ಕರ್ನಾಟಕ

karnataka

ETV Bharat / state

ಮನೆಯಿಂದ ಮತದಾನ ಆಯ್ದುಕೊಂಡರೆ ಮತಗಟ್ಟೆಯಲ್ಲಿ ಅವಕಾಶ ಸಿಗದು: ಮುಲ್ಲೈ ಮುಗಿಲನ್ - vote from home

"ಮನೆಯಿಂದಲೇ ಮತದಾನ ಆಯ್ದುಕೊಂಡು, ಚುನಾವಣಾ ಅಧಿಕಾರಿ, ಸಿಬ್ಬಂದಿ ಬರುವ ವೇಳೆ ನೀವು ಲಭ್ಯವಿಲ್ಲದೇ ಹೋದಲ್ಲಿ, ಮತ್ತೆ ಮತಗಟ್ಟೆಯಲ್ಲಿ ಮತದಾನ ಮಾಡುವ ಅವಕಾಶ ಇರುವುದಿಲ್ಲ" ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟಪಡಿಸಿದ್ದಾರೆ.

By ETV Bharat Karnataka Team

Published : Mar 27, 2024, 7:34 PM IST

DC Mullai Mugilan Meeting
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಭೆ

ಮಂಗಳೂರು: "ಈ ಬಾರಿಯೂ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ (ಶೇ. 40ಕ್ಕಿಂತ ಹೆಚ್ಚಿನ ವಿಕಲಚೇತನರಿಗೆ) ಮನೆಯಿಂದಲೇ ಮತದಾನ ಮಾಡುವ ಅವಕಾಶವಿದೆ. ಮನೆಯಿಂದ ಮತದಾನ ಆಯ್ದುಕೊಂಡರೆ ಮತಗಟ್ಟೆಯಲ್ಲಿ ಅವಕಾಶ ಸಿಗದು" ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿ ಮತದಾನ ಮಾಡಲು ಆಯ್ದುಕೊಂಡಲ್ಲಿ ಅವರ ಮನೆಗಳಿಗೆ ಸಂಬಂಧಪಟ್ಟ ಚುನಾವಣಾ ಅಧಿಕಾರಿ ಹಾಗೂ ಸಿಬ್ಬಂದಿ ಎರಡು ಬಾರಿ ಭೇಟಿ ನೀಡಿ ಮತದಾನ ಪ್ರಕ್ರಿಯೆ ನಡೆಸಲಿದ್ದಾರೆ. ಈ ರೀತಿ ಮನೆಯಿಂದಲೇ ಮತದಾನ ಆಯ್ಕೆ ಮಾಡುವವರಿಗೆ ನಿಗದಿತ ದಿನಾಂಕವನ್ನು ನೀಡಲಾಗುತ್ತದೆ. ಆ ರೀತಿ ಎರಡು ಸಂದರ್ಭಗಳಲ್ಲಿ ಮತದಾರರು ಲಭ್ಯವಿಲ್ಲದಿದ್ದರೆ ಅವರು ಮತ್ತೆ ಮತಗಟ್ಟೆಗೆ ಬಂದು ಮತದಾನ ಪಡೆಯುವ ಅರ್ಹತೆ ಹೊಂದಿರುವುದಿಲ್ಲ" ಎಂದು ಹೇಳಿದರು.

'ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ವೇಳಾಪಟ್ಟಿಯಂತೆ 2024ನೇ ಸಾಲಿನ ಲೋಕಸಭಾ ಚುನಾವಣೆಗೆ ದ.ಕ. ಜಿಲ್ಲೆಯಲ್ಲಿ ಮಾ.28 ರಿಂದ ಏಪ್ರಿಲ್​ 4 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮಾರ್ಚ್​ 29 ಹಾಗೂ 31ರಂದು ಸರಕಾರಿ ರಜಾ ದಿನ ಆಗಿರುವ ಕಾರಣ ಆ ದಿನಗಳಂದು ನಾಮಪತ್ರ ಸಲ್ಲಿಸಲು ಅವಕಾಶವಿಲ್ಲ. ಉಳಿದ ದಿನಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿಯ ಮೂರನೇ ಮಹಡಿಯ ಕೋರ್ಟ್ ಹಾಲ್‌ನಲ್ಲಿ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ (ಆರ್​ಒ) ಅಥವಾ ಎಆರ್​ಒ (ಅಪರ ಜಿಲ್ಲಾಧಿಕಾರಿ)ಗೆ ನಾಮಪತ್ರ ಸಲ್ಲಿಸಬಹುದು" ಎಂದರು.

"ಚುನಾವಣೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿಯು ರಾಷ್ಟ್ರೀಯ ಅಥವಾ ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದಿರುವ ಪಕ್ಷದಿಂದ ಸ್ಪರ್ಧಿಸುತ್ತಿದ್ದರೆ, ಕ್ಷೇತ್ರದ ಒಬ್ಬ ಮತದಾರ ಸೂಚಕನಾಗಿ ಸಹಿ ಮಾಡಿರಬೇಕು. ಮಾನ್ಯತೆ ಪಡೆಯದ ರಾಜಕೀಯ ಪಕ್ಷದಿಂದ ಸ್ಪರ್ಧಿಸುತ್ತಿದ್ದರೆ, ಕ್ಷೇತ್ರದ ಹತ್ತು ಮತದಾರರು ಸೂಚಕರಾಗಿ ಸಹಿ ಮಾಡಿರಬೇಕು. ನಾಮಪತ್ರ ಸಲ್ಲಿಕೆಯ ಸಂದರ್ಭ ಚುನಾವಣಾಧಿಕಾರಿ ಕಚೇರಿಯ ನೂರು ಮೀಟರ್ ವ್ಯಾಪ್ತಿಯೊಳಗೆ ಮೂರು ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶವಿದೆ. ಆರ್​ಒ ಕೊಠಡಿಗೆ ಅಭ್ಯರ್ಥಿ ಸೇರಿ ಐದು ಮಂದಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಬಹುದು."

"ನಾಮಪತ್ರದ ಜತೆ ಅಭ್ಯರ್ಥಿ ಫಾರಂ 26ರಲ್ಲಿ ತನ್ನ ವೈಯಕ್ತಿಕ ವಿವರವನ್ನು ಅಫಿಡವಿಟ್​​ನೊಂದಿಗೆ ಒದಗಿಸಬೇಕು. ಯಾವುದೇ ಕಾಲಂ ಖಾಲಿ ಬಿಡುವಂತಿಲ್ಲ. ಜತೆಗೆ ಯಾವುದೇ ಸರಕಾರಿ ಲೆಕ್ಕ ಶೀರ್ಷಿಕೆ ಬಾಕಿ ಇಲ್ಲ ಎಂಬ ಪ್ರಮಾಣಪತ್ರವನ್ನು ನೀಡಬೇಕು. ಅಭ್ಯರ್ಥಿ ನಾಮಪತ್ರ ಸಲ್ಲಿಕೆಯ ಸಮಯದಿಂದಲೇ ಆತನ ಚುನಾವಣಾ ಖರ್ಚು ವೆಚ್ಚಗಳು ಲೆಕ್ಕಾಚಾರ ಆರಂಭವಾಗಲಿದ್ದು, ಒಂದೇ ಬ್ಯಾಕ್ ಖಾತೆಯ ಮೂಲಕ ಎಲ್ಲಾ ರೀತಿಯ ಆರ್ಥಿಕ ವ್ಯವಹಾರವನ್ನು ನಿರ್ವಹಿಸಬೇಕು" ಎಂದು ಜಿಲ್ಲಾಧಿಕಾರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಮತದಾನ ಜಾಗೃತಿ: ವಿಶೇಷ ಚೇತನರ ಬೈಕ್​ ಜಾಥಾಕ್ಕೆ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಚಾಲನೆ - Voter Awareness Jatha

ABOUT THE AUTHOR

...view details