಪ್ರತಿಭಟನೆಗಳ ಪರ್ವ‌. ಒಂದೆಡೆ ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಬದಲಾವಣೆ ಮಾಡಿರುವುದನ್ನು ವಿರೋಧಿಸಿ ಜೆಡಿಎಸ್‌ ಹಾಗೂ ಬಿಜೆಪಿ ಮುಖಂಡರು ಪ್ರತಿಭಟಿಸಿದ್ದರೆ. ಮತ್ತೊಂದೆಡೆ, ಕೇಂದ್ರ ಬಜೆಟ್​ನಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಕಾಂಗ್ರೆಸ್​ ಪ್ರತಿಭಟಿಸಿದೆ.

ರಾಮನಗರ ಹೆಸರು ಬದಲಾವಣೆಗೆ ಸಂಪುಟ ಅನುಮೋದನೆಯನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದರು. ರಾಮನಗರದ ಐಜೂರು ವೃತ್ತದ ಬಳಿ‌ ಹಿಂದೂ ಜಾಗರಣ ವೇದಿಕೆ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಜಂಟಿಯಾಗಿ ಪ್ರತಿಭಟನೆ ನಡೆಸಿಯಿತು.

ಈ ವೇಳೆ ಮಾತನಾಡಿದ ಅವರು, ರಾಮನಗರ ಅಂದಾಗ ರಾಮನ ಪಾದಸ್ಪರ್ಶದ ಪುಣ್ಯಕ್ಷೇತ್ರ. ರಾಜಕೀಯ ಉದ್ದೇಶಕ್ಕೆ ಹೆಸರು ಬದಲಾವಣೆ ಮಾಡಲಾಗುತ್ತಿದೆ. ರಾಮನಗರ ಜಿಲ್ಲೆ ಸ್ಥಾಪನೆ ಆದಾಗಾ ಯಾರೂ ಇದಕ್ಕೆ ಚಕಾರ ಎತ್ತಲಿಲ್ಲ. ರಾಮನಗರ ಹೆಸರಿಗೆ ಯಾರೂ ವಿರೋಧ ಮಾಡಲಿಲ್ಲ. ಆದರೆ ಇವತ್ತು ಬ್ರ್ಯಾಂಡ್​ ಬೆಂಗಳೂರು ಹೆಸರಲ್ಲಿ ರಾಮನಗರ ಇತಿಹಾಸ ಅಳಿಸುವ ಕೆಲಸ ಆಗುತ್ತಿದೆ. ಜಿಲ್ಲೆಯ ಜನತೆ ಇದರ ವಿರುದ್ಧವಾಗಿದ್ದಾರೆ. ಹೆಸರು ಬದಲಾವಣೆ ಆದರೆ ಜನರಿಗೆ ಸಾಕಷ್ಟು ಸಮಸ್ಯೆ ಆಗಲಿದೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ರೆವೆನ್ಯೂ ದಾಖಲಾತಿ ಬದಲಾವಣೆ ಮಾಡಬೇಕು. ಸಾಕಷ್ಟು ಟೆಕ್ನಿಕಲ್ ಸಮಸ್ಯೆಗಳು ಎದುರಾಗುತ್ತವೆ. ಜನತೆ ನಿತ್ಯ ತಾಲೂಕು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗುತ್ತದೆ. ಈ ಬಗ್ಗೆ ದೊಡ್ಡಮಟ್ಟದ ಹೋರಾಟಕ್ಕೆ ಚರ್ಚೆ ಮಾಡ್ತಿದ್ದೇವೆ. ನಾಳೆ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡುತ್ತೇವೆ. ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಹೆಸರು ಬದಲಾವಣೆಗೆ ಹಾಸನದವರು ವಿರೋಧ ಎಂಬ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ವಿಚಾರವಾಗಿ ಮಾತನಾಡಿ, ಜನರ ಅಭಿಪ್ರಾಯ ತಿಳಿಯದೇ ಏಕಾಏಕಿ ಆದೇಶ ಮಾಡೋದು ಸರಿಯಲ್ಲ. ಈ ಬಗ್ಗೆ ರಾಮನಗರದ ಟೋಕನ್ ಶಾಸಕರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಗಾಳಿಯಲ್ಲಿ ಗುಂಡುಹೊಡೆಯೋದು ಬಿಟ್ಟು ಮೊದಲು ಜನರ ಕೆಲಸ ಮಾಡಲಿ ಎಂದು ಶಾಸಕ ಇಕ್ಬಾಲ್ ಹುಸೇನ್​ಗೆ ತಿರುಗೇಟು ನೀಡಿದರು.

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಮತ್ತೊಂದೆಡೆ ನಗರದ ಐಜೂರು ವೃತ್ತದ ಬಳಿ ಕೇಂದ್ರ ಬಜೆಟ್​ನಲ್ಲಿ ರಾಜ್ಯಕ್ಕೆ ಶೂನ್ಯ ಕೊಡುಗೆ ಎಂದು ಆರೋಪಿಸಿ ರಾಮನಗರ ಜಿಲ್ಲಾ ಯುವ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಯಿತು. ರಾಮನಗರ ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ‌ಚೊಂಬು ಪ್ರದರ್ಶಿಸಿ ರಾಜ್ಯಕ್ಕೆ ಬೊಂಬು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ‌. ಕರ್ನಾಟಕಕ್ಕೆ ಕೇಂದ್ರ ಬಜೆಟ್​ನಲ್ಲಿ ಯಾವುದೇ ಯೋಜನೆ ನೀಡಿಲ್ಲವೆಂದು ಕಿಡಿಕಾರಿದರು.

ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ರವರು ಈ ಬಗ್ಗೆ ಧ್ವನಿ ಎತ್ತಬೇಕು. ಮೋದಿ ಎದುರು ಮಾತನಾಡುವ ಧೈರ್ಯ ಯಾರಿಗೂ ಇಲ್ಲ. ಸಂಸದರಿಗೆ ಅವರೆದುರು ಪ್ರಶ್ನೆ ಮಾಡಲು ಆಗಲ್ಲ. ಇದಲ್ಲದೆ ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೆಚ್​ಡಿಕೆ ವಿರೋಧ ವ್ಯಕ್ತಪಡಿಸುತ್ತಾರೆ. ಅವರು ಹೊರಗಿನ ಜಿಲ್ಲೆಯರವರು. ಹಾಗಾಗಿ ಅವರಿಗೆ ಇದರ ಬಗ್ಗೆ ಗೊತ್ತಾಗಲ್ಲ. ರಾಮನಗರ ಜಿಲ್ಲೆಯಾಗಿ ಎಷ್ಟು ವರ್ಷ ಆಯಿತು. ಯಾವ ಅಭಿವೃದ್ಧಿ ಕಂಡಿದೆ ಅವರು ಹೇಳಲಿ. ಈಗ ನಾವು ಅಭಿವೃದ್ಧಿ ಮಾಡಿ ತೋರಿಸುತ್ತೇವೆ. ನಾವು ಇದೇ ಜಿಲ್ಲೆಯವರು, ನಮಗೆ ಈ ಜಿಲ್ಲೆಯ ಮಾಹಿತಿ ಇದೆ. ಹೊರಗಿನವರಿಗೆ ಮಾಹಿತಿ ಇಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್‌ ಕೊಟ್ಟರು.

ಇದನ್ನೂ ಓದಿ:ನೈಸ್ ರಸ್ತೆ ಹೆಮ್ಮಿಗೆಪುರ ಬಳಿ ಸರ್ಕಾರದಿಂದಲೇ ವೀಕ್ಷಣಾ ಗೋಪುರ ನಿರ್ಮಿಸಲು ತೀರ್ಮಾನ: ಡಿಕೆಶಿ - Construction of Sky Deck by Govt

ABOUT THE AUTHOR

...view details